


ಶ್ರೀನಿವಾಸಪುರ: ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಬುಧವಾರ ಪೌರ ಕಾರ್ಮಿಕರು ತಮ್ಮ ಬೇಡಿಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ತಹಶೀಲ್ದಾರ್ ಸುಧೀಂದ್ರ ಅವರಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಪೌರ ಕಾರ್ಮಿಕರಿಗೆ ಸಂಭಾವನೆ ನೀಡುವ ಬಗ್ಗೆ ನೀಡಲಾಗಿರುವ ಮನವಿ ಪತ್ರವನ್ನು ಸಮುಚಿತ ಮಾರ್ಗದ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು. ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಲು ಆಶ್ರಯ ಬಡಾವಣೆಯ ಗಡಿ ಗುರುತಿಸಿಕೊಡಲು ಹೇಳಲಾಗಿದೆ. ಸರ್ವೆ ನಂಬರ್ 17 ರಲ್ಲಿ ವಸತಿ ಸೌಲಭ್ಯ ನೀಡಲು ಪೂರಕವಾಗಿ ದಾಖಲೆಗಳನ್ನು ಹುಡುಕಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಪುರಸಭೆಯ ಮಾಜಿ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಾತನಾಡಿ ಪುರಸಭೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರ ಗೌರವ ಧನ ತಡೆಹಿಡಿದಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಗೌರವ ಧನವನ್ನು ನಿಗದಿತ ದಿನಾಂಕದೊಳಗೆ ಪ್ರತಿತಿಂಗಳೂ ನೀಡಬೇಕು. ಸಂಭಾವನೆ ಹಣವನ್ನು ಅನ್ಯಕಾರ್ಯಗಳಿಗೆ ಬಳಸದೆ ಬಾಕಿ ಇರುವ ಮೂರು ತಿಂಗಳ ಸಂಭಾವನೆ ಮೊತ್ತವನ್ನು ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಪೌರ ಕಾರ್ಮಿಕರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿ, ಪೌರಕಾರ್ಮಿಕರ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜಯರಾಮ್, ಪುರಸಭೆ ಪರಿಸರ ಅಭಿಯಂತರ ಲಕ್ಷ್ಮಿಶ, ಆರೋಗ್ಯ ನಿರೀಕ್ಷಕ ವಿಜಯ್ ಕುಮಾರ್, ಕಿರಿಯ ಆರೋಗ್ಯ ನಿರೀಕ್ಷಕ ಟಿ.ವಿ.ಸುರೇಶ್, ಸಿಬ್ಬಂದಿ ಟಿ.ವಿ.ಸಂತೋಷ್, ಸೋಮಶೇಖರ್, ಜಿ.ನಾಗರಾಜ್, ಎನ್.ಶ್ರೀನಿವಾಸ್, ನವೀಶ್, ಶಿವಕುಮಾರ್, ಗೌತಮ್, ಎಲ್ಲೇಶ್, ನಾರಾಯಣಸ್ವಾಮಿ, ರಮೇಶ್, ರವಿಕುಮಾರ್, ಲಕ್ಷ್ಮಣ, ಗೋವರ್ಧನ್, ಲಕ್ಷ್ಮೀ ನಾರಾಯಣ, ಮಂಜುನಾಥ್, ಸತ್ಯನಾರಾಯಣ, ವೆಂಕಟಮ್ಮ, ಭೂದೇವಿ, ಮುನಿಲಕ್ಷಮ್ಮ, ಶಾಂತಮ್ಮಇದ್ದರು.

