ಏ.30ರ ಸಮಾವೇಶಕ್ಕೆ ಸಕಲಸಿದ್ದತೆ-ಮೋದಿ ಹೆಸರಿಂದಲೇ ವಿರೋಧಿಗಳಲ್ಲಿ ನಡುಕ ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತದ ಮೂಲಕ ಬಿಜೆಪಿ ಭರ್ಜರಿ ಗೆಲುವು-ಮುನಿಸ್ವಾಮಿ

ಕೋಲಾರ:- ಸರ್ವವ್ಯಾಪಿ,ಸರ್ವಸ್ಪರ್ಶಿಯಾಗಿ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿರುವ ವಿಶ್ವವೇ ಮೆಚ್ಚುವ ನಾಯಕರಾದ ಪ್ರಧಾನಿ ಮೋದಿ ಹೆಸರೇ ವಿರೋಧಿಗಳಲ್ಲಿ ನಡುಕ ಹುಟ್ಟಿಸುತ್ತದೆ, ಕೋಲಾರಕ್ಕೆ ಅವರು ಬರುತ್ತಿರುವುದರಿಂದ ಇಲ್ಲಿನ ಪಕ್ಷದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸುನಾಮಿ ಅಪ್ಪಳಿಸಿ, ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಬುಧವಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಕೆಂದಟ್ಟಿ ಸಮೀಪ ಏ.30ರ ಪ್ರಧಾನಿಯವರ ರ್ಯಾಲಿಯ ಪೂರ್ವಸಿದ್ದತೆಗಳನ್ನು ಪರಿಶೀಲಿಸಿ ಅವರು ಮಾತನಾಡಿ, ಪ್ರಧಾನಿಗಳ ಪ್ರಚಾರದಿಂದ ಹಳೆ ಮೈಸೂರು ಜಿಲ್ಲೆಗಳಲ್ಲಿ ಬಿಜೆಪಿ ಮತ್ತಷ್ಟು ಹೆಚ್ಚಿನ ಸ್ಥಾನ ಗಳಿಸಲು ಸಹಹಾರಿಯಾಗಲಿದೆ, ಬಿಜೆಪಿಯ ಅಭಿವೃದ್ದಿ ಕಾರ್ಯಗಳು ಹಾಗೂ ಮೋದಿ ನಾಮಬಲದಿಂದ ನಾನು ಸಂಸದನಾದೆ ಅದೇ ರೀತಿ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ ಎಂದರು.
ಏ.30 ರಂದು ಬೆಳಗ್ಗೆ 9-30 ಗಂಟೆಗೆ ಮೋದಿ ಆಗಮಿಸಲಿದ್ದು, ಇದಕ್ಕಾಗಿ ಎಲ್ಲಾ ಸಿದ್ದತೆ ನಡೆಸಲಾಗಿದೆ, ರಾಜ್ಯದ ದೇವಮೂಲೆಯಾಗಿರುವ ಇಲ್ಲಿ ಸಮಾವೇಶ ನಡೆಯುತ್ತಿದ್ದು, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ,ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳ ಸುಮಾರು 2.5 ಲಕ್ಷ ಮಂದಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಳೆದ ಒಂದು ವಾರದಿಂದು ಸುಮಾರು 150 ಎಕರೆ ಪ್ರದೇಶದಲ್ಲಿ ಸಿದ್ದತೆಗಳನ್ನು ನಡೆಸಿದ್ದು, ಮೂರು ಹೆಲಿಪ್ಯಾಡ್ ಸಿದ್ದವಾಗುತ್ತಿದೆ, ಮಳೆ,ಬಿಸಿಲಿನಿಂದ ರಕ್ಷಣೆಗೆ ಸುಸಜ್ಜಿತ ಪೆಂಡಾಲ್ ನಿರ್ಮಾಣಗೊಳ್ಳುತ್ತಿದ್ದು, 10ಕ್ಕೂ ಹೆಚ್ಚು ಜೆಸಿಬಿಗಳು, ಐದು ಕ್ರೈನ್‍ಗಳು ಸಿದ್ದತಾ ಕಾರ್ಯದಲ್ಲಿ ಬಳಕೆಯಾಗುತ್ತಿವೆ ಎಂದರು.


