ಎಂಐಟಿಕೆ ಮೂಡ್ಲಕಟ್ಟೆ : ಸಮಾಜಮುಖಿ ವಿದ್ಯಾರ್ಥಿ ಚಂದನ್ ಕುಮಾರ್

ಎಂಐಟಿ ಕುಂದಾಪುರದ ಇ ಎಂಡ್ ಸಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಚಂದನ್ ಕುಮಾರ್ ಸಿ.ಎನ್ ಓರ್ವ ಸಮಾಜಮುಖಿ ವಿದ್ಯಾರ್ಥಿಯಾಗಿದ್ದು ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ. ಕಲಿಕೆಯಲ್ಲಿ ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿರುವ ಇವರ ಸಾಮಾಜಿಕ ಕಳಕಳಿ ಪ್ರಶಂಸನೀಯ. ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಬಂದಾಗ ಚಂದನ್ ಕುಮಾರ್‍ರವರು ತುಂಬಾ ಖುಷಿಯಲ್ಲಿದ್ದರು. ವಿಚಾರಿಸಿದಾಗ ಗೊತ್ತಾಗಿದ್ದು ಏನೆಂದರೆ, ಅವರು ಬಿಡುವಿನ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಫಲಾಪೇಕ್ಷೆಯಿಲ್ಲದೆ ತರಗತಿಗಳನ್ನು ನಡೆಸಿದ್ದರು ಮತ್ತು ಆ ಮಕ್ಕಳಿಗೆ ಉತ್ತಮ ಅಂಕ ಬಂದಿರುವುದು ಇವರ ಖುಷಿಗೆ ಕಾರಣವಾಗಿತ್ತು. ಅವರ ಓದಿನಲ್ಲಿ ಯಾವ ಸಂಶಯಬಂದರೂ ಉತ್ತಮ ರೀತಿಯಲ್ಲಿ ಬಗೆಹರಿಸಿ ಉತ್ತಮ ಅಂಕ ಪಡೆಯಲು ಸಹಾಯ ಮಾಡಿರುತ್ತಾರೆ. ಅದಲ್ಲದೇ ಹಳ್ಳಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ತಿಳುವಳಿಯ ಪಾಠವನ್ನು ನಡೆಸಿರುತ್ತಾರೆ. ಹಳ್ಳಿಯ ಜನರಿಗೆ ಡಿಜಿಟಲ್ ಇಂಡಿಯಾದ ಅರಿವು ಮೂಡಿಸುವಲ್ಲಿಯೂ ಇವರು ಶ್ರಮ ವಹಿಸಿದ್ದಾರೆ. ನಮ್ಮ ಭೂಮಿ ಕುಂದಾಪುರರವರು ಹಮ್ಮಿಕೊಂಡ “ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ” ಅಭಿಯಾನದಲ್ಲಿಯೂ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ, ಅತ್ಯಂತ ಬುದ್ಧಿವಂತರಾಗಿರುವ ಇವರು ಐದಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಲ್ಲಿ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಆಯ್ಕೆ ಆಗಿರುತ್ತಾರೆ. ತಮ್ಮ ಕಾಲೇಜಾದ ಎಂಐಟಿಕೆಯ ಬಗ್ಗೆ ಹಾಗೂ ಭೋದಕ ವೃಂದದ ಬಗ್ಗೆ ಇವರಿಗೆ ಅಪಾರ ಹೆಮ್ಮೆ ಇದೆ. ಭವಿಷ್ಯದಲ್ಲಿ ಎಂಸ್ ಡಿಗ್ರಿಯನ್ನು ಪಡೆಯುವುದು ಇವರ ಹಂಬಲವಾಗಿದೆ. ಮುಂದೆಯು ಇವರು ಸಮಾಜಕ್ಕೆ ಇನ್ನಷ್ಟು ಉತ್ತಮ ಕೊಡುಗೆಯನ್ನು ನೀಡಲಿ ಎಂದು ಸಂಸ್ಥೆಯ ಪರವಾಗಿ ಹಾರೈಸುತ್ತೇವೆ.