“ರವಿ ಬಸ್ರೂರು” ಇವರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ

ಕುಂದಾಪುರ : ರವಿ ಬಸ್ರೂರು'ರಿಗೆ ಕೋ. ಮ. ಕಾರಂತ ಪ್ರಶಸ್ತಿ ಕುಂದ ಕನ್ನಡ ಭಾಷೆಯ ಬಗ್ಗೆ ಹೊರಗಿನವರಿಗೆ ಕುತೂಹಲ ಇತ್ತು. ಆದರೆ ಮಹತ್ವ ನೀಡುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ರವಿ ಬಸ್ರೂರು ಎಂಬ ಯುವಕ ತನ್ನ ಕುಂದಾಪ್ರ ಕನ್ನಡಕ್ಕೆ ಮಹತ್ವ ಕೊಟ್ಟು ಹಾಡು, ಚಲನಚಿತ್ರ ನಿರ್ಮಾಣ ಮಾಡುವುದರೊಂದಿಗೆ ಕುಂದಾಪ್ರ ಕನ್ನಡ ಭಾಷೆಗೆ ಈ ಮಣ್ಣಿನ ಸಂಸ್ಕøತಿಗೆ ಶೋಭೆ ತಂದುಕೊಟ್ಟರು. ಇವರ ಶ್ರದ್ಧೆ ಪರಿಶ್ರಮ, ಸಾಧನೆಗೆ ಕುಂದಪ್ರಭ ಬಳಗ ಕೋ.ಮ.ಕಾರಂತ ಪ್ರಶಸ್ತಿಯನ್ನು ಅರ್ಹವಾಗಿಯೇ ಪ್ರದಾನ ಮಾಡಿದೆ. ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಿದ ಅತಿ ಕಿರಿಯವರಾದ ರವಿ ಬಸ್ರೂರು ತಮ್ಮ ಜೀವನದಲ್ಲಿ ಇನ್ನಷ್ಟು ಸಾಧನೆಗಳ ಮೆಟ್ಟಲು ಏರುವಲ್ಲಿ ಈ ಪ್ರಶಸ್ತಿ ಪ್ರೇರಣೆ ನೀಡಲಿ. ಕೋ.ಮ. ಕಾರಂತರೆಂಬ ಶ್ರೇಷ್ಠ ಮಹನೀಯರ ಸ್ಮರಣೆ ಈ ಮೂಲಕ ಮಾಡಲು ಸಾಧ್ಯವಾಗಿರುವುದು ಸಂತೋಷದ ವಿಚಾರ" ಎಂದು ಕರ್ನಾಟಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ನಡೆದ ಕೋ.ಮ. ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಗಮಿಸಿದ್ದರು. ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ ಸ್ವಾಗತಿಸಿದರು. ಅಂಕಣಗಾರ ಕೋ. ಶಿವಾನಂದ ಕಾರಂತ ಕೋ.ಮ. ಕಾರಂತರ ಸ್ಮರಣೆ ಮಾಡಿದರು. ರವಿ ಬಸ್ರೂರು’ ಅವರಿಗೆ ಕೋ.ಮ. ಕಾರಂತ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಖ್ಯಾತ ಸಾಹಿತಿ ಡಾ. ರಂಜಿತ್ ಕುಮಾರ್ ಶೆಟ್ಟಿಯವರ 20 ಕಥೆಗಳು ಕೃತಿಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆ ಮಾಡಿದರು.
ನ್ಯೂಜಿಲ್ಯಾಂಡಿನ ಆಕ್ಲ್ಯಾಂಡ್‍ನಲ್ಲಿ ನಡೆದ ಕಾಮನ್‍ವೆಲ್ತ್ ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಐದು ಚಿನ್ನದ ಪದಕ, ಬೆಳ್ಳಿ ಪದಕ ಪಡೆದ ಸತೀಶ್ ಖಾರ್ವಿಯವರನ್ನು ಶಾಸಕ ಮಂಜುನಾಥ ಭಂಡಾರಿ ಗೌರವಿಸಿದರು.

ಪ್ರತಿಭಾನ್ವಿತ ತಬಲಾ ಕಲಾವಿದರಾದ ಕೆ. ವಿಘ್ನೇಶ್ ಕಾಮತ್, ಶ್ರೀಧರ್ ಭಟ್, ಕೋಟೇಶ್ವರ ಹಾಗೂ ಗಾಯಕಿ ಧಾರಿಣಿ ಕೆ.ಎಸ್. ಅವರನ್ನು ಮಂಜುನಾಥ ಭಂಡಾರಿ ಗೌರವಿಸಿದರು.
ಡಾ| ಉಮೇಶ್ ಪುತ್ರನ್, ಡಾ| ಸದಾನಂದ ಭಟ್, ಕೆ. ರಮಾನಂದ ಕಾರಂತ, ಎಚ್. ಸೋಮಶೇಖರ ಶೆಟ್ಟಿ, ಹುಸೇನ್ ಹೈಕಾಡಿ, ಯು. ಸಂಗೀತಾ ಶೆಣೈ ಅತಿಥಿಗಳನ್ನು ಗೌರವಿಸಿದರು.
ತೆಂಕನಿಡಿಯೂರು ಪ.ಪೂ. ಕಾಲೇಜಿನ ಪ್ರಾಂಶುಪಾಲ, ಲೇಖಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಕಲಾವಿದ ವೇಣುಗೋಪಾಲ ಭಟ್ ಕೋಟೇಶ್ವರ ಹಾಗೂ ಗಣೇಶ್ ಗಂಗೊಳ್ಳಿ, ಅಶ್ವಿನಿ, ಮೇಘನಾ, ಪಾವನಾ ಅವರಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಿತು.
ಲೇಖಕ ಪಿ. ಜಯವಂತ ಪೈ ವಂದಿಸಿದರು.

“ಕುಂದಾಪುರ ಭಾಷಿ, ಸಂಸ್ಕøತಿ ನಂಗೆ ದೇವಸ್ಥಾನ ಇದ್ದಾಂಗೆ” – ರವಿ ಬಸ್ರೂರು


ದೇವ್ರ ಡಬ್ಬಿಗೆ ದುಡ್ಡ್ ಹಾಕ್ರೆ ನಾಂವ್ ವಾಪಾಸ್ ತೆಗ್ಗಿತ್ತಾ? ಹಾಂಗೆ ಕುಂದಾಪ್ರ ಭಾಷಿಗಾಗಿ ದುಡ್ಡ್ ಹಾಕ್ರೆ ಅದ ದೇವ್ರ ಡಬ್ಬಿ ದುಡ್ಡ್ ಹಾಕದ್ ಹಾಗೆ. ನಂಗೆ ಕುಂದಪ್ರ ಕನ್ನಡ ದೇವಸ್ಥಾನ. ಅದ್ರ ಫಲ ದೇವ್ರ ಕೊಟ್ಟೇ ಕೊಡ್ತ. ನಂಗೂ ಅದ್ರ ಫಲ ಸಿಕ್ಕೀತ್. ಕುಂದಾಪ್ರ ಭಾಷಿ ಯಾಕೆ ಬೇರೆಯವ್ರಿಗೆ ಅರ್ಥ ಆತ್ತಿಲ್ಲ? ತಮಿಳು, ತೆಲುಗು, ಮಲಯಾಳ ಭಾಷೆ ಅರ್ಥ ಆತ್ತ್ ಅಂಬ್ರ. ಕುಂದಾಪ್ರ ಭಾಷಿ ಯಾಕ್ ಆತ್ತಿಲ್ಲ. ಏನಾರೂ ಮಾಡಿ ಅರ್ಥ ಆಪು ಹಾಂಗ್ ಮಾಡ್ಕ್ ಅಂತ ಪ್ರಯತ್ನ ಮಾಡ್ದಾಗ, ಎಷ್ಟೋ ಜನ, ಇವ್ನಿಗೆ ಮಂಡಿ ಪೆಟ್ಟ್ ಅಂದ್ರ್. ಆದ್ರೆ ಕಡಿಗೂ ಫಲ ಸಿಕ್ತ. ನಮ್ಮ ಊರ ಬದಿ ಗೌರವ ಸಿಕ್ಕು ಹಾಂಗ್ ಆಯ್ಕ್ ಅಂತ ಸಾದ್ನಿ ಮಾಡ್ಕ್ ಅಂತ ಕನ್ಸ್ ಇದಿತ್. ಈಗ ಆ ಕನ್ಸ್ ನನ್ಸ್ ಆಯ್ತ್. ಕೋ.ಮ. ಕಾರಂತ ಪ್ರಶಸ್ತಿ ಸಿಕ್ಕಿದ್ದ್ದ್ ತುಂಬ ಖುಷಿ ಆಯ್ತ್. ನನ್ನ ಜವಾಬ್ದಾರಿ ಹೆಚ್ಚಾಯ್ತ್” ಎಂದು ಕೋ.ಮ. ಕಾರಂತ ಪ್ರಶಸ್ತಿ ಸ್ವೀಕರಿಸಿ ರವಿ ಬಸ್ರೂರು ಕುಂದಾಪ್ರ ಕನ್ನಡದಲ್ಲಿ ಬಹಳ ಅರ್ಥಪೂರ್ಣವಾಗಿ ಮಾತನಾಡಿದರು.
ಕುಂದಾಪ್ರ, ಉಡುಪಿ ಜಿಲ್ಲೆ ಪರಿಸರದಲ್ಲಿ ನೂರಾರು ಮಂದಿ ಪ್ರತಿಭಾವಂತ ಯುವಕರಿದ್ದಾರೆ ಅವರ ಆಸಕ್ತಿಯ ಆಲೋಚನೆಗಳಿಗೆ ಬೆಂಬಲ ನೀಡಿ, ತುಂಬ ಮಂದಿ ಸಾಧನೆ ಮಾಡಿದವರೂ ಇದ್ದಾರೆ ಅವರನ್ನೂ ಬೆಳಕಿಗೆ ತನ್ನಿ. ಪ್ರಶಂಸೆ ಎನ್ನುವುದು ಬೇಕಾಗುತ್ತದೆ. ನಮ್ಮ ಪರಿಶ್ರಮಕ್ಕೆ ಪ್ರೋತ್ಸಾಹ ಸಿಗುವಂತೆ, ಸಮಾಧಾನ ಸಿಗುವಂತೆ ನಾವು ಪ್ರಯತ್ನಿಸಬೇಕು. ಕಾಲಕ್ಕೆ ತಕ್ಕಂತೆ ನಾವು ಬೆಳೆಯಬೇಕಾಗುತ್ತದೆ. ನಮ್ಮ ಕೆಲಸ ವೈಭವೀಕರಿಸಬೇಕಾಗುತ್ತದೆ. ಹಾಗೆ ಮಾಡಿದಾಗ ಗುರುತಿಸಲ್ಪಡುತ್ತೇವೆ. ನಮ್ಮ ಯುವಕರು ಯಾವಾಗಲೂ ಮತ್ತೊಬ್ಬರ ಬಗ್ಗೆ ಕೆಟ್ಟದ್ದು ಆಲೋಚಿಸಲು ಪುರುಸೊತ್ತು ಇಲ್ಲದಷ್ಟು ಕೆಲಸದಲ್ಲಿ ಮಗ್ನರಾಗುವಂತಾಗಬೇಕು ಎಂದು ಹೇಳಿದರು.

