

ಕುಂದಾಪುರ :ಹಲವು ದಶಕಗಳ ಹಿಂದಿನ ಪುಟ್ಟ ವಿನಯಾ ನರ್ಸಿಂಗ್ ಹೋಮ್ ಇಂದು 100 ಬೆಡ್ ಗಳ ಆಸ್ಪತ್ರೆಯಾಗಿ ಬೆಳೆದು ನಿಂತಿದೆ 15ವರ್ಷಗಳ ಹಿಂದೆ ರೋಟರಿ ಕ್ಲಬ್ ಮೂಲಕ ನೀಡಲ್ಪಟ್ಟ ಒಂದು ಡಯಾಲಿಸಿಸ್ ಯಂತ್ರದಿಂದ ಆರಂಭಗೊಂಡು ಇದೀಗ ಹಿರಿಯ ಉದ್ಯಮಿ 95ರ ಹರೆಯದ ಎ. ಕೆ. ಅವರ ವಿಶಾಲ ಹೃದಯದಿಂದ ಅರ್ಪಿತಗೊಂಡ 2ಯಂತ್ರ ಗಳಿಂದ ಡಯಾಲಿಸಿಸ್ ಗಳ ಸಂಖ್ಯೆ 10ನ್ನು ತಲುಪಿದೆ ಇದು ರೋಗಿಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ದೊರೆತಂತಾಗಿದೆ ಎಂದು ವಿನಯಾ ಆಸ್ಪತ್ರೆಯ ಎಂ. ಡಿ. ಡಾ. ವಿಶ್ವನಾಥ್ ಶೆಟ್ಟಿ ಹೇಳಿದರು.ಅವರು ವಿನಯಾ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದ 15ನೇ ವರ್ಷಾಚರಣೆ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದರು.
ಕುಂದಾಪುರದ ಖ್ಯಾತ ಉದ್ಯಮಿ, ದಾನಿ, ಹಿರಿಯ ಮುಸ್ಲಿಂ ಸಮಾಜ ಧುರೀಣ ಹಾಜಿ ಅಬ್ದುಲ್ ಖಾದರ್ ಯೂಸುಫ್ ಸನ್ಮಾನ ಸ್ವೀಕರಿಸಿ ಮಾತನಾಡಿ “ಬಡವರಿಗೆ ನೀಡುವ ಪ್ರತಿಯೊಂದು ಸಹಾಯವೂ ದೇವರಿಂದ ಪ್ರತಿಫಲದ ರೂಪವಾಗಿ ನಿಮಗೆ ಹಿಂತಿರುಗಿ ಬಂದೆ ಬರುತ್ತದೆ ಆದರೆ ಅಪೇಕ್ಷೆ ಪಡಬಾರದು, ನಮ್ಮ ಕೊಡುಗೆ ಅಥವಾ ದಾನ ಒಂದು ಕೈಯಿಂದ ನೀಡಿದರೆ ಮತ್ತೊಂದು ಕೈಗೆ ತಿಳಿಯದಂತಿರ ಬೇಕು, ಮುಖ್ಯವಾಗಿ ಅಸಹಾಯಕ, ಆಶಕ್ತ ರೋಗಿಗಳ ಪಾಲಿಗೆ ನಾವು ಆಪತ್ ಬಂಧುವಿನಂತಿರಬೇಕು ಆ ನಿಟ್ಟಿನಲ್ಲಿ ಹಲವು ವರುಷಗಳ ಇತಿಹಾಸ ಹೊಂದಿರುವ ಕುಂದಾಪುರದ ಖ್ಯಾತ ವಿನಯಾ ಆಸ್ಪತ್ರೆ ಜನ ಮಾನಸದಲ್ಲಿ ಹಾಸು ಹೊಕ್ಕಾಗಿ ಸೇರಿ ಕೊಂಡಿದೆ. ಇಲ್ಲಿ ಆಳವಡಿಸಲಾಗಿರುವ ಡಯಾಲಿಸಿಸ್ ಯಂತ್ರಗಳು ರೋಗಿಗಳಲ್ಲೂ ಆಶಾ ಭಾವನೆಯನ್ನು ಮೂಡಿಸಿದೆ’ ಎಂದು ಹೇಳಿದರು.
ಇನ್ನೊರ್ವ ಸನ್ಮಾನಿತರಾದ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಮೂತ್ರ ಪಿಂಡ ತಜ್ಞ ಡಾ. ಇಸ್ತಿಯಾಕ್ ಮಾತನಾಡಿ, ಕುಂದಾಪುರದಂತಹ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಇಂತಹ ಯಂತ್ರಗಳ ತೀರಾ ಅವಶ್ಯಕತೆ ಇದೆ. ಹಿಂದೆ ತಪಾಸಣೆಗಾಗಿ ಮಣಿಪಾಲ, ಮಂಗಳೂರಿನ ಆಸ್ಪತ್ರೆಗಳಿಗೆ ರೋಗಿಗಳು ಧಾವಿಸಬೇಕಾಗಿತ್ತು. ಇದರಿಂದ ಸಮಯ, ಪ್ರಯಾಣದ ಆಯಾಸದ ಜತೆ ಹೆಚ್ಚಿನ ಖರ್ಚು ವೆಚ್ಚವನ್ನು ಸಹ ರೋಗಿಯು ಭರಿಸಬೇಕಾಗಿತ್ತು, ಹಾಗೆ ಈ ಯಂತ್ರಗಳನ್ನು ಆಳವಡಿಸುವುದು ಸುಲಭ ಆದರೆ ಅವುಗಳನ್ನು ನಿರ್ವಹಣೆ ಮಾಡುವುದು ತೀರಾ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ನುರಿತ ವೈದ್ಯರನ್ನು ಹೊಂದಿರುವ ವಿನಯಾ ಆಸ್ಪತ್ರೆಯ ತಂಡ ಅದನ್ನು ಯಶಸ್ವಿಯಾಗಿ ಸಾಧಿಸಿ ತೋರಿಸಿದೆ’ ಎಂದು ಹೇಳಿ ತಮಗೆ ಹಾಗೂ ತಮ್ಮ ತಂದೆಗೆ ಸನ್ಮಾನಿಸಿ ಗೌರವಿಸಿದ ಬಗ್ಗೆ ಕ್ರತಜ್ಞತೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಹೃದಯ ರೋಗ ತಜ್ಞ ಡಾ. ಕಿಶೋರ್ ಶೆಟ್ಟಿ, ರೋಟರಿ ದಕ್ಷಿಣದ ಮಾಜಿ ಅಧ್ಯಕ್ಷ ಶಾಂತರಾಮ್ ಪ್ರಭು, ಅರಿವಳಿಕೆ ತಜ್ಞ ಡಾ. ರಾಜ್ ಗೋಪಾಲ ಅಡಿಗ ಉಪಸ್ಥಿತರಿದ್ದರು. ಡಾ. ನಿಖಿಲ್ ಕುಮಾರ್ ರೈ, ಡಾ. ಕ್ರಷಬ್ ಶೆಟ್ಟಿ ಸನ್ಮಾನಿತರ ಪರಿಚಯ ನೀಡಿದರು. ಆಸ್ಪತ್ರೆಯ ಕಾರ್ಯನಿರ್ವಣಾಧಿಕಾರಿ ನಿರ್ವಹಿಸಿದರು ಡಯಾಲಿಸಿಸ್ ವಿಭಾಗದ ನಾಗರಾಜ್ ಪ್ರಸ್ತಾವಿಸಿದರು.


