ಶ್ರೀನಿವಾಸಪುರ: ರಾಜ್ಯ ಬಿಜೆಪಿ ಸರ್ಕಾರ ಜನ ಮೆಚ್ಚುವಂತೆ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿದೆ :ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್‌.ವೇಣುಗೋಪಾಲ್‌ ಹೇಳಿದರು

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಪ್ರವಾಹ ಪರಿಸ್ಥಿತಿ ಎದುರಾಯಿತು. ಅದನ್ನು ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಯಿತು ಹೇಳಿದರು.  ಕೋವಿಡ್‌ – 19 ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಿದ ಪರಿಣಾಮವಾಗಿ, ರಾಜ್ಯದಲ್ಲಿ ಸಾವು ನೋವು ಕಡಿಮೆಯಾಯಿತು. ದೇಶಕ್ಕೆ ಮಾದರಿಯಾಗಿ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಲಾಯಿತು. ಕೊರೊನಾ ಸಂಕಷ್ಟಕ್ಕೆ ಒಳಗಾದ ಸಮಾಜದ ವಿವಿಧ ವರ್ಗದ ಜನರ ಹಸಿವು ನೀಗಲು ಪ್ಯಾಕೇಜ್‌ ಮೂಲಕ ನೆರವು ಕಲ್ಪಿಸಲಾಯಿತು. ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಆರ್ಥಿಕ ಪ್ಯಾಕೇಜ್‌ ಪ್ರಕಟಿಸಿ ಸಹಾಯ ಮಾಡಲಾಯಿತು ಎಂದು ಹೇಳಿದರು.  ಕೇಂದ್ರ ಸರ್ಕಾರದ ನೆರವಿನಿಂದ ತಾಲ್ಲೂಕಿನಲ್ಲಿ ರೂ.500 ಕೋಟಿ ವೆಚ್ಚದಲ್ಲಿ ರೈಲ್ವೆ ವರ್ಕ್‌ಷಾಪ್‌ ಪ್ರಾರಂಭಿಸಲಾಗುವುದು. ಅದರಿಂದ ಸ್ಥಳೀಯ ಪ್ರತಿಭಾವಂತರಿಗೆ ಉದ್ಯೋಗಾವಕಾಶ ಸಿಗುತ್ತದೆ. 2023ರ ಹೊತ್ತಿಗೆ ಈ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಿಸಾನ್‌ ಸಮ್ಮಾನ್‌ ಯೋಜನೆ ರೈತರಿಗೆ ವರದಾನವಾಗಿದೆ. ಕೇಂದ್ರ ಸರ್ಕಾರ ಪ್ರತಿ ರೈತ ಕುಟುಂಬಕ್ಕೆ ರೂ.6000 ನೀಡಿದರೆ ರಾಜ್ಯ ಸರ್ಕಾರ ರೂ.4000 ನೀಡುತ್ತದೆ. ವಾರ್ಷಿಕ ರೂ.10 ಸಾವಿರ ಸಿಗುತ್ತದೆ ಎಂದು ಹೇಳಿದರು.  ಮುಖಂಡರಾದ ಜಯರಾಮರೆಡ್ಡಿ, ಎಂ.ಲಕ್ಷ್ಮಣಗೌಡ, ಜೆ.ಅಶೋಕರೆಡ್ಡಿ, ನಾಗರಾಜ್‌, ಹೊದಲಿ ನಾರಾಯಣಸ್ವಾಮಿ, ಶಿವಶಂಕರೇಗೌಡ, ಶ್ರೀನಾಥ್‌ ಬಾಬು, ರಮೇಶ್‌, ರವಿತೇಜ, ಕೊಟ್ರಗುಳಿ ನಾರಾಯಣಸ್ವಾಮಿ ಇದ್ದರು.