ಕೋಲಾರ ಇಡೀ ಜಿಲ್ಲೆಗೆ ವಿದ್ಯುತ್ ಪೂರೈಸುವ ಕೆಪಿಟಿಸಿಎಲ್‌ನ ೨೨೦ ಕೆಎ.ಸ್ಟೇಷನ್‌ನ ೧೧೦ ಎಂ.ವಿ.ಎ ಪವರ್ ಸ್ವೀಕರಣಾ ಟ್ರಾನ್ಸ್‌ಫಾರ‌ ಆಕಸ್ಮಿಕವಾಗಿ ಆಗ್ನಿಗೆ ಆಹುತಿಯಾಗಿ ಸುಮಾರು ೫ ಕೋಟಿಗೂ ನಷ್ಟ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ :- ಇಡೀ ಜಿಲ್ಲೆಗೆ ವಿದ್ಯುತ್ ಪೂರೈಸುವ ಕೆಪಿಟಿಸಿಎಲ್‌ನ ೨೨೦ ಕೆಎ.ಸ್ಟೇಷನ್‌ನ ೧೧೦ ಎಂ.ವಿ.ಎ ಪವರ್ ಸ್ವೀಕರಣಾ ಟ್ರಾನ್ಸ್‌ಫಾರ‌ ಆಕಸ್ಮಿಕವಾಗಿ ಆಗ್ನಿಗೆ ಆಹುತಿಯಾಗಿ ಸುಮಾರು ೫ ಕೋಟಿಗೂ ನಷ್ಟ ಸಂಭವಿಸಿದೆ ಮತ್ತು ದಟ್ಟ ಹೊಗೆ ಆಕಾಶದೆತ್ತರಕ್ಕೆ ಆವರಿಸಿದ್ದು , ಜಿಲ್ಲಾದ್ಯಂತ ಕರೆಂಟ್ ಕಟ್ ಆಗಿದೆ . ನಗರದ ಹಾರೋಹಳ್ಳಿ ಸಮೀಪ ಇರುವ ಕೆಪಿಟಿಸಿಎಲ್‌ನ ೨೨೦ ಕೆವಿ ಸ್ಟೇಷನ್‌ನಲ್ಲಿ ಈ ದುರಂತ ಸಂಭವಿಸಿದ್ದು , ೬೬ ಕೆವಿ ಬುಸ್ಟಿಂಗ್ ಪ್ಲಾಷ್‌ನಿಂದಾಗಿ ಆಕಸ್ಮಿಕವಾಗಿ ಬೆಂಕಿ ಹರಡಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ . ಅಧಿಕಾರಿಗಳು ಹೇಳುವಂತೆ ಈ ಟ್ರಾನ್ಸ್‌ಫಾರರ್‌ನಲ್ಲಿ ೩೯ ಸಾವಿರ ಲೀಟರ್ ಓಸೀಲ್‌ ಆಯಿಲ್ ತುಂಬಿರುವುದರಿಂದ ಬೆಂಕಿ ನಂದಿಸಲು ಕಷ್ಟವಾಗಿದ್ದು , ದಟ್ಟಹೊಗೆ ಆಕಾಶದೆತ್ತರಕ್ಕೆ ಆವರಿಸುವ ಮೂಲಕ ಕೆಲಕಾಲ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು . ನೂರಾರು ಜನ ಕೆಪಿಟಿಸಿಎಲ್ ಸ್ಟೇಷನ್‌ನತ್ತ ಧಾವಿಸಿದ್ದು , ದಟ್ಟಹೊಗೆಯ ತೀವ್ರತೆ ಕಂಡ ಅಕ್ಕಪಕ್ಕದ ನಿವಾಸಿಗಳು ತಮ್ಮ ಮನೆಗಳಿಗೂ ವ್ಯಾಪಿಸುವುದೇ ಎಂಬ ಆತಂಕ ಹೊರಹಾಕಿದರಾದರೂ , ಇದು ಟ್ರಾನ್ಸ್‌ಫಾರರ್‌ನಲ್ಲಿನ ಆಯಿಲ್‌ಗೆ ಹೊತ್ತಿಕೊಂಡಿರುವ ಬೆಂಕಿಯಾಗಿದ್ದು , ಅಕ್ಕಪಕ್ಕ ವ್ಯಾಪಿಸದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು .

ಅಗ್ನಿಶಾಮಕದಳದ
ವಾಹನಗಳು ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಆಯಿಲ್‌ನ ಕಾರಣವಾಗಿ ದಟ್ಟಹೊಗೆ ಮುಗಿಲೆತ್ತರಕ್ಕೆ ಹರಡುತ್ತಿದ್ದಂತೆ ೪ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದು , ಸುಮಾರು ೪ ಗಂಟೆಗಳ ಕಾಲ ಸತತ ಪ್ರಯತ್ನದಿಂದ ಅಗ್ನಿಯನ್ನು ಆರಿಸಲಾಗಿದ್ದು , ಹೊಗೆ ಆವರಿಸಿತ್ತು . ಕೊವಿಚ್‌ನಿಂದಾಗಿ ಸರ್ವೀಸ್ ಮಾಡಿಲ್ಲ ಟ್ರಾನ್ಸ್ಫರರ್‌ಅನ್ನು ಪ್ರತಿ ೩ ತಿಂಗಳಿಗೊಮ್ಮೆ ಸರ್ವೀಸ್ ಮಾಡಬೇಕಾಗಿದ್ದು , ಇತ್ತೀಚೆಗೆ ಕೋವಿಡ್‌ನಿಂದ ಆಸ್ಪತ್ರೆಗಳಿಗೆ ಸತತ ೨೪ ಗಂಟೆ ಕರೆಂಟ್ ಒದಗಿಸಬೇಕಾದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಒಂದೂವರೆವರ್ಷದಿಂದ ಸರ್ವೀಸ್ ಮಾಡಿರಲಿಲ್ಲ ಎಂದು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಾಥ್ ತಿಳಿಸಿದರು . ಕೋಲಾರ ಜಿಲ್ಲೆ ಪೂರ್ತಿ ಕಗ್ಗತ್ತಲಲ್ಲಿ ಕೆಪಿಟಿಸಿಎಲ್‌ನ ೨೨೦ ಕೆವಿ.ಸೇಷನ್‌ನ ೧೦೦ ಎಂ.ವಿ.ಎ ಪವರ್ ಟ್ರಾನ್ಸ್‌ಫಾರ‌ ಸುಟ್ಟುಹೋಗಿರುವ ಕಾರಣ ಬೇರೆ ಕಡೆಗಳಿಂದ ವಿದ್ಯುತ್ ಸರಬರಾಜಿಗೆ ಕ್ರಮವಹಿಸಲು ಮಧ್ಯರಾತ್ರಿವರೆಗೂ ಸಿಬ್ಬಂದಿ ಕೆಲಸ ಮಾಡಬೇಕಾಗಿದೆ ಎಂದು ಇಇ ಅವರು ತಿಳಿಸಿದರು . ಇಡೀ ಜಿಲ್ಲೆಯಲ್ಲಿ ಮಧ್ಯರಾತ್ರಿವೇಳೆಗೆ ಕರೆಂಟ್ ಬರುವ ಸಾಧ್ಯತೆ ಇದ್ದು , ಅಧಿಕಾರಿಗಳು , ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆ , ಜನತೆಯ ಸಹಕಾರವೂ ಬೇಕು ಎಂದರು . ಲಭ್ಯ ಮೂಲಗಳಿಂದ ಮಧ್ಯರಾತ್ರಿವೇಳೆಗೆ ಕರೆಂಟ್ ಒದಗಿಸಲು ಇಲಾಖೆ ಇಂಜಿನಿಯರ್‌ಗಳು , ಸಿಬ್ಬಂದಿ ಹರಸಾಹಸ ಪಡುತ್ತಿದ್ದು , ಅಗ್ನಿಶಾಮಕ ಸಿಬ್ಬಂದಿಯ ಸಕಾಲಕ ಕ್ರಮದಿಂದಾಗಿ ಪಕ್ಕದಲ್ಲೇ ಇದ್ದ ಮತ್ತೊಂದು ಟ್ರಾನ್ಸ್‌ಫಾರರ್‌ ಉಳಿದುಕೊಂಡಿದೆ . ಸ್ಥಳಕ್ಕೆ ಕೆಪಿಟಿಸಿಎಲ್‌ನ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು , ಅಗ್ನಿ ಅನಾಹುತಕ್ಕೆ ಕಾರಣಗಳನ್ನು ಪತ್ತೆಹಚ್ಚುವುದರ ಜತೆಗೆ ಜಿಲ್ಲೆಗೆ ಕರೆಂಟ್ ಶೀಘ್ರ ಒದಗಿಸುವ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ .