ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ: ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಗುರುವಾರ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಮತ್ತು ಸಿಬ್ಬಂದಿ ಭೇಟಿ ನೀಡಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಸಾಮಗ್ರಿ ವಿತರಣೆ, ಸ್ವೀಕರಣೆ ಹಾಗೂ ಮತ ಎಣಿಕೆ ಕೇಂದ್ರ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದರು.
’ಪಟ್ಟಣದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ ಎಣಿಕೆಗೆ ಸೂಕ್ತ ಸ್ಥಳವೆಂದು ಗುರುತಿಸಲಾಗಿದೆ. ಈ ಕಟ್ಟಡದಲ್ಲಿ 25 ಗ್ರಾಮ ಪಂಚಾಯಿತಿಗಳ ಮತಗಳನ್ನು ಎಣಿಸಲು ಅಗತ್ಯವಾದ ಕೊಠಡಿಗಳಿವೆ. ಮತ ಎಣಿಕೆ ನಡೆಯುವಾಗಿ ಭದ್ರತೆ ಒದಗಿಸಲು ಅನುಕೂಲಕರವಾಗಿದೆ’ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಹೇಳಿದರು.
ಮತ ಎಣಿಕೆಗೆ ಮಾತ್ರವಲ್ಲದೆ ಮತದಾನ ನಡೆಯುವ ದಿನ ಚುನಾವಣಾ ಸಾಮಗ್ರಿ ವಿತರಿಸಲು ಹಾಗೂ ಚುನಾವಣೆ ಮುಗಿದ ಬಳಿಕ ಮತ ಯಂತ್ರಗಳನ್ನು ಸ್ವೀಕರಿಸಲು ಈ ಕಟ್ಟಡ ಸೂಕ್ತವಾಗಿದೆ. ಹಾಗಾಗಿ ಚುನಾವಣಾ ಸಾಮಗ್ರಿ ವಿತರಣೆ, ಸ್ವೀಕರಣೆ ಹಾಗೂ ಮತ ಎಣಿಕೆಗೆ ಈ ಕಟ್ಟಡ ಬಳಸಿಕೊಳ್ಳಲಾಗುವುದು ಎಂದು ಹೇಳಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸಮೂರ್ತಿ, ಕಂದಾಯ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ಗುರುರಾಜ ರಾವ್್, ಎಂಜಿನಿಯರ್ ಎಲ್.ಎಂ.ನಾಗರಾಜ್ ಇದ್ದರು.