ಕೆಜಿಎಫ್ ಎಪಿಎಂಸಿಗಾಗಿ ಜಮೀನು ಹಸ್ತಂತರಕ್ಕೆ ಹಣ ಪಾವತಿಗೆ ಸೂಚನೆ – ನಿರಾಶ್ರಿತರ ನಿವೇಶನಕ್ಕೆ ಜಮೀನು-ಶಾಸಕಿ ರೂಪಕಲಾ ಮನವಿಗೆ ಡಿಸಿ ಸ್ಪಂದನೆ

ಕೋಲಾರ:- ಶಾಸಕಿ ರೂಪಕಲಾ ಮನವಿ ಹಿನ್ನಲೆಯಲ್ಲಿ ಜಿಲ್ಲೆಯ ಕೆಜಿಎಫ್ ಎಪಿಎಂಸಿ ಮಾರುಕಟ್ಟೆಗೆ ಮಂಜೂರಾಗಿರುವ 25 ಎಕರೆ ಜಾಗ ಎಪಿಎಂಸಿ ವಶಕ್ಕೆ ಪಡೆಯುವುದು, ನಗರ ನಿರಾಶ್ರಿತರಿಗೆ ನಿವೇಶನ ನೀಡಲು 16 ಎಕರೆ ಜಮೀನು ಗುರುತಿಸುವ ಕಾರ್ಯವನ್ನು ಶೀಘ್ರ ಮುಗಿಸಿ ಎಂದು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಸೂಚನೆ ನೀಡಿದರು.
ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕಿ ರೂಪಕಲಾ ಡಿಸಿಯವರಿಗೆ ಮನವಿ ಮಾಡಿ, ಕೆಜಿಎಫ್ ತಾಲ್ಲೂಕು ವಿಭಜನೆಯಾದ ನಂತರ ಪ್ರತ್ಯೇಕ ಎಪಿಎಂಸಿ ಮಾಡಲು ಸಿದ್ದತೆ ನಡೆದಿದ್ದು, 25 ಎಕರೆ ಜಾಗ ಗುರುತಿಸಲಾಗಿದೆ ಅದಕ್ಕೆ ಮಾರುಕಟ್ಟೆ ಮೌಲ್ಯದ ಅರ್ಧದಷ್ಟು 72 ಲಕ್ಷರೂ ಹಣ ಕಟ್ಟಲು ಈಗಾಗಲೇ ಎಪಿಎಂಸಿ ರಾಜ್ಯ ನಿರ್ದೇಶಕರು ಸೂಚನೆ ನೀಡಿದ್ದು, ಅದರಂತೆ ಹಣ ಕಟ್ಟಲು ಸೂಚಿಸುವಂತೆ ಕೋರಿದರು.
ಅದರಂತೆ ಎಪಿಎಂಸಿ ಆಡಳಿತಾಧಿಕಾರಿಯೂ ಆಗಿರುವ ಬಂಗಾರಪೇಟೆ ತಹಸೀಲ್ದಾರ್ ದಯಾನಂದ್ ಹಾಗೂ ಎಪಿಎಂಸಿಕಾರ್ಯದರ್ಶಿಗೆ ನಿರ್ದೇಶನ ನೀಡಿದ ಡಿಸಿಯವರು ಕೂಡಲೇ ಸಂಬಂಧಿಸಿದ 72 ಲಕ್ಷ ಬಿಡುಗಡೆಗೆ ಸೂಚಿಸಿದರು.

ಸೂರಹಳ್ಳಿ ಬಳಿ 16 ಎಕರೆ ಜಾಗ

ನಗರ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು ಆಶ್ರಯ ಯೋಜನೆಯಡಿ ಸೂರಹಳ್ಳಿ ಸಮೀಪ 16 ಎಕರೆ ಜಾಗ ಗುರುತಿಸಿಕೊಡಲು ಶಾಸಕಿ ರೂಪಕಲಾ ಮಾಡಿದ ಮನವಿಗೆ ಸ್ಪಂದಿಸಿದ ಡಿಸಿಯವರು ಅಗತ್ಯ ಕ್ರಮವಹಿಸಲು ಸೂಚಿಸಿ, ಫಲಾನುಭವಿಗಳ ಆಯ್ಕೆ,ನಿವೇಶನ ವಿಂಗಡಿಸುವ ಪ್ರಕ್ರಿಯೆಗಳನ್ನು ಶೀಘ್ರ ಆರಂಭಿಸಲು ನಗರ ಯೋಜನಾ ನಿದೇಶಕರು ಹಾಗೂ ನಗರಸಭೆಗೆ ಸೂಚನೆ ನೀಡಿದರು.
ಈ ಕಾರ್ಯದಲ್ಲಿ ವಿಳಂಬ ಮಾಡದೇ ಶೀಘ್ರ ಜಮೀನು ಗುರುತಿಸಿ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಆಯ್ಕೆ ಪ್ರಕ್ರಿಯೆ ನಡೆಸಿ ಅರ್ಹರಿಗೆ ನಿವೇಶನ ಹಂಚಲು ಕ್ರಮವಹಿಸಿ ಎಂದರು.

ಟ್ರಕ್ ಟರ್ಮಿನಲ್ ಜಾಗಕ್ಕೆ ಮನವಿ

ಇದೇ ಸಂದರ್ಭದಲ್ಲಿ ಕೆಜಿಎಫ್ ನಗರಕ್ಕೆ ಟ್ರಕ್ ಟರ್ಮಿನಲ್ ಅಗತ್ಯವಿದ್ದು, ಅದಕ್ಕೆ ಜಾಗ ಗುರುತಿಸಿಕೊಡಲು ಡಿಸಿಯವರಿಗೆ ಶಾಸಕಿ ರೂಪಕಲಾ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಡಿಸಿ ವೆಂಕಟ್ ರಾಜಾ, ಹೊಸ ತಾಲ್ಲೂಕು ಹಾಗೂ ಅಲ್ಲೇ ಆರ್‍ಟಿಒ ಕಚೇರಿಯೂ ಇದೆ, ಅಗತ್ಯ ಜಾಗ ಗುರುತಿಸಿಕೊಡಿ ಎಂದು ಕೆಜಿಎಫ್ ತಹಸಿಲ್ದಾರ್ ಸುಜಾತಾ ಅವರಿಗೆ ಸೂಚಿಸಿದರು.
ಕೆಜಿಎಫ್ ಮಿನಿ ವಿಧಾನಸೌಧ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕಂದಾಯ ಸಚಿವರು ಉದ್ಘಾಟನೆಗೆ ಶೀಘ್ರವೇ ದಿನಾಂಕ ನೀಡಲಿದ್ದಾರೆ ಈ ಹಿನ್ನಲೆಯಲ್ಲಿ ಉಳಿಕೆ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಿಕೊಡಲು ಶಾಸಕರು ಕೋರಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕಟ್ಟಡಕ್ಕೆ ಶೀಘ್ರ ಅಗತ್ಯ ಕಾಂಪೌಂಡ್ ನಿರ್ಮಿಸಿಕೊಡಿ, ಸುರಕ್ಷತೆಗೆ ತಂತಿ ಬೇಲಿ ನಿರ್ಮಾಣ ಮಾಡಿಕೊಟ್ಟು, ವಿದ್ಯುತ್ ಸಂಪರ್ಕ ಮತ್ತಿತರ ಕೆಲಸ ಮುಗಿಸಿಕೊಡಿ ಎಂದು ಲೋಕೋಪಯೋಗಿ ಎಇಇ ಸರಸ್ವತಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ, ಕೆಜಿಎಫ್ ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಪೌರಾಯುಕ್ತ ಡಾ.ಮಾಧವಿ, ಕೆಜಿಎಫ್ ತಹಸೀಲ್ದಾರ್ ಸುಜಾತಾ, ಬಂಗಾರಪೇಟೆ ತಹಸೀಲ್ದಾರ್ ದಯಾನಂದ್, ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಜಹೀರ್ ಅಬ್ಬಾಸ್, ಎಪಿಎಂಸಿ ಸಹಾಯಕ ನಿರ್ದೇಶಕ ಕಿರಣ್, ನಗರಸಭೆ ಎಇಗಳಾ ಮಂಜುನಾಥ್, ಶಶಿಕುಮಾರ್,ಲೋಕೋಪಯೋಗಿ ಇಲಾಖೆ ಎಇಇ ಸರಸ್ವತಿ, ಇಂಜಿನಿಯರ್ ರಾಜಶೇಖರ್ ಮತ್ತಿತರರಿದ್ದರು.