ಜೂ.10 ರಂದು ಕೋಲಾರಕ್ಕೆ ಶೃಂಗೇರಿ ಶ್ರೀಗಳು
ಶಂಕರಮಠದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ನಗರಕ್ಕೆ ದಕ್ಷಿಣಾಮ್ನಾಯ ಶಂಗೇರಿ ಶ್ರೀಶಾರದ ಪೀಠದ ಜಗದ್ಗುರುಗಳಾದ ಶ್ರೀವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಜೂ.10 ರ ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ವಿಜಯಯಾತ್ರೆಯ ಮೂಲಕ ನಗರದ ಶಂಕರಮಠಕ್ಕೆ ಆಗಮಿಸಲಿದ್ದಾರೆ ಎಂದು ಕೋಲಾರ ಶೃಂಗೇರಿ ಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಶ್ರೀಗಳು ಜೂ.10 ರ ಮಧ್ಯಾಹ್ನ 3 ಗಂಟೆಗೆ ನಗರದ ಸರ್ವಜ್ಞ ಪಾರ್ಕ್ ಸಮೀಪ ಸರ್ಕಾರಿ ಕಾಲೇಜು ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಶ್ರದ್ಧಾಭಕ್ತಿಗಳಿಂದ ಬರಮಾಡಿಕೊಂಡು ಸೋಮೇಶ್ವರ ದೇವಾಲಯದ ಹಾದಿಯ ಮೂಲಕ ಶಂಕರಮಠಕ್ಕೆ ಪೂರ್ಣಕುಂಭ, ವೇದ,ನಾದ,ಭಜನೆ, ಸ್ತೋತ್ರಗಳ ಗಾಯನದ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು.
ನಂತರ ಮಠದಲ್ಲಿ ದೇವರುಗಳ ದರ್ಶನ, ಸಭಾ ಕಾರ್ಯಕ್ರಮ ಶ್ರೀಗಳ ಅನುಗ್ರಹ ವಚನ, ರಾತ್ರಿ 8 ಗಂಟೆಯಿಂದ ಚಂದ್ರಮೌಳೀಶ್ವರ ಪೂಜೆ ನಡೆಯುವುದು.
ಜೂ.11 ರ ಶನಿವಾರದಂದು ಬೆಳಗ್ಗೆ 9 ಗಂಟೆಯಿಂದ ಜಿಲ್ಲಾ ಶಾಂಕರ ತತ್ವಪ್ರಸಾರ ಅಭಿಯಾನದ ವತಿಯಿಂದ ಶ್ರೀಶಾಂಕರ ಸ್ತೋತ್ರ ಗಾಯನ, 10 ಗಂಟೆಗೆ ಪಾದುಕಾ ಪೂಜೆ, 11 ಗಂಟೆಗೆ ಜಗದ್ಗುರುಗಳ ದರ್ಶನ ಅನುಗ್ರಹ, ಮಂತ್ರಾಕ್ಷತೆ, ಮಧ್ಯಾಹ್ನ ಭಿಕ್ಷಾ ವಂದನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಜರಿರುವಂತೆ ಅವರು ಕೋರಿದ್ದಾರೆ.