ಜನರು ತಂಬಾಕು ಪದಾರ್ಥ ಸೇವನೆಯಿಂದ ದೂರವಿರಬೇಕು: ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜನರು ತಂಬಾಕು ಪದಾರ್ಥ ಸೇವನೆಯಿಂದ ದೂರವಿರಬೇಕು ಎಂದು ಜೆಎಂಎಫ್‍ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಹೇಳಿದರು.
ಪಟ್ಟಣದ ಸಾಯಿ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಮತ್ತಿತರ ಇಲಾಖೆಗಳ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಸಮಾರಂಭ ಹಾಗೂ ಕಾನೂನು ಅರಿವು ನೆರವು ಕಾರ್ಯ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸುವುದು ಹಾಗೂ ಜಾಗೃತಿ ಮೂಡಿಸುವುದು ವಿಶ್ವ ತಂಬಾಕು ನಿಷೇಧ ದಿನಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.
ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ ಮಾತನಾಡಿ, ಪೋಷಕರು ತಂಬಾಕು ಪದಾರ್ಥಗಳನ್ನು ಮಕ್ಕಳಿಂದ ತರಿಸಿಕೊಳ್ಳಬಾರದು. ಹಾಗೆ ಮಾಡುವುದರಿಂದ ಮಕ್ಕಳು ತಂಬಾಕು ವ್ಯಸನಿಗಳಾಗುವ ಅಪಾಯವಿದೆ. ಆರೋಗ್ಯ ರಕ್ಷಣೆ ಎಲ್ಲರ ಹೊಣೆ. ಮಕ್ಕಳ ಚಲನ ವಲನದ ಬಗ್ಗೆ ಪೋಷಕರು ನಿಗಾ ವಹಿಸಬೇಕು ಎಂದು ಹೇಳಿದರು.
ತಂಬಾಕು ಸೇವನೆಯ ದುಷ್ಪರಿಣಾಮ ಕುರಿತು ಆಂಜಾಲಮ್ಮ, ತಂಬಾಕು ಸೇವನೆ ನಿವಾರಣೋಪಾಯಗಳ ಬಗ್ಗೆ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ನಾರಾಯಣಸ್ವಾಮಿ, ತಂಬಾಕು ಸೇವನೆ ನಿಷೇಧ ಕಾಯ್ದೆ ಕುರಿತು ವಕೀಲ ಶ್ರೀನಿವಾಸಗೌಡ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.
ಜೆಎಂಎಫ್‍ಸಿ ನ್ಯಾಯಾಲಯದ ಅಪರ ಸಿವಿಲ್ ನ್ಯಾಯಾಧೀಶ ಎಚ್.ಆರ್.ಸಚಿನ್, ಸಹಾಯಕ ಸರ್ಕಾರಿ ಅಭಿಯೋಜಕ ಮುಕುಂದ, ತಾಲ್ಲೂಕು ಆರೋಗ್ಯಾಧಿಕಾರಿ ಎಂ.ಸಿ.ವಿಜಯ, ಪ್ರಾಂಶುಪಾಲ ಕೆ.ಎನ್.ರಾಮಾಂಜನೇಯ, ವಕೀಲರಾದ ರಾಜಗೋಪಾಲರೆಡ್ಡಿ, ಟಿ.ವೆಂಕಟೇಶ್, ವಿ.ಅರ್ಜುನ್, ಎನ್.ವಿ.ಜಯರಾಮೇಗೌಡ ಇದ್ದರು.