ಅಪರೂಪದ ಶಿಕ್ಷಕ : ವಿದ್ಯಾರ್ಥಿಗಳು ಹಾಜರಾಗಿಲ್ಲ ಎಂದು ವೇತನದ 23  ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಹಿಂತುರುಗಿಸಿದ ಉಪನ್ಯಾಸಕ!

JANANUDI NEWS NETWORK           (EDITOR : BERNARD D’COSTA)

ಇದೇ ರೀತಿ ಸಮಾಜದ ಎಲ್ಲಾ ಪ್ರಕಾರಗಳಲ್ಲಿನ ಜವಾಬ್ದಾರಿ ಹೊಂದಿದವರು, ವಿಶೇಷವಾಗಿ ರಾಜಕಾರಣೀಗಳು, ಅವರ ಸಹೋದ್ಯೊಗಿಗಳು (ಸಂಬಳ ಹಿಂತಿಗಿಸುವುದು ಬೇಡ) ಮತ್ತು ಅವರ ಸುತ್ತಮುತ್ತಲಿನವರು ಗಿಂಬಳ ಪಡೆಯುವರು ಪ್ರಮಾಣಿಕತೆಯಿಂದ ನಡೆದರೆ ಸಾಕು, ಭಾರತ ಉದ್ದಾರವಾಗುತ್ತೆ -: ಸಂಪಾದಕರು

ಮುಜಾಫರ್‌ಪುರ: ಪ್ರಾಮಾಣಿಕತೆ  ಎನ್ನುವುದು ಇಂದಿನ ದಿನಗಳಲ್ಲಿ ಅಪರೂಪದ ಗುಣ ಎಂದರೆ ತಪ್ಪಾಗಲಾರದು. ಅದರಲ್ಲೂ ಹಣಕಾಸಿನ ವಿಷಯದಲ್ಲಿ ಬಹುತೇಕರು ಸ್ವಾರ್ಥಿಗಳಿದ್ದಾರೆ ಆದರೆ ಇದಕ್ಕೆ ಅಪವಾದ ಎಂಬಂತೆ ಬಿಹಾರದ ಉಪನ್ಯಾಸಕರೊಬ್ಬರು​​​​​​​​​​​​​​​​​​​​​​​ತಮ್ಮ ನಿರ್ಧಾರದ ಮೂಲಕ ಪ್ರಾಮಾಣಿಕ ವ್ಯಕ್ತಿ ಎಂಬ ವಿಶೇಷತೆಗೆ ಪಾತ್ರರಾಗಿದ್ದಾರೆ.

ಅವರೇ ಬಿಹಾರದ ನಿತೀಶ್ವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ 33 ವರ್ಷದ ಲಾಲನ್ ಕುಮಾರ್ ಇವರು ತಮ್ಮ 33 ತಿಂಗಳ ಸಂಬಳವಾದ ಸುಮಾರು 24 ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಿದ್ದಾರೆ. ಸೆಪ್ಟೆಂಬರ್ 2019 ರಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಗಳಿಸಿರುವ ಒಟ್ಟು ಹಣವನ್ನು ವಾಪಸ್​​ ಕೊಟ್ಟಿದ್ದಾರೆ. ಈ ನಿರ್ಧಾರಕ್ಕೆ ಕಾರಣ ಅವರ ಆತ್ಮಸಾಕ್ಷಿಯಂತೆ. ಪ್ರಾಧ್ಯಾಪಕರಾಗಿದ್ದ 33 ತಿಂಗಳಲ್ಲಿ ಒಬ್ಬೇ ಒಬ್ಬ ವಿದ್ಯಾರ್ಥಿಯೂ ಒಂದು ತರಗತಿಗೂ ಬಾರದ ಕಾರಣ ವೇತನವನ್ನು ಸ್ವೀಕರಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಅದಕ್ಕಾಗಿಯೇ ಸಂಬಳವನ್ನು ವಾಪಸ್​ ನೀಡುತ್ತಿರುವುದಾಗಿ ಲಾಲನ್​ ಕುಮಾರ್​ ಹೇಳಿದ್ದಾರೆ. ಅವರ ಈ ಪ್ರಮಾಣಿಕ ನಿರ್ಧಾರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಲಾಲನ್‌ ಕುಮಾರ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನನ್ನ ಆತ್ಮಸಾಕ್ಷಿಯು ಒಪ್ಪತ್ತಿಲ್ಲ 

