ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡಬೇಕು:ಜಿ.ಕೆ. ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು  ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಮನವಿ ಮಾಡಿದರು.

ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಇದು ನನ್ನ ಕೊನೆ ಚುನಾವಣೆ. ಮತದಾರರು ನನಗೆ ಮತ ನೀಡುವುದರ ಮೂಲಕ ಆಶೀರ್ವಾದ ಮಾಡಬೇಕು’ ಎಂದು ಕೋರಿದರು.

  ತಾಲ್ಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಏನಾದರೂ ಅಭಿವೃದ್ಧಿ ಆಗಿದ್ದರೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಾತ್ರ. ಇದು ಜನರಿಗೆ ತಿಳಿಯದ ವಿಷಯವಲ್ಲ. ಆದರೆ ಕೆಲವರು ನನ್ನ ವಿಷಯದಲ್ಲಿ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ವಿತರಣೆ ಮಾಡಲಾಗಿಲ್ಲ. ಮನೆ ಮಂಜೂರು ಮಾಡುವುದರಲ್ಲೂ ಪಕ್ಷಪಾತ ಮಾಡಲಾಗಿದೆ. ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಕೃಷಿ ಕೊಳವೆ ಬಾವಿ ಮಂಜೂರು ಮಾಡಲಾಗಿಲ್ಲ ಎಂದು ಹೇಳಿದರು.

  ಹತ್ತು ವರ್ಷ ಕಳೆದರೂ ತಾಲ್ಲೂಕಿನ ಹೆಚ್ಚು ಸಂಖ್ಯೆಯ ಮತದಾರರು ನನ್ನ ಕಡೆ ಇದ್ದಾರೆ. ಬದಲಾವಣೆ ಬಯಸುತ್ತಿದ್ದಾರೆ. ಈ ವಿಷಯ ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು. ಹೆಸರು ಹೇಳದೆ ಬಾಯಿಗೆ ಬಂದAತೆ ಮಾತನಾಡುವುದಲ್ಲ ಎಂದು ಹೇಳಿದರು.

  ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾರೆಡ್ಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಲ ಪಡೆದವರ ಮತಗಳನ್ನು ನೆಚ್ಚಿಕೊಂಡು ಗೆಲುವು ನಿರೀಕ್ಷಿಸುವ ಕಾಲ ಇದಲ್ಲ. ಈಗ ಮತದಾರರು ಬದಲಾಗಿದ್ದಾರೆ. ಡಿಸಿಸಿ ಬ್ಯಾಂಕ್ ನೀಡುವ ಸಾಲದ ಹಣ ಯಾರು ನೀಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಯಾರೂ ತಮ್ಮ ಜೇಬಿನಿಂದ ತೆಗೆದು ಕೊಟ್ಟಂತೆ ಮಾತನಾಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

  ತಾಲ್ಲೂಕಿನಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ. ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಆರಿಸಿಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ಗೆಲುವು ನಿಶ್ಚತಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಉಪರಪ್ಪಲ್ಲಿ ಗ್ರಾಮದ ನಾರಾಯಣಸ್ವಾಮಿ, ಚಿನ್ನಪ್ಪಲ್ಲ, ಮಹೇಶ್, ಮ್ಯಾಕಲನ್ನಗಾರಿ ಕಿಟ್ಟನ್ನ, ಕದಿರಂಪಲ್ಲಿ ಗ್ರಾಮದ ಬೋಡಲ್ಲ ಮುನಿಸ್ವಾಮಿ, ಭದ್ರಪ್ಪಗಾರಿ ಶಂಕರಪ್ಪ, ಮುಂತಗೋಕಲ ವೆಂಕಟ್ರಾಯಪ್ಪ, ಗುಡಿಸಿವಾರಿಪಲ್ಲಿ ಗ್ರಾಮದ ಶೀತನ್ನಗಾರಿ ರೆಡ್ಡಪ್ಪ, ದೇವಲಪಲ್ಲಿ ನರಸಿಂಹಡು, ರಾಮಾಂಜಿ, ಬಲ್ತಮರಿ ಗ್ರಾಮದ ಪಲ್ಲಿಗಡ್ಡ ನರಸಿಂಹಪ್ಪ, ಮಂಜು, ಆಂಜನೇಯರೆಡ್ಡಿ, ರೆಡ್ಡಪ್ಪ,  ಗುರುವಲ್ಲೋಳ್ಳಗಡ್ಡ ಮಂಜುನಾಥ್, ದಿಗವ ಚಿಂತಪಲ್ಲಿ ಯಲ್ಲಪ್ಪ, ವೆಂಕಟರೆಡ್ಡಿ ವೆಂಕಟರವಣ, ಸೇರ್ಪಡೆಗೊಂಡರು. 

  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮುತ್ತಪ್ಪ, ಮುಖಂಡರಾದ ದಿಗವ ಚಿಂತಪಲ್ಲಿ ವಿ.ನಾಗಬೋಷನ್, ಕೃಷ್ಣಾರೆಡ್ಡಿ, ಬಾಲಾವತಿ ಜಯರಾಂ, ಕೆ.ವಿ.ಶಿವಾರೆಡ್ಡಿ, ವೈ.ಆರ್.ಶ್ರೀನಿವಾಸರೆಡ್ಡಿ, ಸಿ.ಅಶೋಕ್, ವಿ.ನಾಗಭೂಷಣ್, ಅಜಮ್ ಖಾನ್, ಪೂಲ ಶಿವಾರೆಡ್ಡಿ, ಎಸ್.ಶೇಷಾದ್ರಿ, ಶ್ರೀನಿವಾಸರೆಡ್ಡಿ ಇದ್ದರು.