ಕಾವ್ಯದ ಓದು ಯುವಜನತೆಯ ಭವಿಷ್ಯದ ಬೆಳಕು-ಡಾ.ಸಿ.ಎ.ರಮೇಶ್

ಕೋಲಾರ:- ಕಾವ್ಯದ ಓದು ಯುವಜನತೆಯ ಭವಿಷ್ಯವನ್ನು ರೂಪಿಸುವ ಬೆಳಕು ಎಂದು ಕೋಲಾರದಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಎ.ರಮೇಶ್ ಅಭಿಪ್ರಾಯಪಟ್ಟರು.
ಅವರು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗವು ಆಯೋಜಿಸಿದ್ದ ಹೊಸಗನ್ನಡ ಕಾವ್ಯದಲ್ಲಿ ಹಲವು ಕನ್ನಡಂಗಳ್ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹೊಸಗನ್ನಡ ಕಾವ್ಯವು ವೈವಿಧ್ಯದಿಂದ ಕೂಡಿದ್ದು ನವೋದಯ, ನವ್ಯ, ಸಮನ್ವಯ, ದÀಲಿತ ಹೀಗೆ ವಿವಿಧ ಪರಂಪರೆಗಳಲ್ಲಿನ ಹಲವು ಕನ್ನಡಂಗಳ್ ಕಾವ್ಯದ ಸೊಬಗಿಗೆ ಕಾರಣವಾಗಿವೆ. ಇಂದಿನ ಯುವಜನರು ಕಾವ್ಯಾಭ್ಯಾಸದಿಂದ ಸೂಕ್ಷ್ಮತೆಯನ್ನು ಗಳಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡದ ಹಲವು ಬಗೆಗಳು ಕುವೆಂಪು, ಬೇಂದ್ರೆ, ಅಡಿಗ, ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹಮದ್, ಸು.ರಂ.ಎಕ್ಕುಂಡಿ, ಸಿದ್ಧಲಿಂಗಯ್ಯ, ಕೆ.ವಿ.ತಿರುಮಲೇಶ್‍ರಾದಿಯಾಗಿ ಅನೇಕ ಕಾವ್ಯಗಳಲ್ಲಿ ಅಭಿವ್ಯಕ್ತಗೊಂಡಿದೆ. ಸ್ಥಳೀಯ ಅನನ್ಯತೆಯುಳ್ಳ ಪದಗಳು ಕಾವ್ಯ ಪರಂಪರೆಗೆ ಗಟ್ಟಿತನ ತಂದುಕೊಟ್ಟಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳುಗಳನ್ನೊಳಗೊಂಡ ದ್ರಾವಿಡ ಭಾಷಾ ಕಾವ್ಯರಂಪರೆಯು ಇಂತಹಾ ವೈವಿಧ್ಯದಿಂದಾಗಿಯೇ ಅನನ್ಯವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎ.ಕೆ.ವೇಣುಗೋಪಾಲ ರೆಡ್ಡಿಯವರು ಕನ್ನಡ ವಿಭಾಗದ ಈ ಸರಣಿ ಉಪನ್ಯಾಸಗಳು ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ಇಂತಹಾ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಮ್ಮ ಸಂದೇಶದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾಷಾ ನಿಕಾಯದ ಡೀನ್ ಆದ ಡಾ.ಬಿ.ಎಸ್.ಶಿವಕುಮಾರ್ ಅವರು ಈ ವಿಶೇಷ ಉಪನ್ಯಾಸವು ದ್ರಾವಿಡ ಕವಿತ್ವದ ತೌಲನಿಕ ಅಧ್ಯಯನಕ್ಕೆ ಸಹಕಾರಿ, ಕಾವ್ಯಬಂಧದ ಒಳಹರಿವನ್ನು ನಾವಿಲ್ಲಿ ಕಾಣಬಹುದು ಎಂದು ನುಡಿದರು.
ಕಾರ್ಯಕ್ರಮದ ಆಯೋಜಕರಾದ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಎಸ್.ದುರ್ಗಾಪ್ರವೀಣ್ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿಭಾಗವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಇಂದು ಈ ಮಹತ್ವದ ಸರಣಿಯಲ್ಲಿವಿವಿದೆಡೆಗಳ ವಿದ್ಯಾರ್ಥಿಗಳು ಆನ್ ಲೈನ್ ಮೂಲಕವೂ ಪಾಲ್ಗೊಳ್ಳಬಹುದಾಗಿದೆ, ವಿದ್ವಾಂಸರೊಂದಿಗೆ ಸಂವಾದ ಮಾಡಬಹುದಾಗಿದೆ, ಮುಂದಿನ ದಿನಗಳಲ್ಲಿ ಈ ಉಪನ್ಯಾಸಗಳು ಯೂಟ್ಯೂಬ್ ಮೂಲಕವೂ ಲಭ್ಯವಾಗಲಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಪ್ರೊ.ಜಯಲಲಿತ ಅವರು, ಎಂ.ಎ., ಪಿಎಚ್.ಡಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.ಸ್ವಾತಿ ಜಿ. ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಮಾದೇಶಿ ವಿ.ಬಿ. ಅತಿಥಿಗಳನ್ನು ಪರಿಚಯಿಸಿ, ವ್ಯಾಸರಾವ್ ಜಿ.ಎಸ್.ನಿರೂಪಿಸಿ, ಮೇಘ ಟಿ.ಎನ್ ವಂದಿಸಿದರು.