ಮೋದಿ ನೋಡಲು ಜನರ ಕಾತುರ


135 ಕೋಟಿ ಜನರಿಗೆ ಉಚಿತ ಸ್ವದೇಶಿ ತಯಾರಿತ ವ್ಯಾಕ್ಸಿನ್ ಒದಗಿಸಿ, ಇಡೀ ವಿಶ್ವಕ್ಕೆ ಮಾರಣಾಂತಿಕವಾಗಿದ್ದ ಕೋವಿಡ್‍ನಿಂದ ಜೀವ ಉಳಿಸಿದ ಮೋದಿ ಕಾಣಲು ಜನತೆ ಸ್ವಯಂಪ್ರೇರಿತರಾಗಿ ಬರುತ್ತಾರೆ ಎಂದರು.
ಕಿಸಾನ್ ಸಮ್ಮಾನ್ ಮೂಲಕ ರೈತರ ಖಾತೆಗಳಿಗೆ 10 ಸಾವಿರ ಹಾಕುತ್ತಿರುವುದು, ಆಯುಷ್ಮಾನ್ ಭಾರತ್, ಸ್ತ್ರೀಶಕ್ತಿ ಸಂಘಗಳಿಗೆ ಸೌಲಭ್ಯ, ಜಲಜೀವನ್ ಮಿಷನ್‍ನಡಿ ಪ್ರತಿ ಮನೆಗೂ ನಳದ ಮೂಲಕ ನೀರು, ಷಟ್ಪತ ರಸ್ತೆಗೆ ಅನುದಾನ, ಅಮೃತಸರೋವರ ಯೋಜನೆ, ಶ್ರೀನಿವಾಸರಪುರ ಬೈಪಾಸ್ ರಸ್ತೆಗೆ 250 ಕೋಟಿ, ಚಿಂತಾಮಣಿ ಬೈಪಾಸ್ ರಸ್ತೆಗೆ 256 ಕೋಟಿ ಹೀಗೆ ವಿವಿಧ ಯೋಜನೆಗಳನ್ನು ಜಿಲ್ಲೆಗೆ ನೀಡಿರುವ ಮೋದಿ ಕಾಣಲು ಜನರಲ್ಲಿ ಕಾತರವಿದೆ ಎಂದರು.
ಭೋವಿ,ಗೊಲ್ಲ,ವಕ್ಕಲಿಗ ಬಲಿಜ,ಬ್ರಾಹ್ಮಣ,ವಿಶ್ವಕರ್ಮ ಹೀಗೆ ಎಲ್ಲಾ ಸಮುದಾಯಗಳ ಅಭಿವೃದ್ದಿ ನಿಗಮ ನೀಡಿರೋದು ಬಿಜೆಪಿ ಸರ್ಕಾರ ಎಲ್ಲಾ ಸಮುದಾಯಗಳಿಗೂ ನ್ಯಾಯ ನೀಡಿದೆ,ಅಲ್ಪಸಂಖ್ಯಾತರು ಬೆಂಬಲಿಸಲಿದ್ದಾರೆ ಎಂದರು.


