ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಪಾಳು ಬೀಳುತ್ತಿರುವ ಎಪಿಎಂಸಿಗಳಿಗೆ ಬಲ ತುಂಬಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ-ರೈತಸಂಘ

ಶ್ರೀನಿವಾಸಪುರ; ಜೂ.: ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಪಾಳು ಬೀಳುತ್ತಿರುವ ಎಪಿಎಂಸಿಗಳಿಗೆ ಬಲ ತುಂಬಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಬೇಕೆಂದು ರೈತಸಂಘದಿಂದ ತಹಸೀಲ್ದಾರ್ ಹಾಗೂ ಎಪಿಎಂಸಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡುವ ಎಪಿಎಂಸಿ ಇಂದು ಮೂಲಭೂತ ಸೌಕರ್ಯಗಳಿಲ್ಲದೆ ಸ್ಮಶಾನಗಳಾಗಿ ಮಾರ್ಪಟ್ಟಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಶುಲ್ಕ ಪಾವತಿಸಲು ಆದಾಯವಿಲ್ಲದೆ ಅನಾಥವಾಗುತ್ತಿವೆ ಎಂದು ಎಪಿಎಂಸಿ ಅವ್ಯವಸ್ಥೆ ವಿರುದ್ಧ ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಹಾಗೂ ಎಪಿಎಂಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 4 ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಮೂರು ಕಾಯಿದೆಗಳನ್ನು ರೈತರ ಹೋರಾಟದ ಪ್ರತಿಫಲ ವಾಪಸ್ ಪಡೆಯಿತು. ಆದರೆ, ರಾಜ್ಯ ಸರ್ಕಾರ ತನ್ನ ಮೊಂಡುತನದಿಂದ ಯಾವುದೇ ಕಾಯಿದೆಯನ್ನು ವಾಪಸ್ ಪಡೆಯದೆ ಅದನ್ನೇ ಮುಂದುವರೆಸಿದ ಹಿನ್ನೆಲೆಯಲ್ಲಿ ಎಪಿಎಂಸಿಗೆ ಬರುತ್ತಿದ್ದ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಆರೋಪ ಮಾಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ವಿಶ್ವ ವಿಖ್ಯಾತಿ ಮಾವಿನ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬದುಕು ಕಟ್ಟಿಕೊಳ್ಳಲು ಬರುವ ಕೂಲಿ ಕಾರ್ಮಿಕರು, ವರ್ಷಪೂರ್ತಿ ಬೆವರು ಸುರಿಸಿ ಮನೆ ಮಕ್ಕಳಂತೆ ಸಾಕುವ ರೈತರು, ಆರೋಗ್ಯದಿಂದ ಬಂದು ಅನಾರೋಗ್ಯ ಪೀಡಿತರಾಗಿ ಮನೆಗೆ ವಾಪಸ್ ಹೋಗುವ ಮಟ್ಟಕ್ಕೆ ಮಾರುಕಟ್ಟೆ ವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪ ಮಾಡಿದರು.
ಈ ಕಾಯಿದೆಯಿಂದ ಎಪಿಎಂಸಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಜೊತೆಗೆ ಯಾರ್ಡ್‍ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವರ್ತಕರು ಎಪಿಎಂಸಿ ಆಡಳಿತ ಮಂಡಳಿಯ ಕೈತಪ್ಪಿ ತಮಗಿಷ್ಟ ಬಂದ ರೀತಿ ವ್ಯಾಪಾರ ಮಾಡುವ ಮೂಲಕ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿರುವ ಜೊತೆಗೆ ಮಾರುಕಟ್ಟೆಗೆ ವರ್ತಕರು ಪಾವತಿಸುತ್ತಿದ್ದ ಸೆಸ್ ಶೇ.1.5 ರಿಂದ ಶೇ.0.60ಕ್ಕೆ ಇಳಿಕೆ ಮಾಡಿ ಎಪಿಎಂಸಿಯಿಂದ ಹೊರಗಡೆ ವ್ಯಾಪಾರ ಮಾಡುವ ಮುಖಾಂತರ ಪಾವತಿಸಬೇಕಾದ ಸೆಸ್ ಹಣಕ್ಕೂ ಹೊಡೆತ ಬಿದ್ದಿದೆ ಎಂದು ಹೇಳಿದರು.
ರೈತರ ನಿರೀಕ್ಷೆಯಂತೆ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿ ಅಭಿವೃದ್ಧಿಪಡಿಸುವ ಜೊತೆಗೆ ವರ್ತಕರ ಮೇಲೆ ವಿಧಿಸುತ್ತಿರುವ ಸೆಸ್ ಶೇ.1.5ಕ್ಕೆ ಏರಿಕೆ ಮಾಡಬೇಕು. ಮಾವು ಮಾರುಕಟ್ಟೆಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಆಲವಾಟ ಶಿವ, ಶೇಕ್ ಶಫಿಉಲ್ಲಾ, ವೆಂಕಟ್ ಮುಂತಾದವರಿದ್ದರು.