ಕೋಲಾರ: ಟೊಮ್ಯಾಟೊ ಬೆಳೆಯಲ್ಲಿ ಊಜಿ ಹಾವಳಿಗೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳು

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಕೋಲಾರ: ಟೊಮ್ಯಾಟೊ ಬೆಳೆಯಲ್ಲಿ ಊಜಿ ಹಾವಳಿಗೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳು
ಕೋಲಾರ :  ಕೋಲಾರ ಜಿಲ್ಲೆಯ ಹಲವು ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಮೇರಿಕನ್ ಪಿನ್‍ವರ್ಮ್ (ಟುಟಾ ಅಬ್ಸಲೂಟ- ರೈತರ ಭಾಷೆಯಲ್ಲಿ ಊಜಿ) ಎಂಬ ಕೀಟದ ಹಾವಳಿ ಹೆಚ್ಚಾಗಿದ್ದು ರೈತರನ್ನು ಕಂಗಾಲಾಗುವಂತೆ ಮಾಡಿದೆ.  ಹಲವು ನಿರ್ವಹಣೆ ಕ್ರಮ ಕೈಗೊಂಡರೂ ಇದರ ಉಲ್ಬಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಮಾರುಕಟ್ಟೆಗೆ ಸಾಗಿಸಲು ಭಯಭೀತರಾಗಿದ್ದು ಕಡಿಮೆ ಆದಾಯಕ್ಕೆ ಒಗ್ಗಿಕೊಳ್ಳಬೇಕಾಗಿದೆ.
ಈ ನಿಟ್ಟಿನಲ್ಲಿ ಐಸಿಎಆರ್- ಕೃಷಿ ವಿಜ್ಞ್ಞಾನ ಕೇಂದ್ರದ ತಜ್ಞರು ಇದರ ನಿರ್ವಹಣೆಗೆ ಹಲವು ಕ್ರಮಗಳನ್ನು ರೈತರಿಗೆ ಸೂಚಿಸಿದ್ದು, ಜಿಲ್ಲೆಯ ಕೆ.ಜಿ.ಎಫ್. ತಾಲ್ಲೂಕಿನ ಬೇತಮಂಗಳ ಹೋಬಳಿಯ ತಿಮ್ಮಸಂದ್ರ ಗ್ರಾಮದ ಕೆಲವು ರೈತರ ಟೊಮ್ಯಾಟೊ ತಾಕುಗಳಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದು, ಇತರೆ ರೈತರು ಈ ಪದ್ಧತಿಯನ್ನು ಅನುಸರಿಸಿದ್ದಲ್ಲಿ ಊಜಿ ಕೀಟದ ಬಾಧೆಯಿಂದ ಆದಷ್ಟು ಟೊಮ್ಯಾಟೊ ಬೆಳೆಯನ್ನು ಕಾಪಾಡಿ ಹೆಚ್ಚಿನ ಇಳುವರಿ ಪಡೆದು ಉತ್ತಮ ಆದಾಯ ಗಳಿಸಬಹುದಾಗಿದೆ. 
ಕೀಟ ಬಾಧೆಯ ಗುಣಲಕ್ಷಣ: ಈ ಕೀಟದ ಮರಿಕೀಟವು ಎಲೆಗಳ ಮೇಲೆ ಸುರಂಗ ಮಾಡಿ ದೊಡ್ಡದಾದ ದ್ವಾರಗಳನ್ನುಂಟು ಮಾಡುತ್ತವೆ ಹಾಗೂ ಹಣ್ಣುಗಳಲ್ಲಿ ರಂಧ್ರ ತೋಡುವುದರಿಂದ ಹೆಚ್ಚಿನ ನಷ್ಟವು ಉಂಟಾಗುತ್ತದೆ.  ನಾಟಿಯ ಸಮಯದಿಂದ ಹಣ್ಣು ಕಟಾವಾಗುವ ತನಕವು ಈ ಕೀಟವು ಬೆಳೆಗೆ ಬಾಧಿಸುವುದರಿಂದ ಟೊಮ್ಯಾಟೊ ಬೆಳೆಗೆ ಮಾರಕವಾಗಿದೆ. ಈ ಕೀಟದ ಸಂತಾನೋತ್ಪತ್ತಿ ಹೆಚ್ಚಿದ್ದು ಒಂದು ವರ್ಷಕ್ಕೆ 10-12 ಪೀಳಿಗೆಯನ್ನು ಹೊಂದಿರುತ್ತದೆ.  
ಪ್ರೌಢ ಹೆಣ್ಣು ಕೀಟವು ತನ್ನ ಜೀವಿತಾವಧಿಯಲ್ಲಿ ಕನಿಷ್ಟ 100 ಮೊಟ್ಟೆ ಇಡುವ ಸಾಮಥ್ರ್ಯ ಹೊಂದಿರುತ್ತದೆ.  ಈ ಕೀಟವು ಟೊಮ್ಯಾಟೊ ಗಿಡದ ಕುಡಿ, ಎಲೆ, ಕಾಂಡ, ಹೂ ಮತ್ತು ಹಣ್ಣುಗಳಿಗೆ ಭಾದಿಸುವುದಲ್ಲದೆ ಬಾಧೆಗೊಳಗಾದ ಭಾಗಗಳಲ್ಲಿ ಕಪ್ಪು ಬಣ್ಣದ ಮರಿಕೀಟದ ಹಿಕ್ಕೆ ಕಾಣಬಹುದು.  ಸೂಲನೇಸಿ ಜಾತಿಗೆ ಸೇರಿದ ಆಲೂಗಡ್ಡೆಯಲ್ಲಿ ಈ ಕೀಟದ ಬಾಧೆಯನ್ನು ಕಡಿಮೆ ಮಟ್ಟದಲ್ಲಿ ಕಾಣಬಹುದು.
     ಟೊಮ್ಯಾಟೊ ಪಿನ್‍ವರ್ಮ್ (ಊಜಿ) ನಿರ್ವಹಣೆಗೆ ಸೂಕ್ತ ಕ್ರಮಗಳು: ಮುಂಜಾಗ್ರತೆಯಾಗಿ ನಾಟಿಯ ಸಮಯದಲ್ಲಿ ಅಥವಾ ನಾಟಿಗೆ ಮುಂಚೆಯೇ ಬೆಳೆ ಪ್ರದೇಶದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.  ನಾಟಿಯ ನಂತರ ಬೆಳೆಪ್ರದೇಶವು ಕಳೆ ಮತ್ತು ಗಿಡಗಳ ಅವಶೇಷಗಳಿಂದ ಮುಕ್ತವಾಗಿರಬೇಕು. ಬೆಳೆಯ ಕಟಾವಿನ ತನಕ ಬೆಳೆ ಪ್ರದೇಶದ ಸ್ವಚ್ಚತೆ ಕಾಪಾಡಿಕೊಳ್ಳಬೇಕು.  ನಾಟಿಯ ಮುಂಚೆ ಬೆಳೆ ಪ್ರದೇಶದ ಗಡಿಭಾಗದ ಸುತ್ತಲೂ 40 ಮೆಶ್‍ನ ನೈಲಾನ್ ನೆಟ್ ಹಾಕುವುದು ಅಥವಾ ಗಿಡ ನಾಟಿ ಮಾಡುವ 15 ದಿನಗಳ ಮೊದಲು ಗಡಿ ಭಾಗದ ಸುತ್ತ 2 ಸಾಲಿನಲ್ಲಿ ಮೇವಿನ ಜೋಳದ ಬೀಜ ಬಿತ್ತುವುದು ಅಥವಾ ಗಡಿಭಾಗದಲ್ಲಿ ಚೆಂಡು ಹೂವು ಬೆಳೆಸುವುದು.
