

ಸಿಯೋನ್ ಆಶ್ರಮ ಟ್ರಸ್ಟ್(ರಿ.) ಗಂಡಿಬಾಗಿಲು ಇಲ್ಲಿ 27ನೇ ವಾರ್ಷಿಕೋತ್ಸವವನ್ನು ದಿನಾಂಕ:22.03.2026ರಂದು ಆಚರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು ನೆರವೇರಿಸಿದರು..
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀಯುತ ಡಾ.ಯು.ಸಿ.ಪೌಲೋಸ್ ರವರು ಅಲಂಕರಿಸಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯನ್ನಲಂಕರಿಸಿದ್ದ ಬೆಳ್ತಂಗಡಿ ತಾಲೂಕು ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಡಾ. ಪ್ರಕಾಶ್ ಪ್ರಭುರವರು, ಸಿಯೋನ್ ಆಶ್ರಮದ ಕುರಿತು ತಾವೇ ರಚಿಸಿದ ಸುಂದರವಾದ ಕವಿತೆಯನ್ನು ಹಾಡಿ ವಾರ್ಷಿಕೋತ್ಸವಕ್ಕೆ ಶುಭಾಶಯಗಳನ್ನು ತಿಳಿಸಿ, ಅಶ್ರಮದ ಸೇವೆ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ವೈದ್ಯಾಧಿಕಾರಿ ಶ್ರೀಯುತ ಡಾ.ಶಿವಾನಂದ ಸ್ವಾಮಿಯವರು ಸಂಸ್ಥೆಯು ಬೆಳೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ವಿವರಿಸಿ. ಪ್ರಸ್ತುತ ಕಾರ್ಯವೈಖರಿಗಳ ಬಗ್ಗೆ ತಿಳಿಸಿದರು. ಸಂಸ್ಥೆಯ ಲೆಕ್ಕಾಧಿಕಾರಿಯವರಾದ ಶ್ರೀಮತಿ ಸೌಮ್ಯ ಯು.ಪಿ.ಯವರು ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಸಿಯೋನ್ ಆಶ್ರಮದ ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ., ವೈದ್ಯಾಧಿಕಾರಿಗಳಾದ ಶ್ರೀಯುತ ಡಾ. ಕಲಾಮಧು ಶೆಟ್ಟಿ, ಹಿತೈಷಿಗಳಾದ ಶ್ರೀಯುತ ಜೋಸೆಫ್ ಪಿ.ಪಿ., ಆಶ್ರಮದ ಫಲಾನುಭವಿಗಳಾದ ಶಶಿಧರ ಮತ್ತು ಐಶ್ವರ್ಯರವರು ವೇದಿಕೆಯನ್ನಲಂಕರಿಸಿದ್ದರು.
ವಾರ್ಷಿಕೋತ್ಸವದ ಅಂಗವಾಗಿ ಆಶ್ರಮ ನಿವಾಸಿಗಳಿಗೆ ಮತ್ತು ಸಿಬ್ಬಂದಿವರ್ಗದವರಿಗೆ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು ಮತ್ತು ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ಶೋಭಾ ಯು.ಪಿ.ಯವರು ಸ್ವಾಗತಿಸಿ, ಸಿಬ್ಬಂದಿ ಆಶಾಸುಧಾಕರ್ ರವರು ವಂದಿಸಿದರು. ಸಿಬ್ಬಂದಿ ಶ್ರೀಮತಿ ದಿನಾವತಿಯವರು ಕಾರ್ಯಕ್ರಮ ನಿರೂಪಿಸಿದರು.













