ದೈಹಿಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸೆ.12ರೊಳಗೆ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ
ವಿಧಾನಪರಿಷತ್ ಸದಸ್ಯರು,ಸಂಘಟನೆ ಪದಾಧಿಕಾರಿಗಳ ಸಭೆ-ಡಾ.ವೈ.ಎ.ಎನ್ ಭರವಸೆ

ಕೋಲಾರ:- ದೈಹಿಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ವಿಧಾನ ಮಂಡಳದ ಅಧಿವೇಶನ ಆರಂಭವಾಗುವ ಸೆ.12 ರೊಳಗೆ ದೈಹಿಕ ಶಿಕ್ಷಕರ ಸಂಘದ ರಾಜ್ಯಪದಾಧಿಕಾರಿಗಳ ಸಮ್ಮುಖದಲ್ಲಿ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲಾ ವಿಧಾನಪರಿಷತ್ ಸದಸ್ಯರ ಸಭೆ ನಡೆಸಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ಶುಕ್ರವಾರ ಜಿಲ್ಲಾಡಳಿತ ಭವನದ ಮುಂಭಾಗ ರಾಜ್ಯ ದೈಹಿಕ ಶಿಕ್ಷಕರ ಸಂಘದಿಂದ ವೃಂದ ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಜಾರಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾಧ್ಯಕ್ಷ ವಿ.ಮುರಳಿಮೋಹನ್ ನೇತೃತ್ವದಲ್ಲಿ ನಗರ ಹೊರವಲಯದ ಜಿಲ್ಲಾಡಳಿತ ಭವನ ಎದುರು ಮನವಿ ನೀಡಿದ ಸಂದರ್ಭದಲ್ಲಿ ಶಿಕ್ಷಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ವೈ.ಎ.ಎನ್, ದೈಹಿಕ ಶಿಕ್ಷಕರ ಬೇಡಿಕೆ ವಿಚಾರವಾಗಿ ನೂರಕ್ಕೆ ನೂರರಷ್ಟು ನಿಮ್ಮ ಕಡೆ ನಾನಿದ್ದೇನೆ, ಕಳೆದ 20 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದೇನೆ. ಸುರೇಶ್ ಕುಮಾರ್ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಾನೇ ಅವರನ್ನು ವೈದ್ಯನಾಥನ್ ಅವರ ಮನೆಗೆ ಕರೆದುಕೊಂಡು ಹೋಗಿ, ಭೇಟಿ ಮಾಡಿಸಿ, ಸಲಹೆ ಕೊಡಿಸಿ ದೈಹಿಕ ಶಿಕ್ಷಣವನ್ನು ಯಾವ ರೀತಿ ಗಟ್ಟಿಗೊಳಿಸಬೇಕು. ದೈಹಿಕ ಶಿಕ್ಷಣದ ಸಮರ್ಪಕ ಬದಲಾವಣೆ ತರುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದನ್ನು ಚರ್ಚೆ ಮಾಡಿದ್ದೆ. ವೈದ್ಯನಾಥನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡಬೇಕು ಎಂದು ಒತ್ತಾಯ ಮಾಡುತ್ತಿರುವುದೇ ನಾವು ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಗಳಾದ ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಯೋಗಾಥಾನ್ ಹಾಗೂ ಯೋಗ ದಿವಸ್ ಇವೆಲ್ಲಾ ದೈಹಿಕ ಶಿಕ್ಷಣದ ಮೇಲೆ ಒಳಪಟ್ಟಿದೆ. ಈ ಯೋಜನೆಯೆಲ್ಲ ಯಶಸ್ವಿಯಾಗಲು ಕಾರಣಕರ್ತರೇ ದೈಹಿಕ ಶಿಕ್ಷಕರು. ಈ ನಿಟ್ಟಿನಲ್ಲಿ ಪ್ರತಿ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇರಲೇಬೇಕು. ಮಕ್ಕಳ ಸಂಖ್ಯೆ ಕಡಿಮೆ ಇದೆ ನೂರು ಸಂಖ್ಯೆಇದ್ದರೆ ಮಾತ್ರ ದೈಹಿಕ ಶಿಕ್ಷಕರು ಇರಬೇಕು ಈ ರೀತಿ ಆದೇಶಗಳು ಸರಿ ಹೋಗುವುದಿಲ್ಲ. ಎಷ್ಟೇ ಸಂಖ್ಯೆ ಮಕ್ಕಳಿದ್ದರೂ ದೈಹಿಕ ಶಿಕ್ಷಣ ಪ್ರತಿ ಮಕ್ಕಳಿಗೂ ಮುಖ್ಯವೆಂದರು.
ದೈಹಿಕ ಶಿಕ್ಷಕರನ್ನು ಹೆಡ್ ಮಾಸ್ಟರ್ ಮಾಡಿಸಿ, ಆ ಸ್ಥಾನದಲ್ಲಿ ಕೂರಿಸಬೇಕು. ಈಗಾಗಲೇ ಪ್ರಭಾರ ವ್ಯವಸ್ಥೆ ಮಾಡಿಕೊಟ್ಟಿದೆ. ನಿಮ್ಮ ಸಂಘಗಳು ಇತರೆ ವಿಷಯಗಳ ಗೊಂದಲದಿಂದ ಹಿಂದೆ ಉಳಿದಿದ್ದೇವೆ. ಪ್ರಭಾರವನ್ನು ಕೊಡಬಾರದು ಎಂಬ ಡಿಪಿಐಯವರು ಮೊದಲು ಆದೇಶವನ್ನು ವಾಪಸ್ಸು ಪಡೆಯುವಂತೆ ಗಲಾಟೆ ಮಾಡಿಸಿ ಮುಂದುವರಿಸಲಾಗಿದೆ. ಹೆಡ್ ಮಾಸ್ಟರ್ ಪ್ರಕ್ರಿಯೆಯನ್ನು ಪ್ರತಿಪಾದಿಸಿ, ಪಿಯು ಕಾಲೇಜಿನ ಉಪನ್ಯಾಸಕರ 120 ಹುದ್ದೆಗಳನ್ನು ತುಂಬಿಸುವುದು, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರಮೋಷನ್ ಪ್ರಕ್ರಿಯೆಯನ್ನು ಸರ್ಕಾರದ ಮೇಲೆ ಒತ್ತಡ ತಂದು ಮಾಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸೆ.12 ರಿಂದ ಸದನ ಆರಂಭವಾಗುತ್ತದೆ, ಅಷ್ಟರೊಳಗೆ ದೈಹಿಕ ಶಿಕ್ಷಕರ ರಾಜ್ಯಮಟ್ಟದ ಪದಾಧಿಕಾರಿಗಳನ್ನು ಸೇರಿಸಿ, ಎಲ್ಲಾ ಎಂಎಲ್‍ಸಿಗಳನ್ನು ಕರೆಸಿ, ಶಿಕ್ಷಣ ಸಚಿವರನ್ನು ಆಹ್ವಾನಿಸಿ, ಒಂದು ಮುಕ್ತ ಸಭೆಯನ್ನು ಆಯೋಜನೆ ಮಾಡುತ್ತೇನೆ. ಆ ಸಭೆಯಲ್ಲಿ ನೀವೆಲ್ಲರೂ ಮಾತನಾಡುವ ಅವಕಾಶವನ್ನು ನೀಡಲಾಗುತ್ತದೆ ನೀವು ಮುಕ್ತವಾಗಿ ನಿಮ್ಮ ಕಷ್ಟ ನೋವುಗಳನ್ನು ಅಲ್ಲಿ ಹೇಳಿಕೊಳ್ಳಬಹುದು ಎಂದು ನುಡಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಬಿಇಒ ಕನ್ನಯ್ಯ, ಸಂಘಟನೆ ಮುಖಂಡರಾದ ವೆಂಕಟೇಶಪ್ಪ, ನಾಗರಾಜ್, ಮಂಜುನಾಥ್,ಅಬ್ದುಲ್ ಮಾನ್ಸರ್, ವಿನೋದ್ ಬಾಬು, ಸಂತೋಷ್, ಶ್ರೀನಿವಾಸ್, ಡಾ.ಶ್ರೀನಿವಾಸ್, ನಾರಾಯಣಸ್ವಾಮಿ, ನಾಗರಾಜ್ ವೆಂಕಟಸ್ವಾಮಿ, ಶಶಿಕಲಾ, ಅಂಬಿಕಾ,ಲೀಲಾ ಮತ್ತಿತರರಿದ್ದರು.