  ಮೋಹಕ ನೀರಿನ ಬಲೆಯ ಬಳಕೆಯಿಂದ ಉತ್ತಮ ನಿರ್ವಹಣೆ: ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಲಿತವಾಗಿರುವ ಟುಟಾಸಾನ್ ಅಥವಾ ಟುಟಾ ಟ್ರ್ಯಾಪ್ ಎಂಬ ಕೆಂಪು ಬಣ್ಣದ ಮೋಹಕ ನೀರಿನ ಬಲೆಯಿಂದ ಈ ಕೀಟವನ್ನು ಹತೋಟಿಯಲ್ಲಿಡಬಹುದು.  ಟುಟಾಸಾನ್ ಎಂಬ ಮೋಹಕ ನೀರಿನ ಬಲೆಯನ್ನು ಖರೀದಿಸಿ ಎರಡು ಟೊಮ್ಯಾಟೊ ಸಾಲುಗಳ ಮಧ್ಯೆ 3 ರಿಂದ 4 ಅಡಿ ಎತ್ತರದಲ್ಲಿ ದಾರದಿಂದ ಟೊಮ್ಯಾಟೊ ಸಾಲುಗಳ ಕೋಲುಗಳಿಗೆ ಕಟ್ಟಬೇಕು ಹಾಗೂ ಈ ಬಲೆಗಳಿಗೆ ಟುಟಾ ಲ್ಯೂರ್ ಎಂಬ ಸಣ್ಣ ಮೋಹಕ ಬಿಲ್ಲೆಯನ್ನು ಸೇರಿಸಬೇಕು.  ನಂತರ ಈ ಬಲೆಗೆ 3/4 ಭಾಗದಷ್ಟು ನೀರು ಹಾಕಿ 50 ರಿಂದ 100 ಮಿಲಿಯಷ್ಟು ಹರಳೆಣ್ಣೆ ಅಥವಾ ಇಂಜಿನ್ ವೇಸ್ಟ್ ಆಯಿಲ್‍ನ್ನು ಹಾಕಬೇಕು.  ನೀರಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. 6 ಮೋಹಕ ನೀರಿನ ಬಲೆಯನ್ನು ಪ್ರತಿ ಎಕರೆಗೆ ಬಳಸಬೇಕು. ಈ ಬಲೆಗಳಿಗೆ ಹೆಚ್ಚಿನ ರೀತಿಯಲ್ಲಿ ಟೊಮ್ಯಾಟೊ ಪಿನ್‍ವರ್ಮ್ ಊಜಿಗಳು ಆಕರ್ಷಿಸಿ ಕೀಟದ ನಿಯಂತ್ರಣವಾಗುವುದಲ್ಲದೆ ಬೆಳೆಯನ್ನು ರಕ್ಷಿಸಿ ಹೆಚ್ಚಿನ ಇಳುವರಿ ಪಡೆಯಬಹುದು.
ರಾಸಾಯನಿಕ ವಿಧಾನದಲ್ಲಿ ಕೆಲವು ಕೀಟನಾಶಕಗಳಾದ ಕ್ಲೊರಾನ್ ಟ್ರಾನಿಲಿಪ್ರೊಲ್ (ಕೊರಾಜನ್), ಸ್ಪೈನೊಸಾಡ್ ಮತ್ತು ಇಂಡಾಕ್ಸ್‍ಕಾರ್ಬ್ ಕೂಡ ಈ ಕೀಟದ ನಿಯಂತ್ರಣಕ್ಕೆ ಉತ್ತಮ ರಾಸಾಯನಿಕಗಳಾಗಿವೆ.
ಬೆಳೆ ಪ್ರದೇಶವನ್ನು ಸ್ವಚ್ಚವಾಗಿಡುವುದರ ಜೊತೆಯಲ್ಲಿ ಟೂಟಾ ಟ್ರ್ಯಾಪ್‍ನ ಬಳಕೆಯು ಟೊಮ್ಯಾಟೊ ಪಿನ್‍ವರ್ಮ್ (ಊಜಿ) ನ ನಿರ್ವಹಣೆಗೆ ಫಲಕಾರಿ ಗುಣ ಹೊಂದಿದೆ.  ಟೊಮ್ಯಾಟೊ ಬೆಳೆಯಲ್ಲಿ ಟುಟಾ ಟ್ರ್ಯಾಪ್ ಹಾಗೂ  ಸೂಕ್ತ ರಾಸಾಯನಿಕಗಳ ಬಳಕೆಯ ಅರಿವು ರೈತರಿಗೆ ಮೂಡಿಸುವ ಅನಿವಾರ್ಯತೆ ಎದುರಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಕೆ.ತುಳಸೀರಾಮ್ ಅವರು ತಿಳಿಸಿದ್ದಾರೆ.