ಅ.23 ರಂದು ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಿಗೆ ಚಾಲನೆ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಹಕಾರ ನೀಡಿ-ಡಿಡಿಪಿಐ ರತ್ನಯ್ಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಅ.23 ರಂದು ಜಿಲ್ಲಾಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಿಗೆ ಚಾಲನೆ
ಮಕ್ಕಳ ಸರ್ವಾಂಗೀಣ ಪ್ರಗತಿಗೆ ಸಹಕಾರ ನೀಡಿ-ಡಿಡಿಪಿಐ ರತ್ನಯ್ಯ

ಕೋಲಾರ:- ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಶಿಕ್ಷಣ ಇಲಾಖೆ ಅ.23 ರಂದು ನಡೆಸುತ್ತಿರುವ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ,ಕಲೋತ್ಸವದ ಯಶಸ್ಸಿಗೆ ಸಹಕಾರ ನೀಡಿ ಮತ್ತು ವಿವಿಧ ಕಾರ್ಯಗಳಿಗಾಗಿ ನೇಮಕಗೊಂಡಿರುವ ಸಮಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಡಿಡಿಪಿಐ ಕೆ.ರತ್ನಯ್ಯ ಸೂಚನೆ ನೀಡಿದರು.
ಡಿಡಿಪಿಐ ಕಚೇರಿಯ ಎಸ್‍ಎಸ್‍ಎ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಈ ಮೊದಲು ಅ.24 ರಂದು ಸ್ವರ್ಧೆಗಳು ಎಂದು ತೀರ್ಮಾನಿಸಲಾಗಿತ್ತಾದರೂ, ಅಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ ಇರುವುದಿಂದ ಪ್ರತಿಭಾ ಕಾರಂಜಿ ಸ್ವರ್ಧೆಗಳನ್ನು ಅ.23 ರಂದೇ ನಗರ ಅಂಜುಮಾನ್ ಪ್ರೌಢಶಾಲಾ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ವ್ಯಾಪಕ ಪ್ರಚಾರ ನಡೆಸುವ ಮೂಲಕ ಈಗಾಗಲೇ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳಲ್ಲಿ ಆಯ್ಕೆಯಾಗಿರುವ ಮಕ್ಕಳನ್ನು ಸಿದ್ದಗೊಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು, ಪ್ರತಿ ಮಗು,ಪ್ರತಿಶಾಲೆಗೂ ಸ್ವರ್ಧೆಗಳ ಮಾಹಿತಿಯನ್ನು ತಲುಪಿಸಬೇಕು ಎಂದರು.
ಸ್ವರ್ಧೆಗಳಿಗೆ ಮಕ್ಕಳನ್ನು ಕರೆತರುವ ಉಸ್ತುವಾರಿ ಶಿಕ್ಷಕರು ಜಿಲ್ಲೆಯ ಆರು ತಾಲ್ಲೂಕುಗಳಿಂದ ಮಕ್ಕಳನ್ನು ಹೆಚ್ಚು ಜಾಗ್ರತೆಯಿಂದ ಸಮಯಕ್ಕೆ ಸರಿಯಾಗಿ ಕರೆದುಕೊಂಡು ಬರಲು ಸೂಚಿಸಲಾಗಿದ್ದು, ಅಂಜುಮಾನ್ ಶಾಲೆ ಆವರಣಕ್ಕೆ ಬಂದೊಡನೇ ಆಯಾ ತಾಲ್ಲೂಕು ನೋಡೆಲ್ ಅಧಿಕಾರಿಗಳ ಬಳಿ ಹೆಸರು ನೊಂದಾಯಿಸಲು ಮಾರ್ಗದರ್ಶನ ನೀಡಿ ಎಂದರು.

ಸ್ವಾಗತ ಸಮಿತಿ ಜವಾಬ್ದಾರಿ ಹೆಚ್ಚು

ಸ್ವಾಗತ ಸಮಿತಿಗೆ ನೇಮಕಗೊಂಡಿರುವವರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಿ, ಆಯಾ ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ ಆಹ್ವಾನ ಪತ್ರಿಕೆ ನೀಡಿ, ಆಯಾ ವ್ಯಾಪ್ತಿಯ ಜನಪ್ರತಿನಿಧಿಗಳು, ಶಿಕ್ಷಕರ ಸಂಘಗಳ ಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ತಲುಪಿಸುವ ಹೊಣೆ ನಿಮ್ಮದೇ ಎಂದರು.

ಜಿಲ್ಲಾಮಟ್ಟದ ಸ್ವರ್ಧೆಗೆ150 ತೀರ್ಪುಗಾರರು
ಜಿಲ್ಲಾಮಟ್ಟದ ಸ್ವರ್ಧೆಗಳಿಗೆ ಪ್ರತಿ ತಾಲ್ಲೂಕಿನಿಂದ ತಲಾ 40 ಮಂದಿಹೆಸರನ್ನು ಬಿಇಒ ಮತ್ತು ತಾಲ್ಲೂಕು ನೋಡಲ್ ಅಧಿಕಾರಿಗಳು ದೃಢೀಕರಿಸಿ ನೀಡುವಂತೆಯೂ ತಿಳಿಸಿದ ಅವರು, ಅದರಲ್ಲಿ ಅಂತಿಮವಾಗಿ ತಾಲ್ಲೂಕಿಗೆ ತಲಾ 25 ಮಂದಿಯನ್ನು ತೀರ್ಪುಗಾರರಾಗಿ ಆಯ್ಕೆ ಮಾಡುವಂತೆ ತಿಳಿಸಿಮ ಕೋಲಾರ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯ ತೀರ್ಪುಗಾರರ ಆಯ್ಕೆ ಸೂಚಿಸಿದರು.

ಅದರಂತೆ 6 ತಾಲ್ಲೂಕುಗಳಿಂದ ಒಟ್ಟು 150 ಮಂದಿ ತೀರ್ಪುಗಾರರ ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಿ ಅವರು ಸಮಯಕ್ಕೆ ಸರಿಯಾಗಿ ಹಾಜರಿರಲು ಸೂಚಿಸಲು ತಿಳಿಸಿದರು.

ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಸ್ವರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರೌಢಶಾಲಾ,ಪ್ರಾಥಮಿಕ ಶಾಲಾ ಮಕ್ಕಳು ಅ.23 ರ ಬೆಳಗ್ಗೆ 9 ಗಂಟೆಗೆ ಅಂಜುಮಾನ್ ಪ್ರೌಢಶಾಲೆ ಆವರಣದಲ್ಲಿ ಹಾಜರಿರಲಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕರೆತರಲು ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಅವರು ಮನವಿ ಮಾಡಿದರು.
ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ವರ್ಧೆಗಳಿಗೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ನೇತೃತ್ವದಲ್ಲಿ ಸ್ವಾಗತ ಸಮಿತಿ, ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ ನೇತೃತ್ವದಲ್ಲಿ ಕ್ರಿಯಾಸಮಿತಿ, ಡಿವೈಪಿಸಿ ಶ್ರೀನಿವಾಸಮೂರ್ತಿ ಹಾಗೂ ಶಿಕ್ಷಣಾಧಿಕಾರಿ ನಾಗೇಂದ್ರಪ್ರಸಾದ್, ಮುಖ್ಯಶಿಕ್ಷಕ ಪ್ರದೀಪ್ ಕುಮಾರ್ ಮತ್ತಿತರರಿರುವ ಆಹಾರ ಸಮಿತಿ, ನೋಂದಣಿ ಸಮಿತಿ, ಮಕ್ಕಳ ಸುರಕ್ಷತಾ ಹಾಗೂಭದ್ರತಾ ಸಮಿತಿ, ಸಾರಿಗೆ ಸಮಿತಿ, ವಸತಿ ಸಮಿತಿ, ರಂಗವೇದಿಕೆ ಸಮಿತಿ, ತೀರ್ಪುಗಾರರ ಸಮಿತಿ, ಆರ್ಥಿಕ ಸಮಿತಿ,ತಾಂತ್ರಿಕ ಸಮಿತಿ, ಪ್ರಚಾರ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಈ ಸಮಿತಿಗಳು ವಹಿಸಿಕೊಂಡಿರುವ ಕಾರ್ಯದಲ್ಲಿ ಲೋಪವಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಕಾರ್ಯಕ್ರಮಕ್ಕೆ ಮುನ್ನಾ ತೀರ್ಪುಗಾರರ ಸಭೆ ಕರೆದು ಸೂಕ್ತ ಮಾರ್ಗದರ್ಶನ ನೀಡಬೇಕು, ಮಕ್ಕಳಿಗೆ ನೀಡುವ ಆಹಾರ ಶುಚಿ,ರುಚಿಯಾಗಿರಲಿ, ಅಂಜುಮಾನ್ ಶಾಲಾ ಆವರಣದಲ್ಲಿ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತು ನೀಡಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಡಿವೈಪಿಸಿ ಶ್ರೀನಿವಾಸಮೂರ್ತಿ,ಬಿಇಒಗಳಾದ ಕೆ.ಎಸ್.ನಾಗರಾಜಗೌಡ, ಸೋಮೇಶ್, ಪ್ರತಿಭಾ ಕಾರಂಜಿ ಸ್ವರ್ಧೆಗಳ ನೋಡಲ್ ಅಧಿಕಾರಿಗಳಾದ ಶಶಿವಧನ, ಗಾಯತ್ರಿ, ಕೃಷ್ಣಪ್ಪ, ವಿಷಯಪರಿವೀಕ್ಷಕ ಬಿ.ವೆಂಕಟೇಶಪ್ಪ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ,ವೆಂಕಟಾಚಲಪತಿ,ಬೈರರೆಡ್ಡಿ, ರಾಘವೇಂದ್ರ, ಸಿರಾಜುದ್ದೀನ್, ಹನುಮೇಗೌಡ, ರೋಷನ್‍ಜಮೀರ್,ಮದಿಅಳಗನ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಎವೈಪಿಸಿ ಸಿದ್ದೇಶ್, ಬಾಬು, ಶಿಕ್ಷಕ ಸಂಘದ ಕಾರ್ಯದರ್ಶಿ ನಾಗರಾಜ್, ಮುಖ್ಯಶಿಕ್ಷಕರಾದ ಹನುಮನಹಳ್ಳಿ ನಾಗರಾಜ್,ತಿಮ್ಮಸಂದ್ರ ನಾಗರಾಜ್,ಆನಂದ ಶ್ರೀನಿವಾಸ್, ಮಾರ್ಕಂಡೇಶ್ವರ್,ಇಲಾಖೆಯ ಸರಸ್ವತಿ ಮತ್ತಿತರರಿದ್ದರು.