“ಪ್ರತಿಯೊಬ್ಬ ಮಾನವನೂ ಒಂದು ದೀಪವೇ” ಉಡುಪಿ ಬಿಷಪ್ ಇವರಿಂದ ದೀಪಾವಳಿ ಸಂದೇಶ

JANANUDI.COM NETWORK


“ಮಾನವ ಸಂಬಂಧಗಳನ್ನು ಬೆಳಗಿಸುವ, ಗಾಢಗೊಳಿಸುವ ದೀಪಾವಳಿ ಮತ್ತೊಮ್ಮೆ ಬಂದಿದೆ. ಕೋವಿಡ್ ಸೋಂಕಿನ ಭೀತಿಯಿಂದ ಮುಕ್ತಗೊಳ್ಳುವ ಶುಭ ಸಮಯದಲ್ಲಿ ಇದು ಭರವಸೆಯ ದೀಪವನ್ನು ಬೆಳಗಿಸುವ ಹಬ್ಬ. ಪ್ರತಿಯೊಬ್ಬ ಮಾನವನೂ ಒಂದು ದೀಪವೇ, ಪರರ ಬಾಳನ್ನು ಅರಳಿಸುವುದೇ ಅವನ ಜೀವನದ ಉದ್ದೇಶ” ಧರ್ಮಾಧ್ಯಕ್ಷರು ಅ।ವಂ।ಡಾ।ಜೆರಾಲ್ಡ್ ಲೋಬೊ” ದೀಪಾವಳಿಗೆ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ

“ದುಷ್ಟಶಕ್ತಿಯನ್ನು ನಾಶಪಡಿಸಿ ಒಳ್ಳೆಯತನವು ವಿಜಯ ಸಾಧಿಸಿದ ಘಟನೆಗಳನ್ನು ಧ್ಯಾನಿಸುವುದರೊಂದಿಗೆ, ಎಲ್ಲರೂ ಸಂತೋಷದಿಂದ ಸಿಹಿತಿಂಡಿ ಹಂಚಿ ಸಂಬ್ರಮಪಡುವುದು ಸಾಮಾನ್ಯ. ಎಲ್ಲರ ಮನೆ ಮನಗಳಲ್ಲೂ ಗೆಳೆತನ, ಆತ್ಮೀಯತೆ, ಸಹೋದರತ್ವ ತುಂಬಿ ತುಳುಕುವಂತಾಗಬೇಕು ಎಂಬ ಆಶಯವೂ ಈ ಆಚರಣೆಯಲ್ಲಿದೆ. ಹೀಗೆ ದೀಪಾವಳಿ ಹಬ್ಬದಲ್ಲಿ ಸ್ವಾತಂತ್ರ್ಯ, ಸಂಭ್ರಮ ಹಾಗೂ ಸಹೋದರತ್ವದ ಅಂಶಗಳು ಅಡಕವಾಗಿವೆ. ದೀಪಾವಳಿ ಹಬ್ಬವು ದುಷ್ಟತನದ ಮೇಲೆ ಒಳ್ಳೆಯತನದ ಗೆಲುವನ್ನು ಆಚರಿಸುತ್ತದೆ. ಯಾವಾಗ ಒಳ್ಳೆಯತನವು ಜಾಗೃತಗೊಂಡು ಸಂಘಟಿತವಾಗಿ ಕಾರ್ಯಪೃವೃತ್ತವಾಗುತ್ತದೋ, ಆಗ ದುಷ್ಟತೆಯ ಪ್ರಭಾವವು ಕಡಿಮೆಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿ ತನ್ನಲ್ಲಿರುವ ಅಸುರೀ ಪೃವೃತ್ತಿ ಹಾಗೂ ವಿದ್ವಂಸಕ ಪೃವೃತ್ತಿಯನ್ನು ಕಡಿಮೆಮಾಡಿ ದೈವೀಪ್ರವೃತ್ತಿಯನ್ನು ಸ್ಥಾಪಿಸಬೇಕು. ಕೆಟ್ಟತನವನ್ನು ಹಾಗೂ ಅಹಂಕಾರದ ಉಚ್ಛಾಟನೆಯನ್ನು ಮಾಡಿ ಆತ್ಮಜ್ಯೋತಿಯನ್ನು ಪ್ರಕಾಶಿಸಬೇಕು. ತಾನೇ ಉರಿದು ಜಗಕೆ ಬೆಳಕು ನೀಡುವ ಜ್ಯೋತಿಯನ್ನು ನೋಡುತ್ತಾ ಮನುಷ್ಯ ತನ್ನ ಸ್ವಾರ್ಥವನ್ನು ಮರೆತು, ತಾನೂ ಜ್ಯೋತಿಯಂತೆ ಇತರರಿಗೆ ನೆರವಾಗಲು ಈ ಹಬ್ಬವು ಪ್ರೇರಣೆಯನ್ನು ನೀಡುತ್ತದೆ.
‘ಉರಿಯುತ್ತಿರುವ ದೀಪವನ್ನು ಪಾತ್ರೆಯ ಒಳಗಾಗಲಿ, ಮಂಚದ ಕೆಳಗಾಗಲಿ ಇಡುವುದಿಲ್ಲ! ಅದನ್ನು ದೀಪಸ್ತಂಭದ ಮೇಲೆ ಇಡಲಾಗುತ್ತದೆ. ಆಗ ಪ್ರತಿಯೊಂದು ಸ್ಪಷ್ಟವಾಗಿ ಗೋಚರವಾಗುವುದು’ – ನಾವು ಸತ್ಕ್ರಿಯೆಗಳೆಂಬ ದೀಪಗಳ ಮೂಲಕ ನಮ್ಮ ಆಂತರಿಕ ಬೆಳಕನ್ನು ಇತರರಿಗೆ ನೀಡಿ ಅವರಿಗೆ ದಾರಿದೀಪಗಳಾಗಬೇಕು. ಜನರು ನಮ್ಮ ಬೆಳಕಿನಲ್ಲಿ ಮುಂದೆ ಸಾಗುವಂತಾಗಬೇಕು.ನಾಡಿನ ಸಮಸ್ತ ಬಾಂಧವರಿಗೆ ದೀಪಾವಳಿ ಹಬ್ಬದ ಶುಭಾಷಯಗಳನ್ನು ಕೋರುತ್ತೇನೆ. ಬೆಳಕಿನ ಮೂಲವಾದ ಭಗವಂತ, ನಮ್ಮೆಲ್ಲರ ಹೃದಯಗಳನ್ನು, ಮನೆ-ಮನಗಳನ್ನು ಬೆಳಗಿಸಿ ಶಾಂತಿ ಸಮೃದ್ಧತೆಯನ್ನು ದಯಪಾಲಿಸಲಿ” ಎಂದು ಅವರು ಹರಿಸಿದ್ದಾರೆ.