ರಸ್ತೆಯಲ್ಲಿ ಅಡುಗೆ ಮಾಡಿ ಶೋ ಕೊಟ್ಟ ಸಂಸದೆ ಎಲ್ಲಿ ?-ದೇವಕಿ ಸಣ್ಣಯ್ಯ ಆಕ್ರೋಶ

ವರದಿ : ಮಝರ್, ಕುಂದಾಪುರ

ಕುಂದಾಪುರ : ಕೊರೊನಾ ಸಾಂಕ್ರಾಮಿಕದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರು ಯಾವುದೇ ಲಂಗು ಲಗಾಮಿಲ್ಲದಂತೆ ಏರುತ್ತಿರುವ ಅಡುಗೆ ಅನಿಲದ ಬೆಲೆಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಇದೀಗ ಮತ್ತೆ ಸೆಪ್ಟೆಂಬರ್ 01ರಿಂದ ಅಡುಗೆ ಅನಿಲ ಸಿಲಿಂಡರ್ ಮೇಲೆ 25ರೂ. ಏರಿಕೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಹೇಳಿವೆ.ಈಗಾಗಲೇ ಗ್ರಹ ಬಳಕೆಗೆ ಸಿಗುತ್ತಿದ್ದ ಸಬ್ಸಿಡಿಯನ್ನು ನುಂಗಿ ಹಾಕಿರುವ ಸರ್ಕಾರ ಇದೀಗ ಸಬ್ಸಿಡಿರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಸಹಾ 25 ರೂ. ಏರಿಕೆ ಮಾಡಿದ್ದಲ್ಲದೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 75 ರೂ. ನಷ್ಟು ಏರಿಸಲಾಗಿದೆ.ಸಾರ್ವಜನಿಕರ ಯಾವುದೇ ಅಹವಾಲುಗಳಿಗೂ ಕ್ಯಾರೆ ಎನ್ನದ ಸರ್ಕಾರ ತನ್ನ ಸರ್ವಾಧಿಪತ್ಯಕ್ಕೆ ಅಂಕಿತವಿಟ್ಟಿರುವುದು ಸ್ಪಷ್ಟವಾಗಿ ದೆ.
ಅಂದು ಹಿಂದಿನ ಸರಕಾರದ ವಿರುದ್ಧ ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೋವ್ ಇಟ್ಟುಕೊಂಡು ಅಡಿಗೆ ಮಾಡಿ ಸಾರ್ವಜನಿಕರ ಪಾಲಿಗೆ ಸಾಕ್ಷಾತ್ ಅನ್ನಪೂರ್ಣೆಯಾಗಿ ಫೋಸ್ ಕೊಟ್ಟು ಪ್ರತಿಭಟಿಸಿದ ಸಂಸದೆ ಈಗೆಲ್ಲಿ ಕಾಣೆಯಾಗಿದ್ದಾರೆ ? ಸಂಸದೆಯನ್ನು ಬೆಂಬಲಿಸುವ ಭರದಲ್ಲಿ ಅನಿಲದರ ಏರಿಕೆಯಿಂದ ಕೈ ಸುಟ್ಟು ಕೊಳ್ಳುತ್ತಿರುವ ಹಿಂಬಾಲಕರು ಯಾಕೆ ಮಾತನಾಡುತ್ತಿಲ್ಲ ? ಕೊರೊನಾದಿಂದ ಕಂಗೆಟ್ಟು ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ಬಡವರಿಗೆ, ಮಧ್ಯಮ ವರ್ಗದವರಿಗೆ, ಹೋಟೆಲ್ ಉದ್ಯಮಿಗಳಿಗೆ LPG ಬೆಲೆ ಏರಿಕೆ ಭಾಗ್ಯ ಬಿಜೆಪಿ ನೀಡಿದೆ. ದುಡಿಯೋಕೆ ಕೆಲಸವಿಲ್ಲ ಕೈಯಲ್ಲಿ ಹಣವಿಲ್ಲ ಎಲ್ಲವೂ ದುಬಾರಿ!, ಅಗತ್ಯ ವಸ್ತುಗಳನ್ನು ದುಬಾರಿ ಬೆಲೆ ನೀಡಿ ಖರೀದಿಸುವುದು ಹೇಗೆ? ಇದೇನಾ ಬಿಜೆಪಿ ಸರಕಾರದ ಅಚ್ಛೇದಿನ ಎಂದು ಪುರಸಭೆ ಸದಸ್ಯೆ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ, ಶ್ರೀಮತಿ ದೇವಕಿ ಸಣ್ಣಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