ಹಿರಿಯ ರಾಜಕಾರಣಿ ಕೆ.ಎಚ್ ಮುನಿಯಪ್ಪ ಅವರು ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ -ಪ್ರಮಾಣ ವಚನ ಸ್ವೀಕಾರ

ಶ್ರೀನಿವಾಸಪುರ: ಕರ್ನಾಟಕ ರಾಜಕೀಯದ ಅತ್ಯಂತ ಹಿರಿಯ ರಾಜಕಾರಣಿಯಾದ ಕೆ.ಎಚ್ ಮುನಿಯಪ್ಪ ಅವರು ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು , ಇಂದು ( ಮೇ 20 ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೆ.ಎಚ್ ಮುನಿಯಪ್ಪ ಅವರು 07 ಮಾಚ್ 1948 ರಂದು ಕೋಲಾರ ಜಿಲ್ಲೆಯ ಕಂಬದಹಳ್ಳಿ ಶ್ರೀ ಹನುಮಪ್ಪ ಹಾಗೂ ಶ್ರೀಮತಿ ವೆಂಕಟಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ವೃತ್ತಿಯಲ್ಲಿ ವಕೀಲರಾಗಿರುವ ಕೆ.ಎಚ್ ಮುನಿಯಪ್ಪ ಸಮಾಜಿಕ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ನಾಗರತ್ನಮ್ಮ ಅವರನ್ನು ವಿವಾಹವಾಗಿರುವ ಕೆ.ಎಚ್ ಮುನಿಯಪ್ಪ ಅವರಿಗೆ ನಾಲ್ವರು ಪುತ್ರಿಯರು ಓರ್ವ ಪುತ್ರನಿದ್ದಾನೆ.

1960 ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಕೆ.ಎಚ್ ಮುನಿಯಪ್ಪ ಅವರು ಸುದೀರ್ಘ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಕೇಂದ್ರ ರಾಜಕೀಯದಲ್ಲಿ ಸೋಲಿಲ್ಲದ ಸರದಾರನಂತಿದ್ದ ಕೆ.ಎಚ್ ಮುನಿಯಪ್ಪ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರ ರಾಜಕೀಯ ತಂತ್ರಗಾರಿಕೆಗಳಿಂದ ಸೋಲನ್ನು ಅನುಭವಿಸಿದ್ದರು.