ಜಿಲ್ಲೆಯ ಹಲವು ಬೇಡಿಕೆಗೆ ಮನವಿ


ಕೋಲಾರ ರಿಂಗ್ ರಸ್ತೆ, ಮೆಡಿಕಲ್ ಕಾಲೇಜು, ದೊಡ್ಡ ಕಾರ್ಖಾನೆಗಳು, ರೈತರಿಗೆ ಕೃಷಿ ಸಂಶೋಧನಾ ಕೇಂದ್ರ, ಚಿನ್ನದ ಗಣಿ ಕಾರ್ಮಿಕರ ರಕ್ಷಣೆ, ಕೆಜಿಎಫ್ ಚಿನ್ನದ ಗಣಿ ಹಳೆ ವೈಭವ ಮರುಕಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಕುರಿತು ಗಮನ ಸೆಳೆಯುವುದಾಗಿ ತಿಳಿಸಿ, ಬೆಮೆಲ್ ಖಾಸಗೀಕರಣವಿಲ್ಲ ಎಂದು ಈಗಾಗಲೇ ಸಚಿವ ರಾಜನಾಥಸಿಂಗ್ ಸ್ಪಷ್ಟಪಡಿಸಿರುವುದರಿಂದ ಅದರ ಕುರಿತು ಮತ್ತೆ ಪ್ರಸ್ತಾಪ ಅಗತ್ಯವಿಲ್ಲ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಮೋದಿಗೆ ಸರಿಸಾಟಿಯಾಗಲು ಸಾಧ್ಯವೇ? ರಾಹುಲ್ ಇರುವೆಯಾದರೆ ಮೋದಿ ಆನೆಯಿದ್ದಂತೆ ಅವರ ಹೆಸರೇ ಶತ್ರುಗಳ ಎದೆಯಲ್ಲಿ ನಡುಕ ಸೃಷ್ಟಿಸುತ್ತದೆ, ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ ಆದರೆ ರಾಹುಲ್ ವಿದೇಶಗಳಿಗೆ ಹೋಗಿ ದೇಶದ ಮಾನ ಹರಾಜು ಹಾಕುವ ಮೂಲಕ ಕಾಂಗ್ರೆಸ್ ಸಂಸ್ಕøತಿಯನ್ನು ಬಿಂಬಿಸಿದ್ದಾರೆ ಎಂದರು.
ಕ್ಲಾಕ್ ಟವರ್‍ಮೇಲೆ ನಮ್ಮ ರಾಷ್ಟ್ರಧ್ವಜ ಹಾರಿಸಿದ್ದನ್ನು ಹೇಳಿಕೊಂಡು ಕಾಂಗ್ರೆಸ್ ಮತ ಕೇಳಲು ಹೊರಟಿರುವುದು ನಾಚಿಕೇಗೇಡು ಎಂದ ಅವರು, ರಾಷ್ಟ್ರಧ್ವಜ ಹಾರಿಸಿದ್ದು ತಪ್ಪೇ ಎಂದು ಪ್ರಶ್ನಿಸಿದರು.


ಕೆ.ವೈ.ನಂಜೇಗೌಡ ವಿರುದ್ದ ವಾಗ್ದಾಳಿ


ಮಾಲೂರು ಶಾಸಕ ಕೆ.ವೈ.ನಂಜೇಗೌಡರ ವಿರುದ್ದ 50 ಕೇಸ್ ಇದೆ, ಅಕ್ಕಿ,ಕಲ್ಲು,ಮಣ್ಣು,ಹಾಲು,ಮೊಸರು,ಬೆಣ್ಣೆ, ಪೆಟ್ರೋಲ್ ಎಲ್ಲವೂ ತಿಂದಿದ್ದಾರೆ, ಉಪ್ಪು ತಿಂದೋರು ನೀರು ಕುಡಿಯಲೇ ಬೇಕು, ಖಾಯಂ ಆಗಿ ಜೈಲು ಸೇರುವ ಕಾಲ ಹತ್ತಿರವೇ ಇದೆ, ನಾಳೆಯಿಂದ ನಾನು ಮಾಲೂರು ತಾಲ್ಲೂಕಿನಲ್ಲಿ ಪ್ರಚಾರ ನಡೆಸುವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ,ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ದಿಶಾಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ನಗರಸಭಾ ಸದಸ್ಯ ಪ್ರವೀಣ್ ಗೌಡ,ಬಿಜೆಪಿ ಮುಖಂಡರಾದ ಗುರುನಾಥರೆಡ್ಡಿ,ಬೆಗ್ಲಿ ಸಿರಾಜ್,ಮಮತಾ, ಗಾಂಧಿನಗರ ವೆಂಕಟೇಶ್, ನಗರ ಪ್ರ.ಕಾರ್ಯದರ್ಶಿ ಮಂಜುನಾಥ್,ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಅಮರ್,ಅನಿಲ್‍ಬಾಬು,ಸತೀಶ್ ಮತ್ತಿತರರು ಉಪಸ್ಥಿತರಿದ್ದರು.