

ಕೋಲಾರ:- ಅನುಭವ ಮಂಟಪ ಆರಂಭಿಸುವ ಮೂಲಕ ಹನ್ನೊಂದನೇ ಶತಮಾನದಲ್ಲಿ ಭಾರತದ ಪಾರ್ಲಿಮೆಂಟ್ ಪರಿಕಲ್ಪನೆಗೆ ಬುನಾದಿ ಹಾಕಿಕೊಟ್ಟವರು ಬಸವಣ್ಣನವರು ಎಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಸಮ ಸಮಾಜದ ಪ್ರತಿಪಾದಕರಾಗಿದ್ದ ಬಸವಣ್ಣನವರು ಸಮಾನತೆ ಕೇವಲ ಸಾಮಾಜಿಕವಾಗಿ ಮಾತ್ರವೇ ಇರಬಾರದು, ಆಡಳಿತ ಯಂತ್ರಾಂಗದಲ್ಲಿಯೂ ಸಮಪಾಲು ಇರಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಬಸವಣ್ಣನವರು ಕೇವಲ ಸಮಾಜ ಸುಧಾರಕರಾಗಿ ಮಾತ್ರವಲ್ಲದೆ ಉತ್ತಮ ಆಡಳಿತಗಾರರಾಗಿದ್ದರು, ಹೊಸ ಸಾಹಿತ್ಯ ಪ್ರಾಕಾರದ ಸೃಷ್ಠಿಕರ್ತ ವಚನಕಾರರಾಗಿದ್ದರು, ಇಡೀ ಜಗತ್ತಿನ ಯಾವುದೇ ಭಾಷೆಯಲ್ಲಿ ವಚನಗಳ ಪರಂಪರೆ ಇಲ್ಲವೆನ್ನುವುದು ಕನ್ನಡ ಭಾಷೆಯ ಹಿರಿಮೆಯಾಗಿದೆ, ಮಹಿಳೆಯರಿಗೆ ಲಿಂಗಾಧಾರಣೆ ಮಾಡಿ ಮಹಿಳಾ ಸಮಾನತೆಯ ಪ್ರತಿಪಾದಕರಾಗಿದ್ದಾರೆ. ನಿತ್ಯವೂ ಇವರ ಒಂದು ವಚನ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಮಾಲೂರು ತಾಲೂಕು ಭಾರತ ಸೇವಾದಳ ಅಧ್ಯಕ್ಷ ಬಹಾದ್ದೂರ್ ಸಾಬ್ ಮಾತನಾಡಿ, ದೇವರನ್ನು ಒಲಿಸಿಕೊಳ್ಳಬೇಕಾದರೆ ವೇದ, ಮಂತ್ರ ಅರಿತಿರಲೇ ಬೇಕು ಎಂಬುದಿಲ್ಲ, ಸರಳವಾಗಿ ಆತ್ಮಲಿಂಗ ಜಪಿಸಿದರೆ ಸಾಕು ಎಂಬುದನ್ನು ಹೇಳಿಕೊಟ್ಟವರೆಂದರು.
ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಬಸವಣ್ಣನವರನ್ನು ಜಯಂತಿಯಂದು ಮಾತ್ರವೇ ನೆನಪಿಸಿಕೊಳ್ಳದೆ, ಅವರು ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸುವಂತಾಗಬೇಕೆಂದರು.
ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ ರಾಜ್ಯ ಕಾರ್ಯದರ್ಶಿ ಬಸವರಾಜು ಮಾತನಾಡಿ, ಕಾಯಕವೇ ಕೈಲಾಸ ಎಂಬ ಸಂದೇಶವನ್ನು ನೀಡಿದ ಬಸವಣ್ಣನವರು ಪ್ರತಿಯೊಬ್ಬರಿಗೂ ವೃತ್ತಿ ಗೌರವ ಇದೆ ಎನ್ನುವುದನ್ನು ಸಮಾಜಕ್ಕೆ ಹೇಳಿಕೊಟ್ಟರೆಂದರು.
ಸೇವಾದಳ ಜಿಲ್ಲಾ ಸಮಿತಿ ಹಿರಿಯ ಸದಸ್ಯ ವಿ.ಪಿ.ಸೋಮಶೇಖರ್ ಮಾತನಾಡಿ, ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದ ಮೂಲಕ ಪ್ರತಿಯೊಬ್ಬರಿಗೂ ನೈತಿಕ ಶಿಕ್ಷಣವನ್ನು ಬಸವಣ್ಣನವರು ಬೋಧಿಸಿದರೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳಾದ ಅಪ್ಪಿ ನಾರಾಯಣಸ್ವಾಮಿ, ಗೋಕುಲ ಚಲಪತಿ, ಫಲ್ಗುಣ, ಮಹಮದ್ ಚಾನ್ ಪಾಷಾ ಇತರರು ಹಾಜರಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು. ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಮಾಫ್ತಿಯಾಯಿತು.

