ರಾಜ್ಯದ ರೈತರನ್ನು ಹಾಗೂ ಕೋಲಾರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿರುವ 2022-23ರ ಬಜೆಟ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಮಾ. 4 : ಬೊಮ್ಮಾಯಿ ಬಜೆಟ್-2022, ಚುನಾವಣಾ ವರ್ಷದಲ್ಲಾದರೂ ಸಿಹಿಸುದ್ದಿ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಮಳೆಯಾಶ್ರಿತ ಬರಪೀಡಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಪಾಲಿಗೆ ಮರೀಚಿಕೆಯಾಗುತ್ತಿರುವ ಶಾಶ್ವತ ನೀರಾವರಿ ಸೌಲಭ್ಯ. ಮತ್ತೊಮ್ಮೆ ಎತ್ತಿನಹೊಳೆಗೆ ಜೋತುಬಿದ್ದ ಬಸವರಾಜ ಬೊಮ್ಮಾಯಿ, ಬಯಲುಸೀಮೆಗೆ ಗಾಳಿ ಹರಿಸಲಿರುವ ಎತ್ತಿನಹೊಳೆ ಯೋಜನೆಗೆ ಮತ್ತೆ 3000 ಕೋಟಿ ನೀಡಿದ್ದಾರೆ.
ಬೆಂಗಳೂರು ಜಲಮಾಲಿನ್ಯ ತಡೆಯಲು ಜಲಮಂಡಳಿಗೆ 1500 ಕೋಟಿ ಕೊಟ್ಟರೂ, ಕೆಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿಗಳ ಸಂಸ್ಕರಣಾ ಘಟಕಗಳನ್ನು ಮೂರನೇ ಹಂತದ ಶುದ್ದೀಕರಣಕ್ಕೆ ಉನ್ನತೀಕರಿಸುವ ಪ್ರಸ್ತಾವನೆಯಿಲ್ಲ. ತ್ಯಾಜ್ಯ ನೀರಿನ ಮೂರುಹಂತದ ಶುದ್ದೀಕರಣದ ನಿರೀಕ್ಷೆ ಹುಸಿಯಾಗಿದ್ದು, ಜನಸಾಮಾನ್ಯರ ಆಗ್ರಹಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು. ಕೆ ಸಿ ವ್ಯಾಲಿಯ ಮೊದಲ ಹಂತದ ಕೆರೆಗಳನ್ನೇ ತುಂಬಲು ತ್ಯಾಜ್ಯ ನೀರಿನ ಕೊರತೆ, ಅದರಲ್ಲೂ ನೀರಿನ ಗುಣಮಟ್ಟದ ಖಾತ್ರಿ ಇಲ್ಲದಿದ್ದರೂ , ಆಗಲೇ ಎರಡನೇ ಹಂತಕ್ಕೆ ಪೈಪ್ ಲೈನ್ ಅಳವಡಿಸಲು 450 ಕೋಟಿ ಮೀಸಲು ನೀಡಿದ್ದಾರೆ.
ಸುರಕ್ಷಿತ ಕುಡಿಯುವ ನೀರು ಪೂರೈಸಲು ನಿರ್ಧಿಷ್ಠ ಕಾರ್ಯಕ್ರಮ ಘೋಷಿಸಿಲ್ಲ, ಜಲಮೂಲಗಳ ಮಾಲಿನ್ಯ, ವಿಷಮಯವಾಗುತ್ತಿರುವ ಮಣ್ಣು ತಡೆಗೆ ಕಾರ್ಯಯೋಜನೆ ಇರುವುದಿಲ್ಲ.
ಕೋಲಾರ 2100, ಚಿಕ್ಕಬಳ್ಳಾಪುರ 1800, ಬೆಂಗಳೂರು ಗ್ರಾಮಾಂತರ 1500 ಕೆರಗಳನ್ನು ಹೊಂದಿದ್ದು, ಕೆರೆ / ಕುಂಟೆ / ಕಾಲುವೆಗಳ ಪುನರುಜ್ಜೀವನಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಿಲ್ಲ.
ಅತೀ ಹೆಚ್ಚು ಟೊಮ್ಯಾಟೋ, ಮಾವು ಬೆಳೆಯುವ ಜಿಲ್ಲೆಗಳಿಗೆ ಕೊಯ್ಲೋತ್ತರ ಉಪಉತ್ಪನ್ನ ಕೈಗಾರಿಕೆ ಮತ್ತು ಯಥೇಚ್ಛವಾಗಿ ಹೂವು, ಹಣ್ಣು , ತರಕಾರಿ ಬೆಳೆಯುವ ಜಿಲ್ಲೆಗಳಿಗೆ ಶೈತ್ಯಾಗಾರಗಳ ನಿರ್ಮಾಣದ ಭರವಸೆ ಇಟ್ಟಿದ್ದ ರೈತಾಪಿವರ್ಗಕ್ಕೆ ನಿರಾಸೆಯಾಗಿದೆ ಎಂದು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ತಿಳಿಸಿದ್ದಾರೆ.