

ಕುಂದಾಪುರ: ಜನವರಿ 27ರಂದು ಬಳ್ಕೂರು ಗ್ರಾಮದ ಬಳಿ.ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪ ಅವರ ಪುತ್ರಿಯರಾದ ಯುಕ್ತಿ ಉಡುಪ ಮತ್ತು ಸುನಿಧಿ ಉಡುಪ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮತ್ತು ಕರ್ನಾಟಕ ಕಲಾಶ್ರೀ ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಮಂಗಳೂರು ಇವರು ಉದ್ಘಾಟಿಸಿ ಶುಭಹಾರೈಸಿದರು.
ಇಬ್ಬರೂ ಕಲಾವಿದರ ಗುರು ನೃತ್ಯ ವಸಂತ ನಾಟ್ಯಾಲಯ (ರಿ) ಕುಂದಾಪುರದ ನಿರ್ದೇಶಕರಾದ ವಿದುಷಿ ಶ್ರೀಮತಿ ಪ್ರವಿತಾ ಅಶೋಕ್ ಅವರು ತಮ್ಮ ವಿದ್ಯಾರ್ಥಿನಿಯರಾದ ಯುಕ್ತಿ ಉಡುಪ ಮತ್ತು ಸುನಿಧಿ ಉಡುಪ ಅವರಿಗೆ ಗೆಜ್ಜೆಗಳನ್ನು ಕೊಡುವುದರ ಮೂಲಕ ರಂಗಪ್ರವೇಶವನ್ನು ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಬೆಂಗಳೂರಿನ ಸಂಸ್ಕೃತಿ – (ದೇವಾಲಯ ಕಲಾ) ಇದರ ಕಲಾ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ಗುರು ಶ್ರೀ ಸತ್ಯನಾರಾಯಣ ರಾಜು, ಮಂಗಳೂರಿನ ಸಂದೇಶ ಲಲಿತಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮತ್ತು ಭರತನಾಟ್ಯ ವಿಭಾಗದ ಮುಖ್ಯಸ್ಥರಾದ ಗುರು ಶ್ರೀ ವಾಣಿ ರಾಜಗೋಪಾಲ್ ಮತ್ತು ಮಂಗಳೂರಿನ ಬಿಜೈ ಇಲ್ಲಿನ ನೃತ್ಯ ಕಲಾ ನಿಕೇತನದ ನಿರ್ದೇಶಕರಾದ ಗುರು ವಿದುಷಿ ಶೃದ್ಧಾ ನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ನಂತರ ಪುಷ್ಪಾಂಜಲಿ ಭರತನಾಟ್ಯ ಕಾರ್ಯಕ್ರಮ ಮತ್ತು ದೇವರು ಪೂಜೆ ಕಾರ್ಯಕ್ರಮ ನಡೆಯಿತು.
ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
