ಗ್ರಾಮಸ್ಥರು ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಗ್ರಾಮಸ್ಥರು ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ತಾಲ್ಲೂಕಿನ ಬೀರಗಾನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೀರಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಸ್ಮಶಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಚರಂಡಿ ಹಾಗೂ ಶಾಲಾ ಕೊಠಡಿ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮದ ಇಬ್ಬರಿಗೆ ಪಡಿತರ ಚೀಟಿ ಸಮಸ್ಯೆ ಹಾಗೂ ಒಬ್ಬರಿಗೆ ಅಂಗವಿಕ ವೇತನದ ಸಮಸ್ಯೆ ಇರುವುದಾಗಿ ತಿಳಿಸಲಾಗಿದೆ. ಸಮಸ್ಯೆ ಪರಿಹರಿಸಲಾಗುವುದು. ಕಂದಾಯ ಇಲಾಖೆ ವತಿಯಿಂದ ಖಾತೆ, ವಿಭಾಗಪತ್ರ, ಪಹಣಿ ತಿದ್ದುಪಡಿಯಂಥ ಕೆಲಸ ಆಗಬೇಕಾಗಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲಾಗುವುದು. ಪಶುಪಾಲನಾ ಇಲಾಖೆ ವತಿಯಂದ ಗ್ರಾಮದ 42 ರಾಸುಗಳಿಗೆ ಚರ್ಮಗಂಟು ರೋಗ ನಿವಾರಕ ಲಸಿಕೆ ನೀಡಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷ ಮಂಜುನಾಥ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಎಂ.ಶ್ರೀನಿವಾಸನ್, ಡಾ. ಮಂಜುನಾಥರೆಡ್ಡಿ, ಮಂಜುನಾಥ್, ಅನ್ವರ್ ಸಾಬ್, ಕೃಷ್ಣಪ್ಪ, ಶಿವಕುಮಾರ್, ಲಿಖಿತಾ, ನಟೇಶ್, ಬಿ.ವಿ.ಮುನಿರೆಡ್ಡಿ, ಹರಿಪ್ರಸಾದ್, ಜನಾರ್ಧನ್, ವಿನೋದ್ ಸಾಕಮ್ಮ, ಭಾವನಾ, ಜಗದೀಶ್ ಕುಮಾರ್, ಹರಿಪ್ರಸಾದ್, ಮಂಜಣ್ಣ, ಬಲರಾಮಚಂದ್ರೇಗೌಡ, ಹರೀಶ್ ಕುಮಾರ್, ಸುರೇಶ್, ಪುಷ್ಪಲತಾ, ಕೃಷ್ಣಪ್ಪ, ಗೀತಮ್ಮ, ಜಗದೀಶ್ ನಾರಾಯಣಸ್ವಾಮಿ, ನಾಗರಾಜ್, ಆವಲಪ್ಪ ಮತ್ತಿತರರು ಇದ್ದರು.