ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್‍ಮೋಹನ್,ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್‍ಮೋಹನ್, ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಾಗರತ್ನಮ್ಮ ರಾಮ್‍ಮೋಹನ್ ಒಟ್ಟು 23 ಮತಗಳ ಪೈಕಿ 13 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಫೌಜಿಯಾ ಖಾನಂ 9 ಮತ ಪಡೆದುಕೊಂಡಿದ್ದಾರೆ. ಜರೀನಾ ತಾಜ್‍ಗೆ ಸೊನ್ನೆ ಮತಗಳು ಬಂದಿವೆ. 1 ಮತ ತಿರಸ್ಕøತಗೊಂಡಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೆಂಕಟಲಕ್ಷ್ಮಮ್ಮ ವೆಂಕಟರವಣ 12 ಮತ ಪಡೆದು ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ವೆಂಕಟಲಕ್ಷ್ಮಮ್ಮ ಜಿ.ರಮೇಶ್ 10 ಮತ ಪಡೆದಿದ್ದಾರೆ.
ಚುನಾವಣಾಧಿಕಾರಿ ಎನ್.ನಾರಾಯಣಸ್ವಾಮಿ, ಪಿಡಿಒ ಗೌಸ್‍ಸಾಬ್ ಚುನಾಣಾ ಕಾರ್ಯ ನಿರ್ವಹಿಸಿದರು. ಮುಖಂಡರಾದ ಶೇಷಾದ್ರಿ, ಅರುಣ ರವಿಕುಮಾರ್, ಜಿ.ಕೆ.ನಾಗರಾಜ್, ವೆಂಕಟರವಣಪ್ಪ, ಶಂಕರಪ್ಪ, ಶಿವಣ್ಣ, ಜಿ.ಎನ್.ರೆಡ್ಡಪ್ಪ ಇದ್ದರು.

ಗ್ರಹ ಜ್ಯೋತಿ ಯೋಜನೆಗೆ ಕುಂದಾಪುರದ ಜನಸಾಮಾನ್ಯರಿಂದ ಮೆಚ್ಚುಗೆ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ಕುಂದಾಪುರ: ಜು.10:ಗ್ರಹ ಜ್ಯೋತಿ ಯೋಜನೆ ಅಡಿ ಕುಂದಾಪುರ ಮೆಸ್ಕಾಂ ಕಚೇರಿಯ ಉಪ ವಿಭಾಗದಲ್ಲಿ 21,300 ಫಲಾನುಭವಿ ಗ್ರಾಹಕರು ಈಗಾಗಲೇ ನೋಂದಾಯಿತರಾಗಿದ್ದಾರೆ.

ಕುಂದಾಪುರ ಪುರಸಭೆ ಮತ್ತು ಸುತ್ತಮುತ್ತಲಿನ 22 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಉಪ ವಿಭಾಗದಲ್ಲಿ ಒಟ್ಟು 31,200 ಬಳಕೆದಾರರಿದ್ದು 25,000 ಗ್ರಾಹಕರು ಮಾಸಿಕ 200 ಯೂನಿಟ್ ಮೀರದವರಿದ್ದಾರೆ ಎಂದು ಈ ಹಿಂದಿನ ಬಳಕೆಯಿಂದ ಅಂದಾಜಿಸಲಾಗಿದೆ.

ಇನ್ನು 3700 ಅರ್ಹ ಗ್ರಾಹಕರು ನೊಂದಣಿಗೆ ಬಾಕಿ ಉಳಿದಿದ್ದು, ನೊಂದಣಿಗೆ ಸಮೀಪದ ಸೇವಾ ಸಿಂಧು ,ಗ್ರಾಮ ಒನ್ ಸೇವಾ ಕೇಂದ್ರ ಅಥವಾ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ನೋಂದಾಯಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊಗೆ ತಿಳಿಸಿದರು.

