ವಿಶೇಷ ಕೊಡಿಹಬ್ಬ – ಡಿ.21ರಂದು ಸಾರ್ವಜನಿಕ ಸಭೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಇತಿಹಾಸ ಪ್ರಸಿದ್ಧವಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತ ತಲುಪಿದ್ದು, ಮುಂಬರುವ 2022ನೇ ಫೆಬ್ರವರಿ ತಿಂಗಳಲ್ಲಿ ನೂತನ ಧ್ವಜ ಮರ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಹಾಗೂ ಶ್ರೀಮನ್ಮಹಾರಥೋತ್ಸವ ಗಳನ್ನು ಆಯೋಜಿಸಲಾಗಿದೆ. ಸರ್ಕಾರದ ಕೋವಿಡ್ – 19ರ ನಿಯಮಾವಳಿಗಳಂತೆ ಉತ್ಸವಗಳನ್ನು ನಡೆಸಲು ದೇವಳ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಗಳು ನಿರ್ಧರಿಸಿವೆ.
ಈ ಪ್ರಯುಕ್ತ ಡಿಸೆಂಬರ್ 21ರ ಮಂಗಳವಾರ ಸಂಜೆ 4 ಗಂಟೆಗೆ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ವಠಾರದಲ್ಲಿ, ಸಾರ್ವಜನಿಕ ಭಕ್ತಾಭಿಮಾನಿಗಳ ಸಲಹೆ – ಸೂಚನೆಗಳನ್ನು ಪಡೆಯಲು ಸಾರ್ವಜನಿಕ ಸಮಾಲೋಚನಾ ಸಭೆಯೊಂದನ್ನು ಕರೆಯಲಾಗಿದೆ. ಈ ಸಭೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಲಹೆ – ಸೂಚನೆ, ಮಾರ್ಗದರ್ಶನಗಳನ್ನು ನೀಡಿ, ಯೋಜಿತ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಮನವಿ ಮಾಡಿದ್ದಾರೆ.