ಮಳೆ ನೀರನ್ನು ಭೂಮಿಗೆ ಇಂಗಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿ :ಆನಂದ ಸಿ.ಕುಂದರ್

ವರದಿ: ಚಂದ್ರಶೇಖರ, ಬೀಜಾಡಿ 

ಮಳೆ ನೀರನ್ನು ಭೂಮಿಗೆ ಇಂಗಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿ :ಆನಂದ ಸಿ.ಕುಂದರ್

 

ಬೀಜಾಡಿಯಲ್ಲಿ ಮಳೆ ನೀರು ಕೊಯ್ಲು ಕಾರ್ಯಾಗಾರ ಉದ್ಘಾಟಿಸಿ ಆನಂದ ಸಿ.ಕುಂದರ್
ಕುಂದಾಪುರ: ಈ ಬಾರಿ ಮಳೆ ವಿಳಂಬವಾಗಿ ನೀರಿನ ಅಭಾವ ನಾವೆಲ್ಲ ಕಂಡಿದ್ದೇವೆ.ಮಳೆಗಾಲದದಲ್ಲಿ ಮಳೆ ನೀರನ್ನು ಹರಿದು ಹೋಗಲು ಬಿಡದೇ ಅದನ್ನು ತಮ್ಮ ವಠಾರದಲ್ಲಿ ಭೂಮಿಗೆ ಇಂಗಿಸುವ ಮಹತ್ಕಾರ್ಯ ಸಾರ್ವಜನಿಕರು ಕೈಜೋಡಿಸಬೇಕು.ಪ್ರತಿಯೊಬ್ಬರ ಮನೆಯಲ್ಲೂ ಮಳೆ ನೀರು ಕೊಯ್ಲು ಘಟಕವಾದರೇ ನೀರಿನ ಅಭಾವ ತಪ್ಪಿಸಬಹುದು ಎಂದು ಕೋಟ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ಅವರು ಭಾನುವಾರ ಬೀಜಾಡಿ ಗೋಪಾಡಿ ಮಿತ್ರ ಸಂಗಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಥಿ ಯೋಜನೆ ಕೋಟೇಶ್ವರ ವಲಯ,ಕೋಟ ಪಡುಕರೆ ಗೀತಾನಂದ ಫೌಂಡೇಶನ್ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಮಳೆ ನೀರು ಕೊಯ್ಲು ಕಾರ್ಯಾಗಾರ,ಪ್ರಾತ್ಯಕ್ಷಿಕೆ ಹಾಗೂ ಸಸಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೀಳಿಗೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗ ಬೇಕಾದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.ಗಿಡ ಮರಗಳನ್ನು ಬೆಳೆಸಬೇಕು. ಆದರೆ ಇಂದು ಪರಿಸರವನ್ನು ನಾವೇ ನಾಶಮಾಡುತ್ತಿದ್ದೇವೆ. ಇದು ಬೇಸರದ ಸಂಗತಿ. ಇಂದಿನ ಯುವ ಜನತೆ ಪರಿಸರದ ಬಗ್ಗೆ ಅರಿತು ತಮ್ಮ ತಮ್ಮ ಊರಲ್ಲಿ ಸಸಿ ನೆಟ್ಟು ಬೆಳೆಸಿ, ಶುದ್ದ ಗಾಳಿ, ಸಮೃದ್ಧ ಪರಿಸರ ನಿರ್ಮಿಸಬೇಕು ಎಂದರು
ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಉಪಾಧ್ಯಕ್ಷ, ಪ್ರಗತಿಪರ ಕೃಷಿಕ ಬಿ.ಶೇಷಗಿರಿ ಗೋಟ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ.ಬಿ ಅತಿಥಿಗಳಾಗಿ ಆಗಮಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಜಲತಜ್ಞ ಜೋಸೆಫ್ ರೆಬೆಲ್ಲೋ ಸಂಪನ್ಮೂಲ ವ್ಯಕ್ತಿಯಾಗಿ ಮಳೆ ನೀರು ಕೊಯ್ಲು ಬಗ್ಗೆ ವಿವರವಾದ ಮಾಹಿತಿ ನೀಡಿದರು.ವೇದಿಕೆಯಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ,ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್,ಕಾರ್ಯದರ್ಶಿ ಚಂದ್ರ ಬಿ.ಎನ್,ಗ್ರಾಮಾಭಿವೃದ್ಥಿ ಯೋಜನೆ ನಾಗರಾಜ್, ಗ್ರಾಮಾಭಿವೃದ್ಥಿ ಯೋಜನೆಯ ಕೇಂದ್ರ ಸಮಿತಿಯ ಅಧ್ಯಕ್ಷೆ ಶೋಭಾ ಚಂದ್, ಬೀಜಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಾರದಾ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ್ ಬೀಜಾಡಿ ಸ್ವಾಗತಿಸಿದರು.ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಾಭಿವೃದ್ಥಿ ಯೋಜನೆಯ ಕೃಷಿ ಅಧಿಕಾರಿ ಚೇತನ್ ಕುಮಾರ್ ವಂದಿಸಿದರು.