ಕೆಲವೆಡೆ ಒಂದು ಆರ್ ಆರ್ ನಂಬ್ರ ದಲ್ಲಿ ಎರಡು ಆಧಾರ್ ಕಾರ್ಡಿನಿಂದ ಎರಡು ಬಾರಿ ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಗಳನ್ನು ಬಗೆಹರಿಸಲಾಗುವುದು. ಗ್ರಾಮದಲ್ಲಿ ಈಗಾಗಲೇ ಮೆಸ್ಕಾಂ ಸಿಬ್ಬಂದಿಗಳು ಮೀಟರ್ ರೀಡಿಂಗ್ ನಡೆಸುತ್ತಿದ್ದು, ಶೂನ್ಯ ಬಿಲ್ ಗೆ ಕುಂದಾಪುರದ ಮಹಿಳೆಯರಿಂದ ಮತ್ತು ಜನಸಾಮಾನ್ಯರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಶಿಕ್ಷಕರಿಗೆ ಸೇವಾದಳ ಪುನಶ್ಚೇತನ ಕಾರ್ಯಾಗಾರ ; ರಾಷ್ಟ್ರಧ್ವಜ, ರಾಷ್ಟ್ರಗೀತೆ ಭಾರತದ ಸಾರ್ವಭೌಮತೆಯ ಸಂಕೇತ – ಸಿಎಂಆರ್ ಶ್ರೀನಾಥ್

