ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಕೆಜಿಎಫ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ವಿಭಜನೆಯಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಸಹಕಾರ ಸಂಘಗಳ ಉಪ ನಿಬಂಧಕ ವೆಂಕಟೇಶ್ನನ್ನು ಕೂಡಲೇ ಸೇವೆಯಿಂದ ಅಮಾನತ್ತುಪಡಿಸಬೇಕು ಎಂದು ಆಗ್ರಹಿಸಿ ಶಾಸಕಿ ರೂಪಕಲಾ ಶಶಿಧರ್ ನೇತೃತ್ವದಲ್ಲಿ ಕೆಜಿಎಫ್ ತಾಲ್ಲೂಕು ರೈತರು, ಮಹಿಳೆಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಸಹಕಾರ ಸಂಘಳ ಉಪ ನಿಬಂಧಕರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು, ಮಹಿಳೆಯರು ರಾಜಕೀಯ ಪಕ್ಷದ ಏಜೆಂಟರಂತೆ ಉಪನಿಬಂಧಕ ವೆಂಕಟೇಶ್ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮಹಿಳೆಯರು, ಆಡಳಿತ ಪಕ್ಷದ ಬಿಜೆಪಿ ಮುಖಂಡರ ವಿರುದ್ಧ ಘೋಷಣೆ ಕೂಗಿದರು.
ಬಂಗಾರಪೇಟೆ ಟಿಎಪಿಸಿಎ.ಎಸ್ ನಿಂದ ವಿಭಜನೆಯಾಗಿ ಕೆ.ಜಿ.ಎಫ್ ಕ್ಷೇತ್ರಕ್ಕೆ ಪ್ರತ್ಯೇಕ ಟಿಎಪಿಸಿಎಂಎಸ್ ರಚನೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಪ್ರತ್ಯೇಕ ಮಾಡಲು ಅವಕಾಶ ನೀಡಿದೆ. ಆದರೆ ಉಪ ನಿಬಂಧಕರು ಕಾನೂನು ಪಾಲನೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಉಪನಿಬಂಧ ವೆಂಕಟೇಶ್ ಆಡಳಿತ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಹಕಾರ ಇಲಾಖೆ ಉಪ ನಿಬಂಧಕ ವೆಂಕಟೇಶ್ ಕಾನೂನು ಪಾಲನೆ ಮಾಡದೆ ಏಕ ಪಕ್ಷೀಯವಾಗಿ ಮಾಜಿ ಶಾಸಕ ಸಂಪಂಗಿರವರ ಮಗ ಪ್ರವೀಣ್ರನ್ನು ಚೀಫ್ ಪ್ರಮೋಟರ್ ಆಗಿ ನೇಮಿಸಿಕೊಂಡಿದ್ದಾರೆ. ಅವರೇನು ಇಲಾಖೆಯ ಬ್ರೋಕರ್ ಏಜು ಎಂದು ಪ್ರಶ್ನಿಸಿದರು.
ಯಾವುದೇ ನೊಟಿಫಿಕೇಷನ್ ಮಾಡದೆ, ಹಳೆ ಷೇರುದಾರರ ಸಭೆ ನಡೆಸದೆ ಹಾಗೂ ಹೊಸ ಷೇರುಗಳನ್ನು ಪಡೆದಂತೆ ತೋರಿಸಿ, ಸರ್ವಾಧಿಕಾರಿಯಂತೆ ನಡೆದುಕೊಳ್ಳಿತ್ತಿರುವ ಉಪನಿಬಂಧರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.
ಕೆಜಿಎಫ್ ತಾಲ್ಲೂಕಾಗಿ ರಚನೆಯಾದ ಮೇಲೆ ಹಂತಹಂತವಾಗಿ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಸಹಕಾರ ಸಂಘಗಳ ಉಪ ನಿಬಂಧಕರು ಆಡಳಿತ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರನ್ನು ಕತ್ತಲಲ್ಲಿಟ್ಟು ಅವರಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿಆರ್ ವೆಂಕಟೇಶ್ ಬರಬೇಕು ಎಂದು ಪಟ್ಟು ಹಿಡಿದರು. ಆದರೆ ಎರಡು-ಮೂರು ತಾಸು ಕಳೆದು ಹೊರ ಬಾರದ ಕಾರಣ ತಾಳ್ಮೆ ಕಳೆದುಕೊಂಡ ಪ್ರತಿಭಟನಾಕಾರರು ಕಚೇರಿಯೊಳಗೆ ನುಗ್ಗಿ ವೆಂಕಟೇಶ್ ನಾಮಫಲಕ ಹಾನಿಪಡಿಸಿ, ಕಚೇರಿಗೆ ಮುತ್ತಿಗೆ ಹಾಕಿದರು.
ಶಾಸಕ ರೂಪಶಶಿಧರ್ ಬೆಂಗಳೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಜೆ.ಆರ್.ಅಶ್ವಥ್ರವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಬೆಳಗಿನಿಂದಲೂ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಅವರ ಧೋರಣೆ ಏನು.?ಕೆ.ಜಿ.ಎಫ್ ಕ್ಷೇತ್ರದ ರೈತರೆಂದರೆ ಅವರಿಗೆ ಏಕೆ ಅಸಡ್ಡೆ ಎಂದು ಪ್ರಶ್ನಿಸಿದರು.
ಬೇಜವಾದ್ದಾರಿ ಡಿ.ಆರ್ ಸ್ಥಳಕ್ಕೆ ಆಗಮಿಸಿ ರೈತರಿಗೆ ಸಮಜಾಯಿಷಿ ನೀಡುವವರೆಗೆ ಸ್ಥಳ ಬಿಟ್ಟು ಹೋಗುವುದಿಲ್ಲ. ನಮ್ಮ ಕ್ಷೇತ್ರದ ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸಲಾಗುತ್ತದೆ. ಡಿಆರ್ ವೆಂಕಟೇಶ್ನನ್ನು ಸೇವೆಯಿಂದ ಅಮಾನತ್ತುಪಡಿಸಿ ರೈತರಿಗೆ ನ್ಯಾಯದೊರಕಿಸಿಕೊಡಬೇಕು ಎಂದು ತಾಕೀತು ಮಾಡಿದರು.
ಪ್ರಮೋಟರ್ನ್ನು ನೇಮಿಸಿರುವುದನ್ನು ರದ್ದು ಪಡಿಸಬೇಕು. ಕಾನೂನು ರೀತಿ ಷೇರು ಸಂಗ್ರಹಿಸ ಬೇಕು,ನೋಟಿಫಿಕೇಷನ್ ಮೂಲಕ ಎಲ್ಲಾ ಷೇರುದಾರರ ಸಲಹೆ ಪಡೆದು ಚೀಫ್ ಪ್ರಮೋಟರ್ನ್ನು ನೇಮಿಸಬೇಕು, ಡಿಆರ್ ರವರನ್ನು ಅಮಾನತ್ತು ಪಡಿಸಬೇಕು,ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ರಾಮಸಾಗರ ಶ್ರೀಧರ್ ರೆಡ್ಡಿ, ವಿಜಯ್ಶಂಕರ್, ವಿಜಯ ರಾಘವರೆಡ್ಡಿ, ಅಮು ಲಕ್ಷ್ಮೀನಾರಾಯಣ, ಪದ್ಮನಾಭ ರೆಡ್ಡಿ, ರಾಧಕೃಷ್ಣಾರೆಡ್ಡಿ, ಬಾಲಾಕೃಷ್ಣ, ಶ್ರೀಧರ್ರೆಡ್ಡಿ, ಪ್ರಸನ್ನ, ಚನ್ನಕೇಶವರೆಡ್ಡಿ ಸೇರಿದಂತೆ ಕೆಜಿಎಫ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರಾರು ಮಂದಿ ಪಾಲ್ಗೊಂಡಿದ್ದರು.
