ಕೋಟೇಶ್ವರ : ಬ್ರಾಹ್ಮಣ ಪರಿಷತ್ ಸರಣಿ ಕಾರ್ಯಕ್ರಮ

ವರದಿ : ಕೆ.ಜಿ.ವೈದ್ಯ,ಕುಂದಾಪುರ


ಕುಂದಾಪುರ : ಬ್ರಾಹ್ಮಣರ ಸಂಘಟನೆ ಮತ್ತು ಅಭ್ಯುದಯಕ್ಕಾಗಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಕಾರ್ಯೋನ್ಮುಖವಾಗಿದೆ. ಇದರ ವಿವಿಧ ವಲಯಗಳು ಈ ನಿಟ್ಟಿನಲ್ಲಿ ರಚನಾತ್ಮಕ ಕೆಲಸಗಳನ್ನು ನಡೆಸುತ್ತಿದ್ದು, ಸಂಘಟನೆಗೆ ಬಲ ತುಂಬಿವೆ. ಆಯಾಯ ವಲಯದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದರೊಂದಿಗೆ, ಅಶಕ್ತರು, ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ  ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ  ಹೇಳಿದರು. 
ಕೋಟೇಶ್ವರ ವಲಯ ಬ್ರಾಹ್ಮಣ ಪರಿಷತ್ ನ ತಿಂಗಳ ಸರಣಿ ಕಾರ್ಯಕ್ರಮ ಮಾಲಿಕೆಯಲ್ಲಿ ಆಕ್ಟೊಬರ್ ತಿಂಗಳ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. 
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕೋಣಿ ಕೃಷ್ಣದೇವ ಕಾರಂತ ಮತ್ತು ಮಾಧ್ಯಮ ಕ್ಷೇತ್ರದ ಸಾಧಕಿ ಅಕ್ಷತಾ ಐತಾಳರನ್ನು ವಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಲಯ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ವಿಜಯಲಕ್ಷ್ಮಿಯವರಿಗೆ ವೈದ್ಯಕೀಯ ನೆರವು ಮೊತ್ತವನ್ನು ಹಸ್ತಾಂತರಿಸಲಾಯಿತು. 
  ಸನ್ಮಾನಗೊಂಡ ಕೃಷ್ಣದೇವ ಕಾರಂತ, ಅಕ್ಷತಾ ಐತಾಳ ಹಾಗೂ ಪ್ರತಿಭಾ ಪುರಸ್ಕೃತರ ಪರವಾಗಿ ಮನೀಶ್ ಹೆಬ್ಬಾರ್ ಮಾತನಾಡಿದರು.
ಕೋಟೇಶ್ವರ ವಲಯದ ನೂತನ ಸದಸ್ಯರನ್ನು ಗೌರವಿಸಲಾಯಿತು. ಯುವ ವಿಪ್ರ ವೇದಿಕೆಯ ಅಧ್ಯಕ್ಷ ಕೌಶಿಕ್ ಅಡಿಗ, ವಲಯ ಕಾರ್ಯದರ್ಶಿ ನಾಗೇಂದ್ರ ಬಿಳಿಯ, ವಲಯ ಮಹಿಳಾ ವೇದಿಕೆ ಕಾರ್ಯದರ್ಶಿ ನಾಗರತ್ನ ಉಡುಪ, ವಲಯ ಖಜಾಂಚಿ ನಾಗೇಶ್ ರಾವ್ ಪರಿಚಯಿಸಿದರು.
ವಲಯ ಅಧ್ಯಕ್ಷ  ಬಿ. ಎನ್. ಪ್ರಕಾಶ್ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಸ್ವಾಗತಿಸಿದರು. ಗೌರವಾಧ್ಯಕ್ಷ ಗಣಪಯ್ಯ ಚಡಗ ಪ್ರಸ್ತಾವನೆಗೈದರು. ಜಿಲ್ಲಾ ಕಾರ್ಯದರ್ಶಿ ಗಣೇಶ್ ರಾವ್, ವಲಯ ಪೂರ್ವಾಧ್ಯಕ್ಷ ವೈ. ಎನ್. ವೆಂಕಟೇಶ ಮೂರ್ತಿ ಭಟ್, ತಾಲೂಕು ಪರಿಷತ್ ಕಾರ್ಯದರ್ಶಿ ಸತೀಶ್ ಅಡಿಗ, ವಲಯ ಮಹಿಳಾ ವೇದಿಕೆ ಪೂರ್ವಾಧ್ಯಕ್ಷೆ ಆರತಿ ಉಪಾಧ್ಯ ಉಪಸ್ಥಿತರಿದ್ದರು. ಅಶೋಕ್ ಕುಮಾರ್ ಹೊಳ್ಳ ಕಾರ್ಯಕ್ರಮ ನಿರೂಪಿಸಿ, ಕೌಶಿಕ್ ಅಡಿಗ ವಂದಿಸಿದರು.