ಕೋಲಾರ : ಸರ್ಕಾರವು ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು – ಜಿಲ್ಲಾಧಿಕಾರಿ ಸಿ ಸತ್ಯಭಾಮ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಸರ್ಕಾರವು ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ತಿಳಿಸಿದರು ಇಂದು ಮಾಲೂರು ತಾಲ್ಲೂಕಿನ ಟೇಕಲ್‌ನ ನಾಡಕಛೇರಿ ಆವರಣದಲ್ಲಿ ಹೋಬಳಿ ವ್ಯಾಪ್ತಿಯ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಗರಿಕರು ತಾಲ್ಲೂಕು ಕೇಂದ್ರಕ್ಕೆ ಬರುವುದಕ್ಕೆ ಕಷ್ಟ ಎಂದು ಭಾವಿಸಿ ಹೋಬಳಿವಾರು ಕಂದಾಯ ಮತ್ತು ಪಿಂಚಣಿ ಅದಾಲತ್ ಮಾಡಲಾಗುತ್ತಿದೆ. ಸಂಧ್ಯಾ ಸುರಕ್ಷಾ , ವಿಧವಾ ವೇತನ , ಪಿಂಚಣಿ , ಪಹಣಿ ತಿದ್ದುಪಡಿ , ಹಳೆಯ ಕ್ರಯಪತ್ರ ತಿದ್ದುಪಡಿ , ನ್ಯಾಯಾಲಯದ ಆದೇಶಗಳಿಗೆ ಸಂಬಂಧಿಸಿದಂತೆ 7 ವಿದದ ತಿದ್ದುಪಡಿಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದರು . ಜಿಲ್ಲೆಯಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಮಂದಿ ಪಿಂಚಣಿದಾರರಿದ್ದಾರೆ. ಸಾರ್ವಜನಿಕರಿಂದ ಸ್ವೀಕರಿಸಿದ ವಿವಿಧ ರೀತಿಯ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ಕ್ರಮವಹಿಸಿ , ಒಂದು ತಿಂಗಳೊಳಗೆ ಪರಿಹರ ಒದಗಿಸಲಾಗುವುದು ಎಂದರು . ಪಿಂಚಣಿಗಳಿಗೆ ಸಂಬಂಧಿಸಿದ 126 ಅರ್ಜಿಗಳು , ಪೌತಿ ಖಾತೆಗೆ ಸಂಬಂಧಿಸಿದ 112 ಅರ್ಜಿಗಳು , ಪಳೆಯ ಕ್ರಯಪತ್ರ ತಿದ್ದುಪಡಿಗೆ ಸಂಬಂಧಿಸಿದ 16 ಅರ್ಜಿಗಳು , ಪಹಣಿ ತಿದ್ದುಪಡಿಗೆ ಸಂಬಂಧಿಸಿದ 39 ಅರ್ಜಿಗಳು , ನ್ಯಾಯಾಲಯದ ಆದೇಶಗಳಿಗೆ ಸಂಬಂಧಿಸಿದ 11 ಅರ್ಜಿಗಳು ಸೇರಿದಂತೆ ಒಟ್ಟು 304 ಅರ್ಜಿಗಳು ಬಂದಿದ್ದು ಇದರಲ್ಲಿ 126 ಪಿಂಚಣಿ ಅರ್ಜಿಗಳಲ್ಲಿ 104 ಅರ್ಜಿಗೆ ಇಂದು ಆದೇಶ ಪ್ರತಿಗಳನ್ನು ವಿತರಿಸಲಾಗಿದೆ ಎಂದರು. ಜಿಲ್ಲೆಯು ಸುಮಾರು 48 ದಿನಗಳ ಕಾಲ ಗ್ರೀನ್ ಝೋನ್ ನಲ್ಲಿತ್ತು. ತದನಂತರ ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ಪತ್ತೆ ಆಯಿತು . ಸದ್ಯ ಕರೋನ ಜತೆ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಸರ್ಕಾರವು ಎಲ್ಲಾ ಚಟುವಟಿಕೆಗೆ ಅನುಮತಿ ನೀಡಿದೆ ಎಂದರು . ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ ಅವರು ಮಾತನಾಡಿ , ವೃದ್ಧಾಪ್ಯ ವೇತನ , ಸಂಧ್ಯಾ ಸುರಕ್ಷಾ ವೇತನ , ಮನಸ್ವಿ ಯೋಜನೆ , ಮೈತ್ರಿ ಯೋಜನೆಗಳಿಗೆ ಪ್ರಮಾಣ ಪತ್ರಗಳನ್ನು ಮಾಡಿಸಿಕೊಳ್ಳಲು ನಾಗರಿಕರು ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕಂದಾಯ ಮತ್ತು ಪಿಂಚಣಿ ಆದಾಲತ್ ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು . ನ್ಯಾಯಾಲಯ ಆದೇಶದಂತೆ ಖಾತೆಗಳನ್ನು ತಿದ್ದುಪಡಿ , ಪಹಣಿ ತಿದ್ದುಪಡಿ , ಪೌತಿ ವರಸೆ ಖಾತೆ , ಹಳೆಯ ಕ್ರಯಪತ್ರ ತಿದ್ದುಪಡಿ ಈ ಎಲ್ಲಾ ಅಂಶಗಳನ್ನು ಆಧರಿಸಿ ಕಂದಾಯ ಮತ್ತು ಪಿಂಚಣಿ ಅದಾಲತ್ ಮಾಡಲಾಗುತ್ತಿದೆ . ಅದರಂತೆ ಕಂದಾಯ ಇಲಾಖೆ ಶೇ 80-90 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು . ಕಾರ್ಯಕ್ರಮದಲ್ಲಿ ಮಾಲೂರು ತಹಶೀಲ್ದಾರ್ ಎಲ್ ಮಂಜುನಾಥ್ , ಉಪ ತಹಶೀಲ್ದಾರ್ ಗಳಾದ ಜಗನ್ನಾಥ ರೆಡ್ಡಿ , ಅನಿಲ್ ಗಾಂಧಿ , ರಾಜಸ್ವ ನಿರೀಕ್ಷರಾದ ಮುನಿಶಾಮಿಶೆಟ್ಟಿ , ರವಿಕುಮಾರ್ , ಗ್ರಾಮ ಲೆಕ್ಕಾಧಿಕಾರಿಗಳಾದ ರೂಪೇಂದ್ರ , ವಿನಯ್ ಕುಮಾರ್ , ಸುಧಾಮಣಿ , ಗುರುದತ್ ಸೇರಿದಂತೆ ಕಂದಾಯ ಇಲಾಖೆ , ಆರೋಗ್ಯ ಇಲಾಖೆ , ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು .