ಶ್ರೀನಿವಾಸಪುರ:ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಪುರಸಭೆ ಆವರಣದಲ್ಲಿನ ದಾಖಲಾತಿ ಕೇಂದ್ರಗಳ ಪ್ರಯೋಜನ ಪಡೆಯಿರಿ

ಶ್ರೀನಿವಾಸಪುರ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಪಟ್ಟಣದ ಪುರಸಭೆ ಆವರಣದಲ್ಲಿ ಸ್ಥಾಪಿಸಲಾಗಿರುವ ಎರಡು ದಾಖಲಾತಿ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪುರಸಭೆ ಕಂದಾಯ ಅಧಿಕಾರಿ ವಿ.ನಾಗರಾಜ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗ್ಯಲಕ್ಷಿ ಯೋಜನೆ ಫಲಾನುಭವಿಗಳಿಗೆ, ಫಲಾನುಭವಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಯೋಜನೆ ಲಾಭ ಪಡೆಯುವ ಉದ್ದೇಶದಿಂದ ಎಲ್ಲ ಬ್ರೌಸಿಂಗ್ ಕೇಂದ್ರಗಳ ಮುಂದೆ ಮಹಿಳೆಯರು ಜಾತ್ರೆಯಂತೆ ನೆರೆದಿದ್ದಾರೆ. ದಟ್ಟಣೆ ತಪ್ಪಿಸುವುದಕ್ಕಾಗಿಯೇ ಇಲ್ಲಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಫಲಾನುಭವಿಗಳು ತಲಾ ರೂ.12 ನೀಡಿ ಹೆಸರು ನೋಂದಾಯಿಸಬಹುದು. ನೋಂದಾವಣೆಗೆ ಕಾಲ ನಿಗದಿಪಡಿಸಿಲ್ಲ. ಹಾಗಾಗಿ ಫಲಾನುಭವಿಗಳು ಗಾಬರಿಗೊಳ್ಳದೆ ಸಾವಕಾಶವಾಗಿ ನೋಂದಾವಣೆ ಮಾಡಿಸಬೇಕು. ನೂಕುನುಗ್ಗಲಿಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಪುರಸಭೆ ಕಂದಾಯ ನಿರೀಕ್ಷಕ ಎನ್.ಶಂಕರ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಸಿಬ್ಬಂದಿ ಶ್ರೀನಾಥ್, ಕೀರ್ತನಾ ಇದ್ದರು.