14 ಆಕ್ಸಿಜನ್ ಕಾನ್ಸಂಟ್ರೇಟರ್ಸ್, 5 ಸಾವಿರ ಮೆಡಿಕಲ್ ಕಿಟ್ ವಿತರಣೆ ಕೋವಿಡ್‍ಮುಕ್ತ ಕೋಲಾರಕ್ಕೆ ಮತ್ತಷ್ಟು ನೆರವಿಗೆ ಬದ್ದ-ಡಾ.ವೈ.ಎ.ಎನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಸೋಂಕಿತರ ರಕ್ಷಣೆಗಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗೆ ಈಗಾಗಲೇ 50 ಲಕ್ಷ ನೀಡಿದ್ದು, ತಮ್ಮ ಶಾಸಕರ ನಿಧಿಯಲ್ಲಿರುವ ಇನ್ನೂ 50 ಲಕ್ಷ ರೂಗಳನ್ನು ಕೋವಿಡ್ ಮುಕ್ತ ಕೋಲಾರಕ್ಕಾಗಿ ಅಗತ್ಯ ವೈದ್ಯಕೀಯ ಸೌಲಭ್ಯಗಳಿಗೆ ಬಳಸಿಕೊಳ್ಳುವಂತೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ವಿಧಾನಪರಿಷತ್ ಶಾಸಕರ ನಿಧಿಯಿಂದ ಖರೀದಿಸಿದ 14 ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಂತರಿಸಿ, 5 ಸಾವಿರ ಮೆಡಿಕಲ್ ಕಿಟ್ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನು ಕಾಡುತ್ತಿದೆ, ಇದರ ತಡೆಗೆ ರಾಜ್ಯ,ಕೇಂದ್ರ ಸರ್ಕಾರ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದ ಅವರು, ತಮ್ಮ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ 5 ಜಿಲ್ಲೆಗಳಿಗೆ 50 ಲಕ್ಷ ರೂ ವೆಚ್ಚದಲ್ಲಿ 72ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಒದಗಿಸುತ್ತಿರುವುದಾಗಿ ತಿಳಿಸಿದರು.


ಶ್ರೀನಿವಾಸಪುರಕ್ಕೆ ಸುಸಜ್ಜಿತ ಆಂಬ್ಯುಲೆನ್ಸ್


ಶ್ರೀನಿವಾಸಪುರಕ್ಕೆ ಐಸಿಯು ಒಳಗೊಂಡ ಸುಸಜ್ಜಿತ ಆಂಬ್ಯುಲೆನ್ಸ್ ನೀಡುವಂತೆ ಕೋರಿದ್ದು, ತಮ್ಮ ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಿಂದ ಕೂಡಲೇ ಒದಗಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿರುವುದಾಗಿ ತಿಳಿಸಿದರು.
ಕೋವಿಡ್ ತಡೆಗೆ ಅಗತ್ಯವಿರುವ ವೈದ್ಯಕೀಯ ಪರಿಕರಗಳ ಅಗತ್ಯತೆಗೆ ತಕ್ಕಂತೆ ಖರೀದಿಸಲು ಇನ್ನು ಅಗತ್ಯವಿದ್ದಲ್ಲಿ ತಮ್ಮ ಶಾಸಕರ ನಿಧಿ ಬಳಸಲು ಸಿದ್ದ ಎಂದ ಅವರು, ಕೋವಿಡ್ ಓಡಿಸಲು ಜಾತ್ಯಾತೀತ,ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ಪ್ರತಿ ತಾಲ್ಲೂಕಿಗೆ ತಲಾ 300 ರಂತೆ ಇಡೀ ತಮ್ಮ ಕ್ಷೇತ್ರದಾದ್ಯಂತ 5 ಸಾವಿರ ಮೆಡಿಕಲ್ ಕಿಟ್ ನೀಡುತ್ತಿರುವುದಾಗಿ ತಿಳಿಸಿದ ಅವರು, ಇದರಲ್ಲಿ ಸೋಂಕಿತರಿಗೆ ಅಗತ್ಯವಿರುವ ವೈದ್ಯಕಿಯ ಔಷಧಿಗಳು, 5 ಮಾಸ್ಕ್,ಸ್ಯಾನಿಟೈಸರ್ ಒಳಗೊಂಡಿದೆ ಎಂದು ವಿವರಿಸಿದರು.
ಶಿಕ್ಷಕರಿಲ್ಲದ ಗ್ರಾಮವಿಲ್ಲ, ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ನಿಮ್ಮ ಸಹಕಾರ ಅಗತ್ಯವಿದೆ, ಪ್ರತಿಗ್ರಾಮದಲ್ಲೂ ಲಸಿಕೆ ಹಾಕಿಸಿಕೊಳ್ಳಲು ಅರಿವು ಮೂಡಿಸಿ ಎಂದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿ, ಜಿಲ್ಲೆಗೆ ಅಗತ್ಯವಾದ ಪ್ರಮಾಣದಲ್ಲಿ ಲಸಿಕೆ ಕೊರತೆ ನೀಗಿಸಲು ನಿರಂತರವಾಗಿ ನೆರವಾಗುತ್ತಿರುವುದನ್ನು ಸ್ಮರಿಸಿದರು.
ಕೋವಿಡ್ ಮಾರಿ ಹಳ್ಳಿಗಳಿಗೆ ಹೆಚ್ಚು ವ್ಯಾಪಿಸುತ್ತಿದ್ದು, ಇದನ್ನು ತಡೆಯಲು ಲಸಿಕೆಯೊಂದೇ ಅಸ್ತ್ರ ಎಂದ ಅವರು, ಕನಿಷ್ಟ ಶೇ.80 ರಷ್ಟು ಮಂದಿಗೆ ಲಸಿಕೆ ಹಾಕಿಸಿದ್ದೇ ಆದರೆ ನಾವು ಕೊರೋನಾ ವಿರುದ್ದ ಗೆದ್ದಂತೆ ಎಂದರು.
ನಿರ್ಮಿತಿ ಕೇಂದ್ರದ ನಿರ್ದೇಶಕ ನಾರಾಯಣಗೌಡ, ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳ ಬಳಕೆ ಮತ್ತು ಅದರ ಅಗತ್ಯತೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಜಿಪಂ ಸದಸ್ಯೆ ಅಶ್ವಿನಿ, ನಗರಸಭಾ ಸದಸ್ಯ ಮುರಳಿಗೌಡ, ಸಿಂಡಿಕೇಟ್ ಸದಸ್ಯ ಉದಯಕುಮಾರ್,ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು,ಸಂಘದ ಮುಖಂಡರಾದ ಎಸ್.ಚೌಡಪ್ಪ, ಟಿ.ಕೆ.ನಟರಾಜ್,ಚಂದ್ರಪ್ಪ, ಗೋಪಿಕೃಷ್ಣನ್,ರತ್ನಪ್ಪ, ರವಿರೆಡ್ಡಿ, ಅಪ್ಪಯ್ಯಗೌಡ, ಎಂ.ನಾಗರಾಜ್,ವಿ.ಮುರಳಿಮೋಹನ್, ಖಾಸಗಿ ಶಾಲೆಗಳ ಮುನಿಯಪ್ಪ, ಶ್ರೀಕೃಷ್ಣ, ಬಿಜೆಪಿಯ ವಿಜಯಕುಮಾರ್,ತಿಮ್ಮರಾಯಪ್ಪ, ರಾಜೇಶ್‍ಸಿಂಗ್, ಕೆಂಬೋಡಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು
.