ಕೋವಿಡ್ 3ನೇ ಅಲೆ ಕುರಿತು ಮಕ್ಕಳಿಗೆ ಜಾಗೃತಿ: ಚಂದನ್ ಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜು.22: ಕೋವಿಡ್ 3ನೇ ಅಲೆ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವ ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ತುಂಬಲು ಸೇವಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಚಂದನ್‍ಗೌಡ ಫೌಂಡೇಷನ್ ಅಧ್ಯಕ್ಷರೂ ಆದ ಉದ್ಯಮಿ ಚಂದನ್ ಗೌಡ ಹೇಳಿದರು.
ನಗರದ ಮೆಥೋಡಿಸ್ಟ್ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಮಾಸ್ಕ್, ಮಿನರಲ್ ವಾಟರ್ ಮತ್ತು ಬಿಸ್ಕತ್ ಪ್ಯಾಕ್ ವಿತರಿಸಿ ಮಾತನಾಡಿ, ಕೋಲಾರ ತಾಲೂಕಿನ 31 ಪರೀಕ್ಷಾ ಕೇಂದ್ರಗಳಲ್ಲೂ ಏಕ ಕಾಲಕ್ಕೆ ಮಕ್ಕಳಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಕೋಲಾರ ನಗರದಲ್ಲಿ ಮಾತ್ರವೇ 16 ಕೇಂದ್ರಗಳಿದ್ದು ಬೆಳಿಗ್ಗೆ 8.30ರಿಂದಲೇ ಕಾರ್ಯಾಚರಣೆ ಆರಂಭವಾಗಿದೆ. ಕೆಲವೆಡೆ ಪರೀಕ್ಷೆ ಮುಗಿಸಿಕೊಂಡು ಬಂದಾಗ ಮಕ್ಕಳಿಗೆ ಸವಲತ್ತು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳು ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಪಾಲಿಸುವ ಮೂಲಕ ಧೈರ್ಯವಾಗಿ ಪರೀಕ್ಷೆಯನ್ನು ಬರೆಯುವಂತೆ ಆತ್ಮವಿಶ್ವಾಸ ತುಂಬಿದರು.
ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡುವಂತವರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಮಾರನಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ಚಂದ್ರಶೇಖರ್, ಮುಖಂಡ ಬಿ.ಸಿ.ಅಶೋಕ್, ಸಂಪತ್, ಮೆಥೋಡಿಸ್ಟ್ ಚರ್ಚ್ ಅಧ್ಯಕ್ಷ ಸುಧೀರ್, ಪಾಲ್‍ರಾಜ್, ಪ್ರಿನ್ಸಿಪಾಲ್ ಸವಿತಾ, ಎನ್‍ಎಸ್‍ಯುಐ ಇಫ್ತಿಕಾರ್, ನದೀಂ, ಅರ್‍ಫತ್, ಆಶಾ ಕಾರ್ಯಕರ್ತೆ ಮುನಿರತ್ನ, ಪದ್ಮಾ, ಸ್ವಯಂ ಸೇವಕಿ ಜಿ.ವಿ.ಸವಿತಾ, ಅರುಣ್ ಕುಮಾರ್ ಉಪಸ್ಥಿತರಿದ್ದರು.