ಶಾಸಕರ ನಿಧಿಯಿಂದ ಸರ್ಕಾರಿ ಆಸ್ಪತ್ರೆಗೆ 72 ಆಮ್ಲಜನಕ ಸಾಂದ್ರಕ ಖರೀದಿ ಸೋಂಕಿತ ಶಿಕ್ಷಕರಿಗೆ ಆದ್ಯತೆ ಮೇಲೆ ಬಳಸಿ-ಡಾ.ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋಲಾರ ಸೇರಿದಂತೆ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಐದು ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಿಗೆ ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿಧಿಯ ಮೂಲಕ ತಲಾ 5 ಲೀಟರ್ ಸಾಮಥ್ರ್ಯದ 72 ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಮೂಲಕ ಇವುಗಳನ್ನು ಕೋವಿಡ್ ಸೋಂಕಿಗೆ ತುತ್ತಾದ ಶಿಕ್ಷಕರು,ಉಪನ್ಯಾಸಕರಿಗೆ ಆದ್ಯತೆ ಮೇರೆಗೆ ಬಳಸುವಂತೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಕೋರಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ತಲಾ 2 ಕೋಟಿ ರೂ ಅನುದಾನವನ್ನು ಒದಗಿಸುತ್ತಿದ್ದು, ಅದರಲ್ಲಿ 2020-21ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸುವಾಗ ಈ ಹಣದಲ್ಲಿ ಶೇ.25 ರಷ್ಟನ್ನು ಕೋವಿಡ್ ಸಂಬಂಧಿತ ಆಸ್ಪತ್ರೆಗಳ ಸುಧಾರಣೆಗೆ ಬಳಸಿಕೊಳ್ಳಲು ಕೋರಿದ್ದಾರೆ.
ಈ ಹಣದ 50.40 ಲಕ್ಷ ವೆಚ್ಚದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಐದು ಜಿಲ್ಲೆಗಳ ತಮ್ಮ ಮತ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ,ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಿಗೆ ತಲಾ 5 ಲೀ.ಸಾಮಥ್ರ್ಯದ 70 ಸಾವಿರ ರೂ ಘಟಕ ವೆಚ್ಚದಲ್ಲಿ ಆಕ್ಸಿಜನ್ ಕಾನ್ಸರ್‍ಟ್ರೇಟರ್‍ಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅದರಂತೆ ಕೋಲಾರ ಜಿಲ್ಲೆಗೆ 14 ಕಾನ್ಸರ್‍ಟ್ರೇಟರ್‍ಗಳು, ಚಿಕ್ಕಬಳ್ಳಾಪುರ ಜಿಲ್ಲೆಗೆ 12, ತುಮಕೂರು ಜಿಲ್ಲೆಗೆ 22, ಚಿತ್ರದುರ್ಗ ಜಿಲ್ಲೆಗೆ 14 ಹಾಗೂ ದಾವಣಗೆರೆ ಜಿಲ್ಲೆಗೆ 10 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸುವಂತೆ ಅವರ ಪತ್ರದಲ್ಲಿ ಡಿಸಿಯವರಿಗೆ ವಿನಂತಿಸಿದ್ದಾರೆ.
ತಮ್ಮ ಅನುದಾನದಲ್ಲಿ ಖರೀದಿಸುತ್ತಿರುವ ಆಕ್ಸಿಜನ್ ಕಾನ್ಸರ್‍ಟ್ರೇಟರ್‍ಗಳನ್ನು ಕೋಲಾರ ಜಿಲ್ಲಾ ಎಸ್‍ಎನ್‍ಆರ್ ಆಸ್ಪತ್ರೆಗೆ 4 ಹಾಗೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 2 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸುವಂತೆ ಪತ್ರದಲ್ಲಿ ವೈ.ಎ.ನಾರಾಯಣಸ್ವಾಮಿ ಸೂಚಿಸಿದ್ದಾರೆ.
ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 2 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸಲು ಸೂಚಿಸಿರುವ ಅವರು, ತುಮಕೂರು ಜಿಲ್ಲೆಯ ಜಿಲ್ಲಾಸ್ಪತ್ರೆಗೆ 4 ಮತ್ತು ಉಳಿದಂತೆ ಅಲ್ಲಿನ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 2 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸಲು ಸೂಚಿಸಿದ್ದಾರೆ.
ಹಾಗೆಯೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ 4 ಹಾಗೂ ಅಲ್ಲಿನ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 2 ಕಾನ್ಸರ್‍ಟ್ರೇಟರ್‍ಗಳು, ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಗೆ 4, ಜಗಳೂರು ಮತ್ತು ಹರಿಹರದ ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ತಲಾ 3 ಕಾನ್ಸರ್‍ಟ್ರೇಟರ್‍ಗಳನ್ನು ಒದಗಿಸಲು ಡಿಸಿಯವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.