ಮಂಗಳೂರು: ಫುಡಾರ್ ಪ್ರತಿಷ್ಠಾನ 2023 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರಿನ ಕೊಂಕಣಿ ಕೆಥೋಲಿಕ್ ಸಮುದಾಯದ ಪ್ರತಿಷ್ಠಿತ ಸಂಸ್ಥೆ ಫುಡಾರ್ ಪ್ರತಿಷ್ಠಾನ ಇದರ ವತಿಯಿಂದ 2023 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಹಾಲ್ ನಲ್ಲಿ ನಡೆಯಿತು.

ಸಮಾರಂಭದಲ್ಲಿ ಮಂಗಳೂರು  ಮತ್ತು ಉಡುಪಿ ಧರ್ಮ ಪ್ರಾಂತ್ಯಗಳ ವ್ಯಾಪ್ತಿಯಲ್ಲಿ 2021  – 2022 ನೇ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ರೇಂಕ್ ಗಳಿಸಿದ ಪ್ರತಿಭಾವಂತ ಕೊಂಕಣಿ ಕೆಥೋಲಿಕ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 

ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಗುರು ಮೊ. ಮ್ಯಾಕ್ಸಿಮ್ ನೋರೋನ್ಹಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫುಡಾರ್ ಪ್ರತಿಷ್ಟಾನದ ಅಧ್ಯಕ್ಷ ಜೆರಾಲ್ಡ್ ಡಿ ಕೋಸ್ತ ಅಧ್ಯಕ್ಷತೆ ವಹಿಸಿದ್ದರು.

ಮುಂಬಯಿ ಕಸ್ಟಮ್ಸ್ ಮತ್ತು ಜಿ.ಎಸ್. ಟಿ. ವಿಭಾಗದ ನಿರ್ದೇಶಕಿ ಹಾಗೂ   2022 ನೇ ಸಾಲಿನ ಶೌರ್ಯ ಪ್ರಶಸ್ತಿ ವಿಜೇತ ಅಧಿಕಾರಿ ಮಿಶೆಲ್ ಕ್ವೀನಿ ಡಿ ಕೊಸ್ತ ಅವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಿಶೆಲ್ ಕ್ವೀನಿ ಡಿ ಕೊಸ್ತ ಅವರು ಫುಡಾರ್ ಪ್ರತಿಷ್ಠಾನವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವ ಮೂಲಕ ಸ್ತುತ್ಯಾರ್ಹ ಕೆಲಸ ಮಾಡುತ್ತಿದೆ. ಇಂದು ಸನ್ಮಾನ ಪಡೆದವರು ಸಮಾಜದ ಒಳಿತಿಗಾಗಿ ಶ್ರಮಿಸ ಬೇಕು. ನಮ್ಮ ಯುವಕರು ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹೋಗುವ ಬದಲು ನಮ್ಮ ದೇಶದಲ್ಲಿಯೇ ಸರಕಾರಿ ನೌಕರಿಗೆ ಸೇರಿ ಸಮಾಜ ಸೇವೆ ಮಾಡ ಬೇಕು ಎಂದು ಹೇಳಿದರು.

 ಕ್ಯಾಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ರೆ. ಫಾ. ಜೆ.ಬಿ. ಸಲ್ದಾನ್ಹಾ (ಮಂಗಳೂರು) ಮತ್ತು ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ (ಉಡುಪಿ), ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಸ್ಟಾನಿ ಲೋಬೋ, ಎಲ್. ಜೆ. ಫೆರ್ನಾಂಡಿಸ್  ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರೆ.  ಫಾ. ವಾಲ್ಟರ್ ಡಿ ಮೆಲ್ಲೋ ಸ್ವಾಗತಿಸಿ ಕೋಶಾಧಿಕಾರಿ ಎಲ್ರೊಯ್ ಕಿರಣ್ ಕ್ರಾಸ್ಟೋ ವಂದಿಸಿದರು. ಸಮಾರಂಭದಲ್ಲಿ ಒಟ್ಟು 216 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಅರುಣ್ ಫೆರ್ನಾಂಡಿಸ್ ಮತ್ತು ವಿವಿಡ್ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು.