

ಶ್ರೀನಿವಾಸಪುರ: ದೇಶದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ನಾಮನಿರ್ದೇಶನವಿಲ್ಲದೆ ಉಳಿದಿರುವ ಸುಮಾರು ₹79,000 ಕೋಟಿ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಶದಲ್ಲಿಟ್ಟಿದೆ. ಈ ಮೊತ್ತವನ್ನು ಕಾನೂನುಬದ್ಧ ವಾರಸುದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ಕೋಲಾರ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಮಹದೇವ್ ಎಸ್. ಜೋಶಿ ತಿಳಿಸಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಸಮೀಪದ ಶೀಗೆಹಳ್ಳಿ ಗ್ರಾಮದಲ್ಲಿ ಕೋಲಾರ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಶೀಗೆಹಳ್ಳಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಹಕ್ಕು ಪಡೆಯದ ಠೇವಣಿಗಳ ಇತ್ಯರ್ಥ ಅಭಿಯಾನದಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳಿಂದ ಬ್ಯಾಂಕ್ನಲ್ಲಿ ಯಾವುದೇ ವಹಿವಾಟು ಮಾಡದ ಗ್ರಾಹಕರು ತಮ್ಮ ಖಾತೆಯನ್ನು ಸಕ್ರಿಯಗೊಳಿಸಲು ‘ಕೆವೈಸಿ’ (KYC) ದಾಖಲೆಗಳನ್ನು ನವೀಕರಿಸಬೇಕು, ಎಂದು ಕರೆ ನೀಡಿದರು.
ಬ್ಯಾಂಕ್ ಆಫ್ ಬರೋಡಾ ಶೀಗೆಹಳ್ಳಿ ಶಾಖೆಯ ವ್ಯವಸ್ಥಾಪಕ ಬಾಲಕೃಷ್ಣ ಅವರು, ಪ್ರತಿಯೊಬ್ಬ ಗ್ರಾಹಕರೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ (PMSBY), ಹಾಗೂ ಅಟಲ್ ಪಿಂಚಣಿ ಯೋಜನೆ (APY) ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳಿಂದ ಲಾಭ ಪಡೆಯಬೇಕು, ಎಂದು ಹೇಳಿದರು.ಅವರು ಮುಂದುವರಿದು, ಕೃಷಿ ಅಭಿವೃದ್ಧಿಗಾಗಿ ಕಡಿಮೆ ಬಡ್ಡಿದರದಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಬೆಳೆ ಸಾಲ ಪಡೆಯಬಹುದು. ಜೊತೆಗೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲ ಸೌಲಭ್ಯವನ್ನು ಬಳಸಿಕೊಳ್ಳಬೇಕು, ಎಂದರು.
ಕಾರ್ಯಕ್ರಮದಲ್ಲಿ ಹಣಕಾಸು ಹಾಗೂ ಆರ್ಥಿಕ ಸಲಹೆಗಾರ ಜಿ. ವೆಂಕಟೇಶ್, ಕೊಳತೂರು ಗ್ರಾಮ ಪಂಚಾಯಿತಿ ಪಿಡಿಓ ರಮೇಶ್ ಕುಮಾರ್, ಮಾಜಿ ಉಪಾಧ್ಯಕ್ಷ ಉಪ್ಪುಕುಂಟೆ ಚಂಗಪ್ಪ, ಸದಸ್ಯ ವೆಂಕಟೇಶಪ್ಪ, ಯಲ್ದೂರು ಗ್ರಾಮ ಪಂಚಾಯಿತಿ ಸದಸ್ಯ ಎಸ್.ಟಿ. ನಾರಾಯಣಸ್ವಾಮಿ, ಬ್ಯಾಂಕ್ನ ಸಹ ವ್ಯವಸ್ಥಾಪಕ ನರೇಂದ್ರ, ಕ್ಯಾಶಿಯರ್ ರಮೇಶ್, ಗುಮಾಸ್ತ ಸುಬ್ರಮಣಿ, ನಳಿನಿ ಹಾಗೂ ಮಾಲಾ ಉಪಸ್ಥಿತರಿದ್ದರು.

