ಅಶಾ ಕಾರ್ಯಕರ್ತೆಯರಿಗೆ ಸಹಕಾರಿ ಬ್ಯಾಂಕ್‍ಗಳ ಮೂಲಕ ಸಾಲ ನೀಡಲಾಗುವುದು: ಎಸ್.ಟಿ ಸೋಮಶೇಖರ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

 

ಅಶಾ ಕಾರ್ಯಕರ್ತೆಯರಿಗೆ ಸಹಕಾರಿ ಬ್ಯಾಂಕ್‍ಗಳ ಮೂಲಕ ಸಾಲ ನೀಡಲಾಗುವುದು: ಎಸ್.ಟಿ ಸೋಮಶೇಖರ್

 

 

 

ಕೋಲಾರ, ಕರೋನಾ ಸಂದರ್ಭದಲ್ಲಿ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ವಿತರಣೆ ಮಾಡಲಾಗುವುದು ಎಂದು ಸಹಕಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ತಿಳಿಸಿದರು.

ಇಂದು ನಗರದ ಟಿ.ಚನ್ನಯ್ಯರಂಗಮಂದಿರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತೆಯರು ಕರೋನಾ ಸಂದರ್ಭದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು ಇದನ್ನು ಗುರುತಿಸಿದ ಮಾನ್ಯ ಮುಖ್ಯ ಮಂತ್ರಿಗಳು ಆಶಾಕಾರ್ಯಕರ್ತೆಯರಿಗೆ 3000 ರೂಗಳ ಪ್ರೋತ್ಸಾಹಧನ ಫೋಷಿಸಿದ್ದಾರೆ. ಸಹಕಾರ ಇಲಾಖೆಯಿಂದ ಈ ಸಂಬಂಧ ಆದೇಶ ಹೊರಡಿಸಿದ್ದು ಲಾಭದಲ್ಲಿ ಇರುವ ಸಹಕಾರಿ ಸಂಸ್ಥೆಗಳಿಂದ ಹಣ ಕ್ರೋಢೀಕರಿಸಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಸಹಕಾರ ಇಲಾಖೆಯ ಮೂಲಕ 2 ಲಕ್ಷ 80 ಸಾವಿರ ರೈತರಿಗೆ 13 ಸಾವಿರ ಕೋಟಿ ಸಾಲವನ್ನು ವಿತರಿಸಲಾಗಿದೆ. ಸಾಲವನ್ನು ಡಿಸಿಸಿ ಬ್ಯಾಂಕ್‍ಗಳು ಹಾಗೂ ಸಹಕಾರಿ ಬ್ಯಾಂಕುಗಳ ಮೂಲಕ ವಿತರಿಸುತ್ತಿದ್ದು ಅರ್ಹರಿಗೆ ಸಾಲ ನೀಡುವಂತೆ ಸೂಚಿಸಲಾಗಿದೆ. ಕೆಲವು ಬ್ಯಾಂಕ್‍ಗಳ ಬಗ್ಗೆ ದೂರುಗಳಿದ್ದು ಪರಿಶೀಲಿಸಲಾಗುವುದು. ಹೊರ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡಿನಿಂದ ಬಂದ ಹೆಚ್ಚಿನವರಿಗೆ ಕರೋನಾ ಕಂಡು ಬರುತ್ತಿದೆ. ಲಾಕ್‍ಡೌನ್ ಸಡಿಲ ಮಾಡಿದ್ದು ಜನರು ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ಅವರು ಮಾತನಾಡಿ, ರಾಜ್ಯದ 40,500 ಆಶಾ ಕಾರ್ಯಕರ್ತೆಯರಿಗೆ ತಲಾ 3000 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆಶಾಕಾರ್ಯಕರ್ತೆಯರು ಕಲಿಯುಗದ ದೇವತೆಗಳಿದ್ದ ಹಾಗೆ. ಜಿಲ್ಲೆಯು ಗಡಿ ಭಾಗದಲ್ಲಿ ಇದ್ದರು ಕರೋನಾ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದರು.

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್ ಮುನಿಸ್ವಾಮಿ ಅವರು ಮಾತನಾಡಿ, ಕೋವಿಡ್ 19 ಹಿನ್ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಶಾ ಕಾರ್ಯಕರ್ತರ ಸೇವೆಯನ್ನು ಮನಗಂಡು ರಾಜ್ಯ ಸರ್ಕಾರವು ಚೆಕ್ ವಿತರಣೆ ಮಾಡುತ್ತಿದೆ. ಕರೋನ ಹಿನ್ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಶಾ ಕಾರ್ಯಕತೆರ್Àಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳುತ್ತದೆ. ಜಿಲ್ಲಾಡಳಿತ ಕಾರ್ಯವೈಖರಿಯಿಂದ 48 ದಿನಗಳ ಕಾಲ ಕೋಲಾರ ಜಿಲ್ಲೆಯು ಗ್ರೀನ್ ಜೋನ್‍ನಲ್ಲಿತ್ತು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್‍ವೆಂಕಟೇಶ್ ಅವರು ಮಾತನಾಡಿ, ಸೀಲ್‍ಡೌನ್ ಇರುವ ಪ್ರದೇಶದಲ್ಲೂ ಧೈರ್ಯದಿಂದ ಕೆಲಸ ಮಾಡಿ ಅರಿವು ಮೂಡಿಸುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ 3000 ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಇರುವ ಕಲಾವಿದರು, ಆಶಾ ಕಾರ್ಯಕರ್ತೆಯರು ಹಾಗೂ ಕರೋನಾ ವಾರಿಯರ್ಸ್‍ಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಸಿ. ಸತ್ಯಭಾಮ ಅವರು ಮಾತನಾಡಿ, ಕೋಲಾರ ಜಿಲ್ಲೆಯು 48 ದಿನಗಳ ಕಾಲ ಯಾವುದೇ ಪ್ರಕರಣವಿಲ್ಲದೆ ಹಸಿರು ವಲಯದಲ್ಲಿತ್ತು, ಲಾಕ್‍ಡೌನ್ ಸಡಿಲಿಕೆಯಾದ ನಂತರ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದರವರಿಗೆ ಕರೋನಾ ಕಂಡುಬಂದಿದೆ. ಲಾಕ್‍ಡೌನ್ ಅವಧಿಯಲ್ಲೂ ಜಿಲ್ಲೆಯ ರೈತರು ತಮ್ಮ ಉತ್ಪಾದನೆಯನ್ನು ಮಾರಾಟ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಇದುವರೆಗೂ 30 ಪಾಸಿಟೀವ್ ಪ್ರಕರಣಗಳು ಕಂಡು ಬಂದಿದ್ದು 18 ಪ್ರಕರಣಗಳು ಗುಣಮುಖರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಒಂದು ತಂಡವಾಗಿ ಕಾರ್ಯನಿರ್ವಹಿಸಿ ಕರೋನಾ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದೆ ಎಂದರು.