ಕೋಲಾರ:- ತಮ್ಮದೇ ರಾಷ್ಟ್ರದ ಚಿಹ್ನೆ, ಧ್ವಜದ ಅಡಿಯಲ್ಲಿ ಹೋರಾಟಗಳನ್ನು ನಡೆಸುವ ಮೂಲಕ ಭಾರತೀಯರ ಸಾರ್ವಭೌಮತೆ, ಐಕ್ಯತೆ, ಘನತೆ ಗೌರವದ ಸಂಕೇತವಾಗಿ ಗಣರಾಜ್ಯೋತ್ಸವ ಸ್ವಾತಂತ್ರ್ಯದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ಆಯೋಜಿಸಲಾಗಿದ್ದ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಧ್ವಜ ಕುರಿತಂತೆ ಪ್ರತಿ ಮಕ್ಕಳಿಗೂ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ರಾಷ್ಟ್ರಧ್ವಜ ಕುರಿತಂತೆ ಪ್ರತಿಯೊಂದು ಮಾಹಿತಿಯನ್ನು ಹೊಂದುವುದು ಶಿಕ್ಷಕರ ಕರ್ತವ್ಯವಾಗಿದೆ, ಆ ಮಾಹಿತಿಯನ್ನು ಭಾರತ ಸೇವಾದಳವು ನೀಡುತ್ತದೆ ಎಂದು ತಿಳಿಸಿದರು.
ದೇಶದ ಗಣ್ಯ ವ್ಯಕ್ತಿಗಳು ರಾಷ್ಟ್ರಪತಿ, ಪ್ರಧಾನಿ ಮಂತ್ರಿ ಇತರರು ಹೊರದೇಶಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ಗೌರವ ಸೂಚಿಸುತ್ತಾರೆ. ಕ್ರೀಡಾಪಟುಗಳು ಜಯಶಾಲಿಯಾದಾಗ ಭಾರತ ಧ್ವಜದೊಂದಿಗೆ ಭಾರತದ ಹಿರಿಮೆಯನ್ನು ಹೆಚ್ಚಿಸುತ್ತಾರೆ. ಆ ಘನತೆ ರಾಷ್ಟ್ರದ ಧ್ವಜದಿಂದ ದೊರಕುತ್ತದೆ ಎಂದರು.
ಪ್ರತಿ ಶಾಲೆಗೆ ರಾಷ್ಟ್ರಧ್ವಜಸಂಹಿತೆ ಕುರಿತಂತೆ ಭಾರತ ಸೇವಾದಳ ಪ್ರಕಟಿಸಿರುವ ಪುಸ್ತಕಗಳನ್ನು ತಪ್ಪದೇ ವಿತರಿಸಲಾಗುವುದು ಎಂದು ನುಡಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಾತಂತ್ರ ದಿನ ಪ್ರತಿ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ವ್ಯವಸ್ಥಿತವಾಗಿ ಹಾರಿಸಬೇಕು. ಸರಿಯಾದ ವ್ಯವಸ್ಥೆಯಲ್ಲಿ ಬಾವುಟ ಹಾರಿಸದಿದ್ದರೆ ಸೇವೆಯಿಂದ ಅಮಾನತು ಆಗುವುದು ಖಚಿತ. ಪ್ರತಿನಿತ್ಯ ಪಾಠ ಮಾಡಿ ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವ, ಬುದ್ದಿ ಹೇಳುವ ಶಿಕ್ಷಕರು ಧ್ವಜಕ್ಕೆ ನೀಡುವ ಗೌರವವನ್ನು ಅರಿಯಬೇಕು. ದಿನನಿತ್ಯ ನಿಮ್ಮ ಕೆಲಸದ ಜಂಜಾಟದಲ್ಲಿ ಮರೆಯುವ ಪಾಠವನ್ನು ಭಾರತ ಸೇವಾದಳದಿಂದ ನಿಮಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರಧ್ವಜವೆಂದರೆ ರಾಷ್ಟ್ರಪತಿಗಳಿಗಿಂತಲೂ ದೊಡ್ಡದು ಎಂಬ ಭಾವನೆ ನಮ್ಮೆಲ್ಲರದ್ದು. ರಾಷ್ಟ್ರಕ್ಕೆ ನೀಡುವ ಗೌರವವನ್ನು ಧ್ವಜಕ್ಕೆ ನೀಡಲೇಬೇಕು. ಆದ್ದರಿಂದಲೇ ರಾಷ್ಟ್ರಧ್ವಜ ಸಮಿತಿ ನಿರ್ಮಿಸಿ ನೀತಿ, ನಿಯಮ ಉಲ್ಲಂಘನೆ ಆಗದಂತೆ ಧ್ವಜವನ್ನು ಹಾರಿಸಿ, ಇಳಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಅಮೃತ ಮಹೋತ್ಸವ ಆಚರಣೆ ಸಮಯದಲ್ಲಿ ಮನೆಮನೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿದರು, ಆದರೆ ಕೆಲವು ಕಡೆ ಅಗೌರವ ಘಟನೆಗಳು ಸಹ ನಡೆಯಿತು. ಆ ರೀತಿ ಆಗದಂತೆ ಪ್ರತಿ ಭಾರತೀಯರು ಹೆಚ್ಚಿನ ಘನತೆ ಗೌರವದಿಂದ ಧ್ವಜವನ್ನು ಸಮಯಕ್ಕೆ ಸರಿಯಾಗಿ ಹಾರಿಸಬೇಕು ಮತ್ತು ಇಳಿಸಬೇಕು ಎಂದು ವಿವರಿಸಿದರು.
ಇಡೀ ಭಾರತಕ್ಕೆ ಖಾದಿ ಬಟ್ಟೆಯಲ್ಲಿ ರಾಷ್ಟ್ರಧ್ವಜವನ್ನು ನೆಯ್ದು ನೀಡುತ್ತಿರುವ ರಾಷ್ಟ್ರಧ್ವಜ ನಿರ್ಮಾಣದ 50 ಸಂಘಟನೆಗಳು ಕರ್ನಾಟಕ ರಾಜ್ಯದ ಧಾರವಾಡ, ಹುಬ್ಬಳ್ಳಿಯಲ್ಲಿದೆ. ಅವರಿಗೆ ಜೀವನ ನಡೆಸಲು ಕಷ್ಟವಾಗಿದೆ, ಸರಿಯಾದ ಸಬ್ಸಿಡಿ, ಕಚ್ಚಾ ಸಾಮಗ್ರಿಗಳ ಪೂರೈಕೆ ಇಲ್ಲದೆ. ಇಡೀ ರಾಷ್ಟ್ರಕ್ಕೆ ಧ್ವಜಗಳನ್ನು ಪೂರೈಸಲು ಆಗುತ್ತಿಲ್ಲವೆಂದು ತಿಳಿಸಿದರು.
ಪ್ರತಿ ತಾಲೂಕಿನಲ್ಲಿ ಭಾರತ ಸೇವಾದಳ ಘಟಕಗಳಿದೆ. ಪ್ರತಿ ಶಾಲೆಯಲ್ಲಿ 33 ಜನ ತಂಡ ಮಾಡಿ, ರಾಷ್ಟ್ರ ಹಬ್ಬಗಳನ್ನು ಆಚರಿಸುವ ಸಮಯದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಗೌರವ ನೀಡುವ ಹಾಗೂ ಬ್ಯಾಂಡ್ ಸೆಟ್ ತರಬೇತಿಯನ್ನು ಸೇವಾದಳ ನೀಡುತ್ತದೆ ಎಂದರು.
ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಇಂದಿನ ಪೀಳಿಗೆ ಮಕ್ಕಳಿಗೆ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಹೋರಾಟಗಾರರ, ಬಲಿದಾನಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ರಾಷ್ಟ್ರಕ್ಕೆ ರಾಷ್ಟ್ರಧ್ವಜಕ್ಕೆ ನೀಡುವ ಗೌರವವನ್ನು ಮಕ್ಕಳಿಗೆ ತಿಳಿಸಬೇಕು ಆಚರಿಸಲು ಸೂಚಿಸಬೇಕು. ಭಾರತ ಸೇವಾದಳವು ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯವನ್ನು ಪೂರೈಸಿಕೊಂಡು ಬರುತ್ತಿದೆ ಎಂದರು.
ಭಾರತ ಸೇವಾದಳ ರಾಜ್ಯ ಕಾರ್ಯದರ್ಶಿ ಮಹೇಶ್ ಗೌಡ ಹಾಗೂ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜ ಕಟ್ಟುವ, ಮಡಚುವ, ಹಾರಿಸುವ ಸಮಯದಲ್ಲಿ ಯಾವಗೀತೆ ಹಾಡಬೇಕು ಹಾಗೂ ಇಳಿಸುವ ಸಮಯದಲ್ಲಿ ಯಾವ ಗೀತೆ ಹಾಡಬೇಕು ಎಂಬ ವಿಧಾನಗಳ ಕುರಿತು ಪ್ರತ್ಯಕ್ಷಿಕೆ ನೀಡಿದರು.
ಈ ಸಂದರ್ಭದಲ್ಲಿ ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ತಾಲೂಕು ಅಧ್ಯಕ್ಷ ಶ್ರೀರಾಮ್, ಗೌರವಾಧ್ಯಕ್ಷ ಅಪ್ಪಿ ನಾರಾಯಣಸ್ವಾಮಿ, ಬಹದ್ದೂರ್ ಸಾಬ್, ಚಾಮುಂಡೇಶ್ವರಿ, ಸರಸ್ವತಮ್ಮ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ದಾನೇಶ್ ನಿರೂಪಿಸಿ, ಶ್ರೀರಾಮ್ ಸ್ವಾಗತಿಸಿ, ಶ್ರೀನಿವಾಸಮೂರ್ತಿ ವಂದಿಸಿದರು.

3 ಕೋಟಿ ವೆಚ್ಚದಲ್ಲಿ ಜಿಲ್ಲಾ ನೌಕರರ ಭವನ ನಿರ್ಮಾಣ ಆಗಸ್ಟ್ ಕೊನೆ ವಾರ ಗುದ್ದಲಿ ಪೂಜೆ ನಡೆಸಲು ತೀರ್ಮಾನ-ಸುರೇಶ್‍ಬಾಬು

ಕೋಲಾರ:- ಅಂದಾಜು ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೂರು ಮಹಡಿಗಳ ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡದ ಗುದ್ದಲಿ ಪೂಜೆ ಆಗಸ್ಟ್ ಕೊನೆ ವಾರ ಹಮ್ಮಿಕೊಂಡಿರುವುದಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ತಿಳಿಸುತ್ತಿದ್ದಂತೆ ಕಾರ್ಯಕಾರಿ ಸಮಿತಿ ಅನುಮೋದನೆ ನೀಡಿತು.
ನಗರದ ರೋಟರಿ ಭವನದಲ್ಲಿ ಜಿಲ್ಲಾ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಗೆ ಚಾಲನೆ ನೀಡಿ, ಕಳೆದ ತಿಂಗಳು ನಿವೃತ್ತರಾದ ಗ್ರಾ.ಪಂ ಪಿಡಿಒ ನಾಗರಾಜ್, ಜಿಪಂನ ಚೆನ್ನಪ್ಪ, ತೋಟಗಾರಿಕಾ ಇಲಾಖೆಯ ಕದಿರಪ್ಪ ಅವರನ್ನು ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.
ಸುಂದರ ನೌಕರರ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಹಲವಾರು ದಾನಿಗಳು ಮುಂದೆ ಬಂದಿದ್ದಾರೆ ಜತೆಗೆ ಜಿಲ್ಲೆಯ ಅನೇಕ ನೌಕರರು ಆರ್ಥಿಕ ನೆರವು ಒದಗಿಸಲು ಒಪ್ಪಿದ್ದಾರೆ ಎಂದು ಸಭೆಗೆ ತಿಳಿಸಿದ ಸುರೇಶ್‍ಬಾಬು, ನಿವೃತ್ತ ನೌಕರರೂ ಸಹಾ ಕಟ್ಟಡ ಕಾಮಗಾರಿಗೆ 2 ಲಕ್ಷ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಸೆ.3ನೇ ವಾರವೇ ಪ್ರತಿಭಾ ಪುರಸ್ಕಾರ


ಜಿಲ್ಲಾ ನೌಕರರ ಸಂಘದಿಂದ ಸೆಪ್ಟೆಂಬರ್ ಮೂರನೇ ವಾರ ನೌಕರರ ಸಾಧಕ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸಂಘದ ವಾರ್ಷಿಕ ಮಹಾಸಭೆ ನಡೆಸಲು ಇದೇ ಸಂದರ್ಭದಲ್ಲಿ ಸಭೆ ಅನುಮೋದನೆ ನೀಡಿತು.
ವಿಧಾನಸಭಾ ಚುನಾವಣೆ ಮತ್ತಿತರ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟವನ್ನು ತುಮಕೂರಿನಲ್ಲಿ ನಡೆಸಲು ನಿರ್ಧರಿಸಿದ್ದು, ಕ್ರೀಡಾಕೂಟದ ಉದ್ಘಾಟನೆಗೆ ಮುಖ್ಯಮಂತ್ರಿಗಳು ದಿನಾಂಕ ನಿಗಧಿ ಮಾಡಿದ ಕೂಡಲೇ ಚಾಲನೆ ಸಿಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡ ತಾಲ್ಲೂಕು ಸಂಘಗಳ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ದಾಖಲೆ,ವಹಿಗಳನ್ನು ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಹಾಲಿ ಖಜಾಂಚಿ ವಿಜಯ್ ಮತ್ತವರ ತಂಡ ಪಡೆದುಕೊಂಡಿದ್ದು ವಾಪಸ್ಸು ನೀಡಿಲ್ಲ ಎಂದು ಆರೋಪಿಸಿದಾಗ ಅಧ್ಯಕ್ಷರು ಉತ್ತರಿಸಿ ಸಂಘಕ್ಕೆ ವರದಿಯನ್ನೂ ನೀಡಿಲ್ಲ ಮತ್ತು ಕಡತಗಳನ್ನು ಹಿಂತಿರುಗಿಸಿಲ್ಲ ಕೂಡಲೇ ಕಡತ ಹಿಂತಿರುಗಿಸಲು ಸಭೆಯಲ್ಲಿ ಇದ್ದ ಅವರಿಗೆ ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್ ಅವರಿಗೆ ಸಂಘದ ಕಡತಗಳೊಂದಿಗೆ ಜವಾಬ್ದಾರಿ ಹಸ್ತಂತರಿಸುವಂತೆ ಚೌಡಪ್ಪ ಅವರಿಗೆ ಸಭೆಯಲ್ಲಿ ಸೂಚಿಸಲಾಯಿತು. ಸಂಘದ ಕೆಲವು ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು, ಅಂತಹವರ ವಿರುದ್ದ ಕಠಿಣ ಕ್ರಮಕ್ಕೆ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಹಾಲಿ ಖಜಾಂಚಿ ವಿಜಯ್ ಅವರು ಸಂಘದ ಕೆಲಸಗಳ ನಿರ್ವಹಣೆಗೆ ಸ್ಪಂದಿಸದಿರುವ ಕುರಿತು ಸಭೆಯ ಗಮನಕ್ಕೆ ತರಲಾಯಿತು.

