ಮಳೆಯಿಂದ ಹಾನಿಯಾದ ರೈತರ ಬೆಳೆಗಳಿಗೆ ಪರಿಹಾರ – ಮುನಿರತ್ನ

ಕೋಲಾರ : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೈತರ ಬೆಳೆಗಳಾದ ರಾಗಿ , ಹೂಕೋಸು ಹಾಗೂ ಟೊಮೊಟೋ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು , ಪರಿಹಾರ ಒದಗಿಸಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು . ಇಂದು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ಜಿಲ್ಲಾದ್ಯಂತ ಅವಿರತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ 250 ಹೆಕ್ಟೇರ್ ತೋಟಗಾರಿಕೆ ಬೆಳೆ ಮತ್ತು ಕೃಷಿ ಬೆಳೆ ನಷ್ಟವಾಗಿದ್ದು , ಮುಖ್ಯವಾಗಿ ರಾಗಿ ಮತ್ತು ಟೊಮೊಟೋ ಬೆಳೆ ಹೆಚ್ಚಾಗಿ ಹಾನಿಗೊಳಗಾಗಿದೆ . ಇದಕ್ಕೆ ಪರಿಹಾರ ನೀಡುವುದಾಗಿ ಸೂಚಿಸಿದ್ದೇನೆ . ಜೊತೆಯಲ್ಲಿ ಮಳೆಗೆ ಮನೆಗಳು ಸಹ ಬಿದ್ದು ಹಾನಿಯಾಗಿದ್ದು , ಅಂತಹ ಕುಟುಂಬಗಳಿಗೆ ಸಹಾಯ ಮಾಡಿ ಅವರ ಮನೆಗಳನ್ನು ಮೊದಲಿನ ರೀತಿಯಲ್ಲಿ ಸರಿಪಡಿಸುವುದಕ್ಕೆ ಸಹ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ . ಅಧಿಕಾರಿಗಳು ಮಳೆ ಹಾನಿ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದಾರೆ . ಯರಗೋಳ ಜಲಾಶಯ ತುಂಬಿರುವುದರಿಂದ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಲು ಈಗಾಗಲೇ ಅದಕ್ಕೆ ಸಂಬಂಧಪಟ್ಟ ಸಚಿವರಿಗೂ ಒತ್ತಾಯಿಸಿದ್ದೇನೆ . ಕಳೆದ ಬಾರಿ ಮಳೆಯಿಂದ ರೈತರಿಗೆ ಯಾವುದೇ ತೊಂದರೆಯಾಗಿಲ್ಲ ಈ ಬಾರಿ ಮಳೆಯಿಂದ ಆದ ನಷ್ಟಕ್ಕೆ ಕೂಡಲೇ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು . ಜಿಲ್ಲೆಯಲ್ಲಿ ಮಳೆಯಿಂದ ರಾಜಕಾಲುವೆ ಮತ್ತು ಒಟ್ಟಾರೆ 120 ಕಿ.ಮೀ ರಸ್ತೆಗಳು ಹಾನಿಯಾಗಿದೆ . ಇದನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು . ಮಳೆ ಪ್ರಮಾಣ ಕಡಿಮೆಯಾದಲ್ಲಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು . ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಾದ ಕೋಲಾರ ತಾಲ್ಲೂಕಿನ ಹೂಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನಷ್ಟವಾದ ಬೆಳೆಗಳ ವೀಕ್ಷಣೆ ಮಾಡಿದರು . ನಂತರ ಇರಗಸಂದ್ರ ಗ್ರಾಮದ ರಾಮಕೃಷ್ಣಪ್ಪ ಎಂಬ ರೈತನ 2 ಎಕರೆ ರಾಗಿ ಬೆಳೆ ಮಳೆಯಿಂದ ಸಂಪೂರ್ಣ ಜಲಾವೃತವಾಗಿದ್ದು , ಅದಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು . ವಿಟ್ಟಪ್ಪನ ಹಳ್ಳಿಯಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿದ್ದು ಇದರಿಂದ ರಸ್ತೆಯಲ್ಲಿ ಜನರು ಓಡಾಡಲು ಹರಸಾಹಸ ಪಡುತ್ತಿದ್ದಾರೆ . ಅದಕ್ಕಾಗಿ ಹೊಸ ರಸ್ತೆಯನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ . ಯಾನಾದಹಳ್ಳಿಯ ಅಲ್ಲಿನ ರೈತರ 3 ಎಕರೆ ಟೊಮೊಟೋ ಬೆಳೆಯ ನಾಶವಾಗಿದೆ . ರೈತರಿಗೆ ಬೆಳೆ ಹಾನಿ ಪರಿಹಾರಕ್ಕಾಗಿ ಸೂಕ್ತ ಅರ್ಜಿ ಸಲ್ಲಿಸುವಂತೆ ತಿಳಿಸಿದರು . ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ 29 ಮನೆಗಳು ನೆಲಸಮಗೊಂಡಿದ್ದು , ಮನೆ ಹಾನಿಯಾದವರಿಗೆ ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ , ಉಪವಿಭಾಗಾಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ , ಜಂಟಿ ಕೃಷಿ ನಿರ್ದೇಶಕರಾದ ರೂಪಾದೇವಿ , ಕೋಲಾರ ತಹಶೀಲ್ದಾರರಾದ ನಾಗರಾಜ್ , ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .