ಇನ್ನೊಮ್ಮೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು :ಕೇಂದ್ರ ಸಚಿವ ಅರ್ಜುನ್‍ರಾಮ್ ಮೇಘ್ವಾಲ್

ಶ್ರೀನಿವಾಸಪುರ: ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಶಕ್ತಿ ತುಂಬಬೇಕು. ಇನ್ನೊಮ್ಮೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಕೇಂದ್ರ ಸಂಸದೀಯ ಹಾಗೂ ಸಂಸ್ಕøತಿ ಸಚಿವ ಅರ್ಜುನ್‍ರಾಮ್ ಮೇಘ್ವಾಲ್ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳ ಈಡೇರಿಕೆಗೆ ಪೂರಕವಾಗಿವೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಂಥ ಹಲವು ಯೋಜನೆಗಳು ರೈತರು, ಕಾರ್ಮಿಕರು, ಹಾಗೂ ಸಮಾಜದಲ್ಲಿನ ಕಟ್ಟ ಕಡೆ ವ್ಯಕ್ತಿಗೂ ತಲುಪಿವೆ. ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಲಾಭ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಲು ಮತದಾರರು ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ.ನಾರಾಯನಸ್ವಾಮಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುತ್ತಿವೆ. ರೈತರು, ಕೃಷಿಕರು, ಕೃಷಿ ಕಾರ್ಮಿಕರು ಹೀಗೆ ಸಮಾಜದ ಎಲ್ಲ ವರ್ಗದ ಜನರಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಜೆ.ಆರ್.ಶ್ರೀನಿವಾಸರೆಡ್ಡಿ, ಜಯಚಂದ್ರ, ಅಶೋಕರೆಡ್ಡಿ, ಎನ್.ರಾಜೇಂದ್ರ ಪ್ರಸಾದ್, ರಾಜೇಖರರೆಡ್ಡಿ, ಶಶಿಕುಮಾರ್ , ಆರ್.ನಾರಾಯಣಸ್ವಾಮಿ, ಆಂಜಪ್ಪ, ಟಿ.ಮಂಜುನಾಥರೆಡ್ಡಿ, ಪದ್ಮನಾಭ್, ಶ್ರೀರಾಮ್, ಶಂಷೀರ್ ಇದ್ದರು.