ಒಗ್ಗಟ್ಟಾಗಿ ಸಾಗಲು ಕೆಎನ್‍ಎಂ ಮನವಿ


ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಹೋಗಬೇಕಾಗಿದೆ, ಸಂಘಟನೆ ಬಲಗೊಳಿಸುವ ಕೆಲಸ ಆಗಬೇಕು, ಹಿಂದೆ ಚೌಡಪ್ಪ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಣೆಯಲ್ಲಿ ಸ್ಪಂದನೆ ನೀಡದ ಕಾರಣವೇ ಅಜಯ್ ನೇಮಕವಾಗಿದೆ ಹಾಗೆಯೇ ಈಗ ಖಜಾಂಚಿ ವಿಜಯ್ ಸಹಾ ಸಹಕಾರ ನೀಡದಿರುವುದು ನಿಜ ಎಂದರು.
ಸಂಘವನ್ನು ಒಟ್ಟಾಗಿ ಮುನ್ನಡೆಸೋಣ ಎಲ್ಲಾ ಸದಸ್ಯರು ಕೈಜೋಡಿಸಿ ಎಂದ ಅವರು, ನೂತನ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ನೌಕರರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‍ಕುಮಾರ್,ರಾಜ್ಯಪರಿಷತ್ ಸದಸ್ಯ ಗೌತಮ್,ಗೌರವಾಧ್ಯಕ್ಷ ರವಿಚಂದ್ರ,ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಖಜಾಂಚಿ ವಿಜಯ್,ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್, ಉಪಾಧ್ಯಕ್ಷರಾದ ಪುರುಷೋತ್ತಮ್,ನಂದೀಶ್, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ, ಖಜಾಂಚಿ ಕೃಷ್ಣಮೂರ್ತಿ,ಶ್ರೀನಿವಾಸ್, ಬಂಗಾರಪೇಟೆ ಅಧ್ಯಕ್ಷ ಅಪ್ಪೇಗೌಡ, ಜಿಲ್ಲಾ ಪದಾಧಿಕಾರಿಗಳಾದ ಶಿವಕುಮಾರ್, ಖಜಾನೆ ಶಂಕರ್, ವಿಜಯಮ್ಮ, ಪ್ರೇಮ, ಅನಿಲ್, ರವಿ,ಶ್ರೀರಾಮ್, ಚೌಡಪ್ಪ,ರತ್ನಪ್ಪ, ನಾಗಮಣಿ, ಎನ್.ಎಸ್.ಭಾಗ್ಯ,ಕಲಾವತಿ,ಮಂಜುಳಾ, ಯೂನಿಸ್ ಖಾನ್,ಹರ್ಷಿತ್‍ಗಾಂಧಿ, ಶಿಕ್ಷಕ ಬಳಗದ ವೆಂಕಟಾಚಲಪತಿ,ಚಿಕ್ಕಣ್ಣ,ಸದಾಶಿವರೆಡ್ಡಿ,ಮಲ್ಲಿಕಾರ್ಜುನ್, ಸುಬ್ರಮಣಿ,ಕೋರ್ಟ್‍ನ ನಾಗರಾಜ್,ಮುನಿಸ್ವಾಮಿ, ಬಸವೇಗೌಡ,ನಟರಾಜ್ ಮತ್ತಿತರರಿದ್ದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ ಆಝಾದಿ ಕಾ ಅಮೃತ್ ಮಹೋತ್ಸವ್’ ದ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ  ‘ಹರ್ ಘರ್ ಧ್ಯಾನ್’

ಯುವಜನರನ್ನು ಮಾನಸಿಕ ಆರೋಗ್ಯ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಮತ್ತು ಧ್ಯಾನವನ್ನು ನಿಯಮಿತ ಅಭ್ಯಾಸವಾಗಿ ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ‘ ಹರ್ ಘರ್ ಧ್ಯಾನ್ ‘ ಕಾರ್ಯಕ್ರಮವನ್ನು ಸಂಸ್ಕೃತಿ ಸಚಿವಾಲಯ‌ದ ಸಹಯೋಗದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು. ಆರ್ಟ್ ಆಪ್ ಲಿವಿಂಗ್ ನ ಉಡುಪಿ ಘಟಕದ ಸದಸ್ಯರಾದ  ಶ್ರೀಮತಿ ಶೈಲಜಾ ಇವರು ಸುಧಾರಿತ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಧಾನ್ಯ- ಸಂಬಂಧಿ ಕೆಲವು ಆಸನಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆರ್ಟ್ ಆಫ್ ಲಿವಿಂಗ್ ನ ಕುಂದಾಪುರ ಘಟಕದ ಸದಸ್ಯೆ ಶ್ರೀಮತಿ ಮಂಜುಶ್ರೀ ಇವರು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ವಿವಿಧ ಆಸನಗಳ ಪ್ರಾತ್ಯಕ್ಷಿಕೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆಸಿಐ ಕುಂದಾಪುರ ಸಿಟಿ ಯ ವತಿಯಿಂದ ‘ನ್ಯಾಷನಲ್ ಲೆವೆಲ್ ಟ್ಯಾಲೆಂಟ್ ಸರ್ಚ್’  ಪರೀಕ್ಷೆ‌

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಕುಂದಾಪುರ ಸಿ ಟಿ ಯ ವತಿಯಿಂದ ‘ ನ್ಯಾಷನಲ್ ಲೆವೆಲ್  ಟ್ಯಾಲೆಂಟ್ ಸರ್ಚ್ ‘ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಪರೀಕ್ಷಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿ, ಜೆಸಿ.ಐ ಕುಂದಾಪುರ ಸಿಟಿ ಯ ಅಧ್ಯಕ್ಷರಾದ ಜೆಸಿ ಡಾ. ಸೋನಿ ಡಿಕೊಸ್ಟಾ, ಸ್ಥಾಪಕ ಅಧ್ಯಕ್ಷರಾದ ಜೆಸಿ ಹುಸೇನ್ ಹೈಕಾಡಿ, ಜೆಸಿ ರಾಜೇಶ್ ಹೆಬ್ಬಾರ್, ಮಹಿಳಾ ಜೆಸಿ ಸಂಯೋಜಕಿ ಜೆಸಿ ಪ್ರೇಮಾ ಡಿ ಕುನ್ಹಾ, ಜೆಸಿ ಅನಿತಾ ಡಿಸೋಜಾ ರವರು ಉಪಸ್ಥಿತರಿದ್ದರು. 

ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಅರ್ಪಿತಾ ಡಿಸೋಜಾಅವರಿಗೆ ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದಲ್ಲಿ ನಾಲ್ಕನೇ ರೇಂಕ್

ಮಂಗಳೂರು, ಆಗಸ್ಟ್‌ 8, 2023: ಅರ್ಪಿತ ಡಿಸೊಜಾ, ಮಂಗಳೂರಿನ ಸಿಟಿ ಕಾಲೇಜ್‌ ಆಫ್‌ ಫಿಜಿಯೊಥೆರಪಿ
ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು ಪ್ರತಿಷ್ಠಿತ ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ
ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ನಾಲ್ಕನೇ ರ್ಯಾಂಕ್‌ ಪಡೆದಿದ್ದಾರೆ. ಇವರು ಡೊಡ್ಡ ಮೂಲೆ ಹೌಸ್‌, ಕಯ್ಯಾರ್‌, ಕಾಸರಗೋಡು ನಿವಾಸಿಗಳಾದ ಅಲ್ಬರ್ಟ್‌ ಡಿಸೊಜಾ ಮತ್ತು ಸೆಲೀನ್‌ ಮಚಾದೊವರ ಮಗಳಾಗಿದ್ದಾರೆ.

ಹಿರಿಯ ಸಹಕಾರಿ ಧುರೀಣ – ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ ಇನ್ನಿಲ್ಲ

ಕುಂದಾಪುರ: ಹಿರಿಯ ಸಹಕಾರಿ ಧುರೀಣ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಬಸ್ರೂರು ಕೋಟಿ ಚೆನ್ನಯ್ಯ ಗರಡಿಯ ಮುಖ್ಯಸ್ಥರಾದ ಗೋಪಾಲ ಪೂಜಾರಿ (68 ವ) ಆ.8ರಂದು ಹೃದಯಘಾತದಿಂದ ನಿಧನರಾದರು.

ಸಹಕಾರ ಕ್ಷೇತ್ರದಲ್ಲಿ ಸುದೀರ್ಫ ಅವಧಿಯಿಂದ ಗುರುತಿಸಿಕೊಂಡಿದ್ದ ಅವರು ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು. ಬಸ್ರೂರು ಗರಡಿಯ ಪಾತ್ರಿಗಳಾಗಿ, ಗರಡಿಯ ಅಭಿವೃದ್ಧಿಯಲ್ಲಿ
ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಸ್ರೂರು ಪರಿಸರದ ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಸತ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ಪತ್ನಿ, ಸಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಅವಿಶ್ವಾಸ ನಿರ್ಣಯ ಮಂಡನೆ

ನವದೆಹಲಿ:ಆ.೮: ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರವಾಗಿ ಪ್ರತಿಪಕ್ಷಗಳು ಮೋದಿ  ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್  ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆಯಲ್ಲಿ ಬುಧವಾರ ಅವಿಶ್ವಾಸ ನಿರ್ಣಯದ ಕುರಿತು ನೋಟಿಸ್ ನೀಡಿದರು. ಕಾಂಗ್ರೆಸ್ ಮಾತ್ರವಲ್ಲದೆ ತೆಲಂಗಾಣದ ಆಡಳಿತ ಪಕ್ಷ ಬಿಆರ್‌ಎಸ್ ಕೂಡ ಪ್ರತ್ಯೇಕ ಅವಿಶ್ವಾಸ ನಿರ್ಣಯ ಮಂಡಿಸಿದೆ.

      ಸಭಾಪತಿ ಓಂಬಿರ್ಲಾ ಅವಿಶ್ವಾಸ ನಿರ್ಣಯ ನೋಟಿಸ್‌ ಸ್ವೀಕರಿಸಿದ್ದು, ಶೀಘ್ರದಲ್ಲಿ ಚರ್ಚೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಣಿಪುರದ ಬಗ್ಗೆ ಮೌನ ತಾಳಿರುವ ಪ್ರಧಾನಿಯಿಂದ ಹೇಳಿಕೆಗಳು ಬರಬೇಕು ಎಂದು ನಿರ್ಧರಿಸಿರುವ ವಿಪಕ್ಷಗಳು ಕಡೆಯ ಅಸ್ತ್ರ ಎನ್ನುವಂತೆ ಅವಿಶ್ವಾಸ ನಿರ್ಣಯ ಮಂಡಿಸಿವೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ಸರ್ಕಾರವೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ ಹೇಳಲಾಗುತ್ತದೆ.     

    ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರ ನೀಡಲಿದ್ದಾರೆ. ಇದರಲ್ಲಿ ಎರಡು ರೀತಿಯಲ್ಲಿ ಪ್ರತಿಪಕ್ಷಗಳನ್ನು ಟಾರ್ಗೆಟ್ ಮಾಡಬಹುದು ಎನ್ನಲಾಗುತ್ತಿದೆ. ಮೊದಲನೆಯದಾಗಿ ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಬಿಜೆಪಿಯೇತರ ರಾಜ್ಯಗಳ ಅಂಕಿ ಅಂಶಗಳು ಮತ್ತು ಘಟನೆಗಳನ್ನು ಉಲ್ಲೇಖಿಸಿ ಮತ್ತು ಎರಡನೆಯದಾಗಿ ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ. ಮಣಿಪುರದ ಹಿಂಸಾಚಾರವನ್ನು ಪ್ರಸ್ತಾಪಿಸಿ ಅದಕ್ಕಿಂತ ಹೆಚ್ಚು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಬಹುದು ಎಂದು ಅನುಮಾನ ಪಡಲಾಗಿದೆ.