ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಅನುಚಿತವಾಗಿ ಮಾತನಾಡಿದ್ದಾರೆಂದು ಆಪಾದಿಸಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಮೀನು ವಿವಾದವೊಂದರ ಬಗ್ಗೆ ವಿಚಾರಿಸಲು ಹೋಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್‌.ನಾರಾಯಣಸ್ವಾಮಿ ಅವರೊಂದಿಗೆ ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಅನುಚಿತವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿ ಶುಕ್ರವಾರ , ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ನೇತೃತ್ವದಲ್ಲಿ ಎಂಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು . ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಪ್ರತಿಭಟನ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ , ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರು , ಜನಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಅವರನ್ನು ಪೊಲೀಸ್ ಠಾಣೆಯಲ್ಲಿ ಅನುಚಿತವಾಗಿ ಮಾತನಾಡಿರುವುದು ಖಂಡನೀಯ . ಸಣ್ಣ ಪುಟ್ಟ ವಿಚಾರಗಳಲ್ಲಿ ಮೂಗು ತೂರಿಸುವ ಬದಲು ಸಮಯವನ್ನು ತಾಲ್ಲೂಕು ಅಭಿವೃದ್ಧಿಗೆ ಬಳಸಲಿ ಎಂದು ಹೇಳಿದರು . ಬಡವರು , ಪರಿಶಿಷ್ಟ ಜಾತಿಯವರ ಬಗ್ಗೆ ಕಣ್ಣೀರು ಸುರಿಸುವ ರಮೇಶ್ ಕುಮಾರ್ , ಪರಿಶಿಷ್ಟ ಜಾತಿಯವರಿಗೆ ಸಹಾಯ ಮಾಡಲು ಅಡ್ಡ ಬರುತ್ತಾರೆ . ಜಾತಿಗಳನ್ನು ಎತ್ತಿಕಟ್ಟಿ , ಧರ್ಮಗಳ ನಡು ಒಡಕು ತಂದು ರಾಜಕೀಯ ಮಾಡುತ್ತಾರೆ . ಅದು ಹೆಚ್ಚು ಕಾಲ ನಡೆಯುವುದುದಿಲ್ಲ ಎಂದು ಹೇಳಿದರು . ತಾಲ್ಲೂಕು ಜೆಡಿಎಸ್ ಮುಖಂಡರಾದ ಬಿ.ವೆಂಕಟರೆಡ್ಡಿ , ರಾಜಣ್ಣ , ರವಿ , ಗಣೇಶ್ , ಬೈರಾರೆಡ್ಡಿ , ಕೆ.ಶಿವಪ್ಪ , ನಂಜುಂಡಪ್ಪ , ರಾಮಚಂದಪ್ಪ , ಮಂಜು ಮತ್ತಿತರರು ಮಾತನಾಡಿ , ಶಾಸಕ ರಮೇಶ್‌ ಕುಮಾರ್‌ ಅವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು . ಘಟನೆಯನ್ನು ಖಂಡಿಸಿದರು . ಮುಖಂಡರಾದ ಬಿ.ಎ.ಶಿವಾರಡ್ಡಿ , ಎಂ.ವಿ.ಶ್ರೀನಿವಾಸ್ , ಪೂಲ ಶಿವಾರೆಡ್ಡಿ , ತೂಪಲ್ಲಿ ಆರ್‌.ಚೌಡರೆಡ್ಡಿ , ಆನಂದ್ , ಆಪೂರು ರಾಜು , ಕಾರ್ ಬಾಬು , ಶೀನಾಥ್ , ಮಂಜು ಮತ್ತಿತರರು ಇದ್ದರು . ಜೆಡಿಎಸ್ ಮುಖಂಡರು ಭಾಷಣ ಮುಗಿಸಿ , ದೂರು ನೀಡಲು ಪೊಲೀಸ್ ಠಾಣೆ ಕಡೆ ಹೆಜ್ಜೆ ಹಾಕಿದರು . ಅಷ್ಟರಲ್ಲಿ ವಿರುದ್ಧ ದಿಕ್ಕಿನಿಂದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಎದುರಾಯಿತು . ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಜೆಡಿಎಸ್‌ ವಿರುದ್ಧ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರು ರಸ್ತೆಗಿಳಿದರು .
ಕಾಂಗ್ರೆಸ್ ಮುಖಂಡರಾದ ದಿಂಬಾಲ ಅಶೋಕ್ , ಸಂಜಯ್‌ರೆಡ್ಡಿ , ಎಂ.ಶ್ರೀನಿವಾಸನ್ , ಕೆ.ಕೆ.ಮಂಜು , ಅಯ್ಯಪ್ಪ , ದರ್ಶನ್ , ಶಿವರಾಜ್ , ಹರೀಶ್ ಯಾದವ್ , ಮುನಿರಾಜು , ನಾಗರಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು .

ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಎರಡೂ ಗುಂಪುಗಳ ನಡುವೆ ಕೋಟೆಯಂತೆ ನಿಂತು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದರು . ಸ್ಥಳಕ್ಕೆ ಧಾವಿಸಿ ಬಂದ ಜಿಲ್ಲಾ ಸಹಾಯಕ ರಕ್ಷಣಾಧಿಕರಿ ರಮೇಶ್ , ಎರಡೂ ಪಕ್ಷಗಳ ಮುಖಂಡರನ್ನು ಭೇಟಿಯಾಗಿ , ಮನವಿ ಪತ್ರ ಸ್ವೀಕರಿಸಿದ ಬಳಿಕ ಎರಡೂ ಕಡೆಯವರು ಪ್ರತಿಭಟನೆ ವಾಪಸ್ ಪಡೆದರು . ಡಿವೈಎಸ್‌ಪಿ ಕೆ.ಸಿ.ಗಿರಿ , ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಕೆ.ರವಿಕುಮಾರ್‌ , ಎನ್.ಆರ್.ರಾಘವೇಂದ್ರ , ಪ್ರದೀಪ್ ಸಿಂಗ್ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು .