ಶ್ರೀನಿವಾಸಪುರ: ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕ ರಾಮಕೃಷ್ಣಪ್ಪ ಅವರ ಮೇಲೆ ಹಲ್ಲೆ 

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕ ರಾಮಕೃಷ್ಣಪ್ಪ ಅವರ ಮೇಲೆ ಹಲ್ಲೆ 
ಶ್ರೀನಿವಾಸಪುರ: ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎನ್.ರಾಮಕೃಷ್ಣಪ್ಪ ಅವರ ಮೇಲೆ ವ್ಯಕ್ತಿಯೊಬ್ಬರು ತೀವ್ರ ಹಲ್ಲೆ ನಡೆಸಿರುವ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ.
  ರಾಮಕೃಷ್ಣಪ್ಪ ಅವರನ್ನು ತಾಲ್ಲೂಕಿನ ಯದರೂರು ಗ್ರಾಮದ ಸಮೀಪ ಅರ್ಜಿದಾರ ನಿಬ್ಬಾವುಲ್ಲಾ ಅವರ ರಿ ಸ.ನಂ 211/2 ಜಮೀನು ಅಳತೆ ಮಾಡಿ ಹದ್ದುಬಸ್ತು ಮಾಡಿಕೊಡಲು ನಿಯೋಜಿಸಲಾಗಿತ್ತು. ಜಮೀನಿನ ಬಾಜುದಾರರಿಗೆ ಮುಂಚಿತವಾಗಿಯೇ ನೋಟಿಸ್‌ ನೀಡಿ ಫೆ.25 ರಂದು ಬಾಜೂದಾರರು ಹಾಗೂ ಪೊಲೀಸ್ ಸಿಬ್ಬಂದಿ ಸಮಕ್ಷಮದಲ್ಲಿ ಅಳತೆ ಮಾಡಿ ಗಡಿ ಗುರುತಿಸಲಾಗಿತ್ತು ಎಂದು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಮೇಲ್ವಿಚಾರಕ ಜಗದೀಶ್ ತಿಳಿಸಿದ್ದಾರೆ.
  ಭೂಮಾಪಕ ಕೆ.ಎನ್‌.ರಾಮಕೃಷ್ಣಪ್ಪ ಬುಧವಾರ ಪಟ್ಟಣದ ಹೋಟೆಲ್‌ ಒಂದರಲ್ಲಿ ಊಟ ಮಾಡುತ್ತಿದ್ದಾಗ, ಅಳತೆ ಮಾಡಲಾಗಿದ್ದ ಜಮೀನಿನ ಬಾಜೂದಾರ ಯದರೂರು ಗ್ರಾಮದ ಚೌಡಪ್ಪ ಇದ್ದಕ್ಕಿದಂತೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
  ಗಾಯಾಳು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕು ಭೂಮಾಪಕರ ಸಂಘದ ಅಧ್ಯಕ್ಷ ಆಂಜಿನಪ್ಪ ಹಲ್ಲೆಯನ್ನು ಖಂಡಿಸಿದ್ದಾರೆ. ಹಲ್ಲೆ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.