ಸಾಮರಸ್ಯ ಇದ್ದರೆ ಮಾತ್ರ ನೆಮ್ಮದಿ ಸಾಧ್ಯ – ವಿ. ಪ. ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಾಮರಸ್ಯ ಇದ್ದರೆ ಮಾತ್ರ ನೆಮ್ಮದಿ ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಯಚ್ಚನಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸೀತಾರಾಮ ಕಲ್ಯಾಣೋತ್ಸವ ಸಮಾರಂಭದಲ್ಲಿ ಗ್ರಾಮದ ಅಲ್ಪ ಸಂಖ್ಯಾತರಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿ, ಯಚ್ಚನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲಾಗಿದೆ. ಗ್ರಾಮಸ್ಥರಿಗೆ ಅಗತ್ಯವಾದ ಎಲ್ಲ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಎರಡನೇ ಹಂತದಲ್ಲಿ ಕೆಸಿ ವ್ಯಾಲಿ ಕಾಮಗಾರಿ ಕೈಗೊಳ್ಳಲು ಸರ್ಕಾರ ರೂ.450 ಕೋಟಿ ಬಿಡುಗಡೆ ಮಾಡಿದೆ. ಮುದುವಾಡಿ ಕೆರೆಯಿಂದ ಯಚ್ಚನಹಳ್ಳಿ ಗ್ರಾಮಕ್ಕೆ ಕೆಸಿ ವ್ಯಾಲಿ ನೀರು ಹರಿಸಲಾಗುವುದು. ಈ ಕೆರೆಯಿಂದ ಉಳಿದ ಕೆರೆಗಳಿಗೆ ನೀರು ಹರಿಸಲಾಗುವುದು. ತಾಲ್ಲೂಕಿನ 100 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಮಂಜೂರು ಮಾಡಲಾಗಿದೆ. ಶ್ರಮ ಶಕ್ತಿ ಯೋಜನೆಯಡಿ ಗ್ರಾಮದ 90 ಅಲ್ಪ ಸಂಖ್ಯಾತ ಮಹಿಳೆಯರ ಬ್ಯಾಂಕ್ ಖಾತೆಗೆ ತಲಾ ರೂ.10 ಸಾವಿರ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಲ್ಪ ಸಖ್ಯಾತರ ಹಿತ ಕಾಯಲು ಬದ್ಧವಾಗಿದೆ. ಬಿಜೆಪಿ ಅಲ್ಪ ಸಂಖ್ಯಾತರ ವಿರೋಧಿ ಅಲ್ಲ. ಕಾಂಗ್ರೆಸ್ ಮತದಾಸೆಗಾಗಿ ಅವರನ್ನು ದಾರಿತಪ್ಪಿಸುತ್ತಿದೆ. ಬಿಜೆಪಿ ದೇಶ ವಿರೋಧಿಗಳನ್ನು ವಿರೋಧಿಸುತ್ತದೆಯೇ ಹೊರತು ಅಲ್ಪ ಸಂಖ್ಯಾತರನ್ನಲ್ಲ. ಕೇಂದ್ರ ಸರ್ಕಾರ ಮುಸ್ಲಿಂ ಮಹಿಳೆಯರ ಹಿತದೃಷ್ಟಿಯಿಂದ ತಲಾಖ್ ರದ್ದುಪಡಿಸಿದೆ. ಹಾಗಾಗಿ ಮುಸ್ಲಿಂ ಸಮುದಾಯ ಬಿಜೆಪಿಯೊಂದಿಗೆ ಕೈಜೋಡಿಸಬೇಕು. ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಅಭಯಾಂಜನೇಯಸ್ವಾಮಿ ಆಲಯದ ಆವರಣದಲ್ಲಿ ಗ್ರಾಮಸ್ಥರ ವತಿಯಿಂದ ಏರ್ಪಡಿಸಲಾಗಿದ್ದ ಸೀತಾರಾಮ ಕಲ್ಯಾಣೋತ್ಸವ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಜನರು ಭಾಗವಹಿಸಿದ್ದರು. ಸಮಾರಂಭದಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಮಂಜೂರಾತಿ ದಾಖಲೆಗಳನ್ನು ವಿತರಿಸಲಾಯಿತು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕರೆಡ್ಡಿ, ಮುಖಂಡರಾದ ಜಯರಾಮರೆಡ್ಡಿ, ರೆಡ್ಡಪ್ಪ, ನಾರಾಯಣಸ್ವಾಮಿ, ನಾರಾಯಣಗೌಡ, ಶಫಿವುಲ್ಲಾ, ಫೈರೋಜ್, ರಮೇಶ್, ನಾರಾಯಣಸ್ವಾಮಿ, ಕೃಷ್ಣಪ್ಪ ಇದ್ದರು.