ಕುಂದಾಪ್ರ ಕನ್ನಡ ಅಕಾಡೆಮಿಗಾಗಿ ಪ್ರಯತ್ನಿಸಬೇಕು ಬಿ. ಅಪ್ಪಣ್ಣ ಹೆಗ್ಡೆ


ರವಿ ಬಸ್ರೂರು ಕುಟುಂಬದವರು ಮೂಲತ: ಪ್ರತಿಭಾವಂತ ಶಿಲ್ಪಿಗಳು. ಚಿನ್ನದ, ಬೆಳ್ಳಿಯ ಮುಖವಾಡ ತಯಾರಿ, ಶಿಲ್ಪಕಲೆ, ಪರಿಣಿತರು, ಹಾರ್ಮೋನಿಯಂ, ಯಕ್ಷಗಾನದ ತಾಳ ವಾದ್ಯಗಳನ್ನೂ ತಯಾರಿಸುವವರು, ಪ್ರಯೋಗಶೀಲರು. ಸಂಗೀತ, ಭಜನೆ ಆಸಕ್ತರು. ರವಿ ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದು, ಹುಡುಗನಾಗಿದ್ದಾಗಲೇ ಪ್ರಯೋಗಗಳನ್ನು ನಡೆಸಿದವರು. ಈಗ ಬಸ್ರೂರಿಗೆ ಹೆಸರು ತರುವಂತಹ ಸಾಧನೆ ಮಾಡಿದ್ದಾರೆ. ಮುಖ್ಯವಾಗಿ ಕುಂದಾಪ್ರ ಕನ್ನಡ ಭಾಷೆ ಸಂಸ್ಕøತಿಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಈ ಶ್ರೀಮಂತ ಕುಂದಾಪ್ರ ಕನ್ನಡ, ಭಾಷೆ, ಸಂಸ್ಕøತಿ ಉಳಿದು ಬೆಳೆಯುವಂತಾಗಲೂ ಅಕಾಡೆಮಿ ಸ್ಥಾಪನೆ ಅಗತ್ಯವಾಗಿದ್ದು ಇಲ್ಲಿ ಉಪಸ್ಥಿತರಿರುವ ಮಂಜುನಾಥ ಭಂಡಾರಿಯವರೂ ಸೇರಿದಂತೆ ಜನಪ್ರತಿನಿಧಿಗಳು ಆ ಬಗ್ಗೆ ಗಂಭೀರ ಪ್ರಯತ್ನ ನಡೆಸಬೇಕು. ಕುಂದಪ್ರಭ ಈ ಭಾಷೆಯ ಅಭಿವೃದ್ಧಿಗೆ ಕುಂದಾಪುರದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದು, ಅಕಾಡೆಮಿ ಸ್ಥಾಪನೆಗೊಂಡರೆ ಹೆಚ್ಚು ಅನುಕೂಲವಾಗುತ್ತದೆ. ರವಿ ಬಸ್ರೂರುರಂತಹ ಯುವಕರಿಗೆ ಇನ್ನಷ್ಟು ಭಾಷೆ, ಸಂಸ್ಕøತಿ ಬಗ್ಗೆ ಆಸಕ್ತಿ ಹುಟ್ಟುತ್ತದೆ ಎಂದು ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಬೆಲ್ಲದಂತೆ ಬೆಳೆದ ರವಿ – ಮಂಜುನಾಥ ಭಂಡಾರಿ
“ಬೆಲ್ಲ ಎಲ್ಲಿದೆಯೋ ಅಲ್ಲಿ ಇರುವೆಗಳು ಬರುತ್ತವೆ. ಬೆಲ್ಲ ಇರುವೆಗಳ ಬಳಿ ಹೋಗುವುದಿಲ್ಲ ರವಿ ಬಸ್ರೂರು ಈಗ ಬೆಲ್ಲದಂತೆ, ಅವರ ಪ್ರತಿಭೆಯಿಂದ ಅವರು ಖ್ಯಾತರಾಗಿದ್ದಾರೆ. ಹುಟ್ಟೂರು ಬಸ್ರೂರಲ್ಲಿ ಅತ್ಯಾಧುನಿಕ ಸ್ಟುಡಿಯೋ ಮಾಡಿದುದರಿಂದ ಅವರನ್ನು ಹುಡುಕಿಕೊಂಡು ಬಸ್ರೂರಿಗೆ ಬರುತ್ತಾರೆ. ಇದು ಒಂದು ದೊಡ್ಡ ಸಾಧನೆ. ರವಿ ಬಸ್ರೂರು ಜೀವನ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುವಂತೆ ಇದೆ. ನಮ್ಮ ಶಿಕ್ಷಣ ಸಂಸ್ಥೆಗಳಿಗೂ ಅವರನ್ನು ಕರೆಸಬೇಕೆಂದಿದ್ದೇನೆ”ಎಂದು ವಿಧಾನ ಪರಿಷತ್ ಸದಸ್ಯರಾದ ಶಿಕ್ಷಣ ತಜ್ಞ ಮಂಜುನಾಥ ಭಂಡಾರಿ ಹೇಳಿದರು.
ಬಸ್ರೂರು ಒಂದು ಐತಿಹಾಸಿಕ ಗ್ರಾಮ. ಈ ಹಳ್ಳಿ ಎಷ್ಟು ಪ್ರಸಿದ್ಧವಾಗಿತ್ತು ಅಂದರೆ ವ್ಯವಹಾರ, ಲಲಿತ ಕಲೆ, ಶಿಲ್ಪಕಲೆ, ಸಾಹಿತ್ಯ, ಸಂಸ್ಕøತಿ ಎಲ್ಲ ವಿಷಯಗಳಿಗೂ ಹೆಸರುವಾಸಿಯಾಗಿತ್ತು. ವಿದೇಶಿಗರೂ ಈ ಬಸ್ರೂರಿನ ಬಗ್ಗೆ ಆಕರ್ಷಿತರಾಗಿದ್ದರು. ಈ ಭಾಗವನ್ನು ವಶಪಡಿಸಿಕೊಂಡ ವಿದೇಶಿಗರನ್ನು ಸೋಲಿಸಿ ಛತ್ರಪತಿ ಶಿವಾಜಿ ನಮ್ಮವರಿಗೆ ಮರಳಿ ಒದಗಿಸಿಕೊಟ್ಟ ಇತಿಹಾಸವಿದೆ. ಇಂತಹ ಬಸ್ರೂರಿನಲ್ಲಿ ಹುಟ್ಟಿದ ಹುಡುಗ, ಕನ್ನಡ ಚಲನಚಿತ್ರದ ಖ್ಯಾತ ನಿರ್ಮಾಪಕರೂ ಬಸ್ರೂರಿಗೆ ಬರುವಂತೆ ಸಾಧನೆ ಮಾಡಿರುವುದು ಪ್ರಶಂಸನೀಯ. ಕುಂದಪ್ರಭ ವತಿಯಿಂದ ಕೋ. ಮ. ಕಾರಂತ ಪ್ರಶಸ್ತಿ ನೀಡಿರುವುದು ಅರ್ಹ ಸಾಧಕನಿಗೆ ನೀಡಿದಂತಾಗಿದೆ ಎಂದು ಅವರು ಹೇಳಿದರು.

ಶಿಲ್ಪದಂತೆ ರೂಪುಗೊಂಡ ರವಿ – ಅಭಿನಂದನ್ ಶೆಟ್ಟಿ


ಪೆಟ್ಟು ತಿಂದು ರೂಪುಗೊಂಡ ಶಿಲ್ಪ ಗುಡಿಗೆ ಸೇರಿ ಪೂಜಿಸಲ್ಪಡ್ತದೆ. ಏನೂ ಆಗದ ಕಲ್ಲು ನಡೆದಾಡುವ ಹಾಸು ಆಗುತ್ತದೆ. ನಮ್ಮ ರವಿ ಬಸ್ರೂರು ಹಾಗೆ ತುಂಬ ಸಂಕಷ್ಟ ಅನುಭವಿಸಿಯೂ ಛÀಲದಿಂದ ಮುನ್ನಡೆದಿದ್ದಾರೆ. ಇಂದು ಕೀರ್ತಿ ತರುವಂತಹ ಸಾಧನೆಗೈದಿದ್ದಾರೆ. ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಕುಂದಾಪ್ರ ಕನ್ನಡದ ಬಗ್ಗೆ ಬೇರೆ ಕಡೆ ತಮಾಷೆ ಮಾಡುತ್ತಿದ್ದರು. ಇಂದು ರವಿ ಬಸ್ರೂರು ಅವರಂತಹ ವ್ಯಕ್ತಿಗಳ ಪ್ರಯತ್ನದಿಂದ ಕುಂದಾಪ್ರ ಕನ್ನಡ ರೋಮಾಂಚನ ಉಂಟು ಮಾಡುತ್ತಿದೆ. ಅದು “ಭಾಷೆಯಲ್ಲ ಬದುಕು” ಎಂದು ಇವರು ತೋರಿಸಿಕೊಟ್ಟಿದ್ದಾರೆ. ಕುಂದಾಪುರ ನಾಗರಿಕರು `ರವಿ’ ಅವರಿಗೆ ಚಿರ ಋಣಿಯಾಗುತ್ತಾರೆ. “ನಿರಾಡಂಬರವಾಗಿ ಕೆಲಸ ಮಾಡಿ, ಯಶಸ್ಸು ಶಬ್ದ ಮಾಡಲಿ” ಎಂಬಂತೆ ರವಿ ಬಸ್ರೂರು ಶ್ರಮಿಸಿದ್ದಾರೆ. “ಬಿದ್ದಾಗ ಸೋಲಲ್ಲ, ಬಿದ್ದು ಏಳದಿದ್ದರೆ ಸೋಲು” ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಯಶಸ್ಸು ನಿರಂತರವಾದುದು ಎನ್ನುವುದನ್ನು ಅರಿತು ಇನ್ನಷ್ಟು ಸಾಧನೆಗಾಗಿ ರವಿ ಬಸ್ರೂರು ಮುನ್ನಡೆಯಲಿ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್, ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು.
ಬಸ್ರೂರು ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸ್ಟುಡಿಯೋ ನಿರ್ಮಾಣ ಮಾಡಿರುವುದು ನಮಗೆ ತಿಳಿದಿರಲಿಲ್ಲ. ಅವರು ತಣ್ಣಗೆ ಸ್ಟುಡಿಯೋ ನಿರ್ಮಾಣ ಮಾಡಿ ಹುಟ್ಟೂರಲ್ಲಿ ಸಾಧನೆಗೈದಿದ್ದಾರೆ” ಎಂದು ಅವರು ಅಭಿನಂದನೆ ಸಲ್ಲಿಸಿದರು.

         

ಡಾ| ರಂಜಿತ್ ಕುಮಾರ್ ಶೆಟ್ಟಿಯವರ ಕಥಾ ಸಂಕಲನ ಬಿಡುಗಡೆ


“ಸಾಹಿತಿ ಡಾ. ರಂಜಿತ್‍ಕುಮಾರ್ ಶೆಟ್ಟಿಯವರ ಉತ್ತಮ ಕಥೆಗಾರರೂ ಕಾದಂಬರಿಗಾರರೂ ಆಗಿದ್ದು, ಅವರ ನೂತನ ಕೃತಿ “10+10 = 20 ಕಥೆಗಳು” ಬಿಡುಗಡೆ ಮಾಡಲು ಸಂತೋಷವಾಗುತ್ತದೆ. ಅವರ ಕಥೆಗಳು ತಮಾಷೆಯೊಂದಿಗೆ ಉತ್ತಮ ಸಂದೇಶಗಳನ್ನು ಸಾರುವ ಮೌಲ್ಯಯುತ ಕತೆಗಳಾಗಿರುತ್ತದೆ. ಈ ಕೃತಿ ಬಿಡುಗಡೆ ಮಾಡಲು ಹೆಮ್ಮೆಯಾಗುತ್ತದೆ” ಎಂದು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಕುಂದಕನ್ನಡದ ಅಭಿವೃದ್ಧಿಗೆ ನಾವೆಲ್ಲಾ ಶ್ರಮಿಸೋಣ. ಕುಂದಾಪ್ರಕನ್ನಡದ ಸಾಹಿತ್ಯ ರಚಿಸುವಲ್ಲಿ ಎಲ್ಲರೂ ಆಸಕ್ತಿ ವಹಿಸಬೇಕು. ಕುಂದಾಪ್ರ ಕನ್ನಡದಲ್ಲಿ ಸಾಹಿತ್ಯವಿದ್ದರೆ ಅದನ್ನು ಒಟ್ಟು ಸೇರಿಸಿ ಪ್ರಕಟಿಸೋಣ. ಡಾ| ರಂಜಿತ್ ಕುಮಾರ್ ಅವರ ಕೃತಿಗಳಲ್ಲಿ, ಅವರ ಮಾತಿನಲ್ಲಿ ಕುಂದಕನ್ನಡ ನಾವು ಕಾಣುತ್ತೇವೆ. ಅವರು ಇನ್ನಷ್ಟು ಕೃತಿಗಳನ್ನು ರಚಿಸುವಂತಾಗಲಿ” ಎಂದು ಹೇಳಿದರು.
ಈ ಪುಸ್ತಕ ಕುಂದಾಪುರದ ವಿನಯಾ ಆಸ್ಪತ್ರೆಯಲ್ಲಿ ಲಭ್ಯವಿರುತ್ತವೆ. ಎಂದು ಡಾ| ರಂಜಿತ್ ಕುಮಾರ್ ಶೆಟ್ಟಿ ತಿಳಿಸಿದರು.