ಲಲನ್​ ಕುಮಾರ್ ಅವರಿಗೆ ಇದು ಮೊದಲ ಉದ್ಯೋಗವಾಗಿದೆ. ಕಾಲೇಜಿನಲ್ಲಿ ಈವರೆಗೆ ಯಾರಿಗೂ ಏನನ್ನು ಕಲಿಸಿಲ್ಲ. ಹೀಗಾಗಿ ನಾನು ನನ್ನ ಮನಸ್ಸಿನ ಮಾತನ್ನು ಕೇಳಿದೆ. ಎರಡು ವರ್ಷ, ಒಂಬತ್ತು ತಿಂಗಳ ನನ್ನ ಸಂಬಳವನ್ನು ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಲು ನಿರ್ಧರಿಸಿದೆ.  ಮಂಗಳವಾರ ಬಿಆರ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದ (ಬ್ರಾಬು) ರಿಜಿಸ್ಟ್ರಾರ್ ಅವರಿಗೆ 23,82,228 ರೂ.ಗಳ ಚೆಕ್ ನೀಡಿದ್ದೇನೆ. “ಬೋಧನೆ ಮಾಡದೆ ಸಂಬಳ ತೆಗೆದುಕೊಳ್ಳಲು ನನ್ನ ಆತ್ಮಸಾಕ್ಷಿಯು ಒಪ್ಪತ್ತಿಲ್ಲ” ಎಂದು ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

ನಿತೀಶ್ವರ ಕಾಲೇಜಿನಲ್ಲಿ ಸುಮಾರು 3,000 ವಿದ್ಯಾರ್ಥಿಗಳಿದ್ದು, ಅವರಲ್ಲಿ ಸರಿಸುಮಾರು 1,100 ಪದವಿಪೂರ್ವ ವಿದ್ಯಾರ್ಥಿಗಳು ಹಿಂದಿಯನ್ನು ಕಲಿಯಬೇಕಾಗಿದೆ. ಈ ವಿಷಯಕ್ಕೆ ಅತಿಥಿ ಶಿಕ್ಷಕರನ್ನು ಬಿಟ್ಟರೆ, ಕುಮಾರ್ ಮಾತ್ರ ಕಾಲೇಜಿನಲ್ಲಿ ನಿಯಮಿತ ಹಿಂದಿ ಶಿಕ್ಷಕರಾಗಿದ್ದಾರೆ.  ಕೊರೊನಾಗೂ ಮುಂಚೆಯೇ ವಿದ್ಯಾರ್ಥಿಗಳು ಏಕೆ ಗೈರುಹಾಜರಾಗಿದ್ದರು ಎಂಬ ಪ್ರಶ್ನೆಗೆ, ಕಾಲೇಜು ಪ್ರಾಂಶುಪಾಲ ಮನೋಜ್ ಕುಮಾರ್ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಈ ವಿಷಯವನ್ನು ಉಪಕುಲಪತಿಗಳೊಂದಿಗೆ ಚರ್ಚಿಸುತ್ತಿದ್ದೇವೆ. ಗೈರುಹಾಜರಿಯ ಬಗ್ಗೆ ವಿವರಿಸಲು ನಿತೀಶ್ವರ್ ಕಾಲೇಜಿನ ಪ್ರಾಂಶುಪಾಲರನ್ನು ಶೀಘ್ರದಲ್ಲೇ ಕೇಳುತ್ತೇವೆ ಎಂದು BRABU ರಿಜಿಸ್ಟ್ರಾರ್ ಠಾಕೂರ್ ತಿಳಿಸಿದ್ದಾರೆ.

ಪುಕ್ಕಟೆ ಹಣ ಸಿಗುತ್ತದೆ ಎಂದರೆ ಬಿಡಲು ತಯಾರಿಲ್ಲದ ಈ ಕಾಲದಲ್ಲಿ ತಾವು ಜೀವನಪೂರ್ತಿ ದುಡಿದ ಹಣವನ್ನು ಹಿಂದಿರುಗಿಸುವುದು ಎಂದರೆ? ನಂಬಲು ಅಸಾಧ್ಯವಾದ ಮಾತು ಅಲ್ಲವೆ? ಎಂದು ನೆಟ್ಟಿಗರು ಲಲನ್‌ ಕುಮಾರ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.