ಎಂಎಲ್‍ಸಿ ಸ್ಥಾನ ನೀಡಿಕೆ-ಜೆಡಿಎಸ್ ಮುಖಂಡರಿಗೆ ಧನ್ಯವಾದ ಜ್ವಲಂತ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆ : ಗೋವಿಂದರಾಜು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಎಂಎಲ್‍ಸಿ ಸ್ಥಾನ ನೀಡಿಕೆ-ಜೆಡಿಎಸ್ ಮುಖಂಡರಿಗೆ ಧನ್ಯವಾದ ಜ್ವಲಂತ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆ :ಗೋವಿಂದರಾಜು

 

 

ಕೋಲಾರ:- ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಪಕ್ಷವನ್ನು ಸಂಘಟಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಾಮಪತ್ರ ಸಲ್ಲಿಸಿ ಅಧಿಕೃತ ಫಲಿತಾಂಶಕ್ಕಾಗಿ ಕಾಯುತ್ತಿರುವ ಉದ್ಯಮಿ ಇಂಚರ ಗೋವಿಂದರಾಜು ತಿಳಿಸಿದರು.

ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆಯಾಗಲಿರುವ ಅವರನ್ನು ನಗರದ ಅವರ ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರು, ಅಭಿಮಾನಿಗಳು ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಎಂಎಲ್‍ಸಿಯಾಗಲು ಜೆಡಿಎಸ್ ನನಗೆ ಅವಕಾಶ ನೀಡಿದೆ, ಇದಕ್ಕೆ ಕಾರಣರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪಕ್ಷದ ಎಲ್ಲಾ ಮುಖಂಡರಿಗೂ ಅವರು ಧನ್ಯವಾದ ಸಲ್ಲಿಸಿದರು.

ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ, ರಸ್ತೆಗಳ ಅವ್ಯವಸ್ಥೆಯನ್ನು ಇಲ್ಲೇ ಜೀವನ ನಡೆಸಿ ಕಂಡಿದ್ದೇನೆ, ಈ ಸಮಸ್ಯೆಗಳ ಪರಿಹಾರ ಪ್ರಥಮ ಆದ್ಯತೆ ಎಂದು ಪರಿಗಣಿಸಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೆಸಿ ವ್ಯಾಲಿ ನೀರು ಹೆಚ್ಚುವರಿ ಹರಿಸುವ ಕುರಿತು,ಎತ್ತಿನಹೊಳೆ ಕಾಮಗಾರಿ, ಯರಗೋಳು ಶೀಘ್ರ ಮುಗಿಯುವಂತಾಗಲು ಜಿಲ್ಲೆಯ ಎಲ್ಲಾ ಹಿರಿಯ ಜನಪ್ರತಿನಿಧಿಗಳೊಂದಿಗೆ ನಾನು ಇರುತ್ತೇನೆ ಎಂದರು.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ಕಾರ್ಯದಲ್ಲಿ ಇಲ್ಲಿನ ಎಲ್ಲಾ ಮುಖಂಡರು,ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಹಕಾರದೊಂದಿಗೆ ಮುನ್ನಡೆಯುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಮುರಳಿ, ಬೇಕರಿ ಚಂದ್ರಶೇಖರ್, ಬಸವರಾಜ ಚಿಲಕಾಂತಮಠ್, ಸುಧಾಕರ್, ಹರೀಶ್,ಚಿರಂಜೀವಿ, ಕಲಾ ರಮೇಶ್, ಜಗದೀಶ್ ಮತ್ತಿತರರಿದ್ದರು.