ರಾಷ್ಟ್ರ ಮಟ್ಟದಲ್ಲಿ ಆರ್‍ಪಿಐ ಪಕ್ಷವನ್ನು ಸಂಘಟಿಸಲಾಗುವುದು. ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಮಾರ್ಗದರ್ಶನ:ಡಾ. ಎಂ.ವೆಂಕಟಸ್ವಾಮಿ

ಶ್ರೀನಿವಾಸಪುರ: ರಾಷ್ಟ್ರ ಮಟ್ಟದಲ್ಲಿ ಆರ್‍ಪಿಐ ಪಕ್ಷವನ್ನು ಸಂಘಟಿಸಲಾಗುವುದು. ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಮಾರ್ಗದರ್ಶನ ಮಾಡಲಾಗುವುದು. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪೂರಕವಾಗಿ ಕಾರ್ಯಕ್ರಮ ರೂಪಸಿ ಜಾರಿಗೊಳಿಸಲಾಗುವುದು ಎಂದು ಆರ್‍ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ.ವೆಂಕಟಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಡಾ. ಎಂ.ವೆಂಕಟಸ್ವಾಮಿ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಸಂಘಟನೆಗಳಿಂದ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್‍ಪಿಐ ದೇಶದ 31 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದು, ತುಳಿತಕ್ಕೆ ಒಳಗಾದ ಜನರ ಪರ ಧ್ವನಿಯೆತ್ತಿದೆ ಎಂದು ಹೇಳಿದರು.
ನಾನು ನೂತನ ಆರ್‍ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷನಾಗಿ ಆಂತರಿಕ ಪ್ರಜಾಪ್ರಭುತ್ವ ಹಾಘೂ ಸಾಮೂಹಿಕ ನಾಯಕತ್ವ ಬೆಂಬಲಿಸುತ್ತೇನೆ. ರಾಜ್ಯದಲ್ಲಿ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುತ್ತೇನೆ. ಅವರ ಗೆಲುವಿಗಾಗಿ ಕಾರ್ಯಕರ್ತರು ಹೆಗಲು ನೀಡಿ ಶ್ರಮಿಸಬೇಕು ಎಂದು ಹೇಳಿದರು.
ಮುಖಂಡರಾದ ಜಿ.ಸಿ.ವೆಂಕಟರವಣಪ್ಪ, ಎಸ್.ನಾರಾಯಣಸ್ವಾಮಿ, ಶಿವಪ್ರಸಾದ್ ಡಾ, ಎಂ.ವೆಂಕಟಸ್ವಾಮಿ ಅವರ ಸೇವೆ ಹಾಗೂ ಸಾಧನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಎಂ.ವೆಂಕಟಸ್ವಾಮಿ ಅವರನ್ನು, ಅವರ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಸಂಘಟನೆಗಳಿಂದ ಸನ್ಮಾನಿಸಲಾಯಿತು.
ಮುಖಂಡರಾದ ಪ್ರಸನ್ನ, ಡಿ.ಎಂ.ಅಂಬರೀಶ್, ಎನ್.ತಿಮ್ಮಯ್ಯ, ರಾಮಾಂಜಮ್ಮ, ಈರಪ್ಪ, ಚಲಪತಿ, ಎನ್.ಪಾಪಣ್ಣ, ಶ್ರೀನಿವಾಸ್, ವೆಂಕಟೇಶ್, ರವಿ, ಆರ್.ಚಂದ್ರಶೇಖರ್, ಶಿವಣ್ಣ, ಬ್ಯಾಟರಾಜ್ ಮತ್ತಿತರರು ಇದ್ದರು.
ಮೆರವಣಿಗೆ: ಪಟ್ಟಣದ ಮುಳಬಾಗಲು ವೃತ್ತದಿಂದ ಎಂಜಿ ರಸ್ತೆ ಮೂಲಕ ಸಮಾರಂಭ ಏರ್ಪಡಿಸಿದ್ದ ಸ್ಥಳಕ್ಕೆ ಡಾ. ಎಂ. ವೆಂಕಟಸ್ವಾಮಿ ಅವರನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.