

ಕುಂದಾಪುರ, ಜೂನ್ 21, 2026: “ಯೋಗ ಎಂದರೆ ಕೇವಲ ಆಸನಗಳಲ್ಲ, ಅದೊಂದು ಜೀವನಶೈಲಿ ಆಗಬೇಕು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಇದನ್ನು ಅಷ್ಟಾಂಗ ಎಂದು ಕರೆಯುತ್ತೇವೆ. ಇದೆಲ್ಲವನ್ನೂ ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದರ ಮುಖೇನ ನಮ್ಮ ಆರೋಗ್ಯವನ್ನು ಉತ್ತಮ ರೀತಿ ಇಟ್ಟುಕೊಳ್ಳಲು ಬಹಳ ನೆರವಾಗುತ್ತದೆ. ಯೋಗ ಎಂದರೆ ಜೀವನಕ್ರಮ. ಜೀವನಕ್ರಮ ಚೆನ್ನಾಗಿದ್ದಾರೆ ಎಲ್ಲವೂ ಚೆನ್ನಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ದಿನನಿತ್ಯ ಯೋಗಾಭ್ಯಾಸ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು” ಎಂದು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥರು ಹಾಗೂ ಖ್ಯಾತ ಆಯುರ್ವೇದ ವೈದ್ಯರಾದ ಡಾ. ರಾಜೇಶ್ ಬಾಯರಿ ಹೇಳಿದರು.
ಉಡುಪಿ ಜಿಲ್ಲೆಯ ಅತ್ಯಂತ ಪಾರಂಪರಿಕ ಆಯುರ್ವೇದ ಚಿಕಿತ್ಸಾ ತಾಣವಾದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಇಂದು ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂದುವರಿಸಿ ಮಾತನಾಡಿದ ಅವರು, “ಆಯುರ್ವೇದ ಮತ್ತು ಯೋಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಯುರ್ವೇದ ಒಳಗಿಂದ ಶುದ್ಧೀಕರಿಸಿದರೆ ಯೋಗವು ಆಂತರಿಕ ಶಕ್ತಿಯನ್ನು ಸಮತೋಲನದಲ್ಲಿಡುತ್ತದೆ” ಎಂದು ಹೇಳಿದರು.
ವೇದಮೂರ್ತಿ ಶಂಕರನಾರಾಯಣ ಭಟ್ ಶಾರ್ಕೆ ಅಷ್ಟಾಂಗ ಯೋಗದ ನಿಯಮ ಪಾಲನೆ ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯ ಪಾಲನೆಗೆ ಹೇಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಚಿತ್ರಕೂಟದ ಯೋಗ ಶಿಕ್ಷಕರಾದ ಕೃಷ್ಣ ಪ್ರಸನ್ನ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಮಹಾಬಲ ಬಾಯರಿ, ಕಲಾವತಿ, ಡಾಕ್ಟರ್ ಅನುಲೇಖಾ ಬಾಯರಿ ಇದ್ದರು.


