ವಿಕಲಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಕೊರೋನಾ ನೆಪದಲ್ಲಿ ಅಭಿವೃದ್ದಿ ಮರೆತ ಸರ್ಕಾರ-ಕುಮಾರ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಸಂಕಷ್ಟದಲ್ಲಿ ಆಡಂಬರಕ್ಕೆ ಅವಕಾಶ ನೀಡದೇ ಬುದ್ದಿಮಾಂದ್ಯ ಮಕ್ಕಳಿಗೆ ಊಟ ನೀಡಿ ಅವರೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಕೆಪಿಸಿಸಿ ಎಸ್ಸಿಘಟಕದ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ಕುಮಾರ್ ಆಚರಿಸಿಕೊಂಡರು. ಭಾನುವಾರ ಬೆಳಗ್ಗೆ ನಗರದ ಅಂತರಗಂಗಾ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಮಕ್ಕಳಿಗೆ ತಿನ್ನಿಸುವ ಮೂಲಕ ಹುಟ್ಟುಹಬ್ಬ ಮಾಡಿಕೊಂಡ ಅವರು, ಮಕ್ಕಳಿಗೆ ಸ್ವತಃ ಬಿಸಿಬಿಸಿ ಪೂರಿ,ಸಾಗು,ಪಾಯಸ ಬಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ ಆದರೆ ಈ ಸರ್ಕಾರ ಜಿಲ್ಲೆಗೇನು ನೀಡಿದೆ ಎಂಬುದನ್ನು ಹೇಳಿಲ್ಲ ಎಂದು ಟೀಕಿಸಿದರು. ಸರ್ಕಾರದ ತನ್ನ ವೈಪಲ್ಯಗಳನ್ನು ಮುಚ್ಚಿಸಿಕೊಳ್ಳಲು ಕೊರೋನಾ ನೆಪ ಹೇಳುತ್ತಿದೆ, ಆದರೆ ಗಡಿ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೂ ಹಣ ನೀಡಿಲ್ಲ, ಆಡಳಿತದಲ್ಲಿರುವವರು ಕೋಲಾರ ನಗರದಲ್ಲಿ ದ್ವಿಚಕ್ರವಾಹನದಲ್ಲಿ ಸವಾರಿ ಮಾಡಿ ಪರಿಸ್ಥಿತಿಯ ಅರ್ಥ ಮಾಡಿಕೊಳ್ಳಲಿ ಎಂದರು.

ಮಕ್ಕಳೊಂದಿಗೆ ಹಬ್ಬ

ಹುಟ್ಟುಹಬ್ಬಗಳ ಹೆಸರಿನಲ್ಲಿ ಆಡಂಬರಕ್ಕೆ ಕಡಿವಾಣ ಹಾಕಿ ಕಷ್ಟದಲ್ಲಿರುವವರ ನೆರವಿಗೆ ನಿಲ್ಲುವ ಸಂಪ್ರದಾಯ ಸದಾ ನೆನಪಿನಲ್ಲಿ ಉಳಿಯುವುದರಿಂದ ವಿಕಲಚೇತನ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಎ.ಮಂಜುನಾಥ್,ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‍ಬಾಬು, ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಬಡವರು, ಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಕಾಂಗ್ರೆಸ್ ಸಂಸ್ಕøತಿಯಾಗಿದೆ, ಹುಟ್ಟುಹಬ್ಬವನ್ನು ಅನಾಥ ಹಾಗೂ ವಿಕಲಚೇತನರೊಂದಿಗೆ ಆಚರಿಸಿಕೊಳ್ಳಲು ನಮ್ಮ ಎಲ್ಲಾ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ವೆಂಕಟಪತೆಪ್ಪ, ಎಂ.ಶ್ರೀನಿವಾಸ್, ಖಾದ್ರಿಪುರ ಬಾಬು, ಯೇಸು,ಶ್ರೀನಿವಾಸ್, ಮಂಜುನಾಥ್, ಹರೀಶ್, ವಿಕಲಚೇತನರ ಶಾಲೆಯ ಕಾರ್ಯದರ್ಶಿ ಕೆ.ಎಸ್.ಶಂಕರ್ ಉಪಸ್ಥಿತರಿದ್ದರು.