ಉಡುಪಿ : ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಯ ವಿಭಾಗ ಮುಖ್ಯಸ್ಥರಿಗೆ ಉದ್ಯಾವರದಲ್ಲಿ ಸನ್ಮಾನ

ವರದಿ: ಸ್ಟೀವನ್  ಕುಲಾಸೊ

ಉಡುಪಿ : ಉದ್ಯಾವರದ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಪ್ರಸ್ತುತ ಪ್ರತಿಷ್ಠಿತ ಮಂಗಳೂರಿನ ಪ್ರಖ್ಯಾತ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಯ ವಿಭಾಗ (ಡೀನ್) ಮುಖ್ಯಸ್ಥರಾಗಿರುವ ಡಾ. ಉರ್ಬನ್ ಡಿಸೋಜರವರಿಗೆ ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಐಸಿವೈಎಂ ಉದ್ಯಾವರ ಸುವರ್ಣಮಹೋತ್ಸವ ರಂಗಮಂದಿರದಲ್ಲಿ ಇತ್ತೀಚೆಗೆ ಗೌರವಿಸಿ ಸನ್ಮಾನಿಸಲಾಯಿತು.
ನಿರಂತರ್ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ ನಡೆದ ನಿರಂತರ್ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಉದ್ಯಾವರದ ಅಂಕುದ್ರು ನಿವಾಸಿಯಾಗಿರುವ ಇವರು ಉನ್ನತ ಶಿಕ್ಷಣ ಪಡೆದು ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಯ ವಿಭಾಗ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮಾತ್ರವಲ್ಲದೆ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಉರ್ಬನ್ ಡಿಸೋಜ, ಈ ಸನ್ಮಾನದ ಮೂಲಕ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಯಾವ ಸಂದರ್ಭದಲ್ಲೂ ನನ್ನಿಂದ ಸಹಾಯ ಬೇಕಾದಲ್ಲಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸ್ಥಳೀಯ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ ಲೋಬೊ, ಫಾ. ಆಲ್ವಿನ್ ಸೆರಾವೊ, ಉದ್ಯಮಿ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಸ್ಥಾಪಕ ಅಧ್ಯಕ್ಷ ಲ. ಹೆನ್ರಿ ಡಿಸೋಜ, ನಿರಂತರ ಉದ್ಯಾವರ ಸಂಸ್ಥೆಯ ರೊನಾಲ್ಡ್ ಡಿಸೋಜ, ಸವಿತಾ ಡಿಸೋಜಾ, ಒಲಿವಿರಾ ಮಥಾಯಸ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಉದ್ಯಾವರ ಅಧ್ಯಕ್ಷ ಸ್ಟೀವನ್ ಕುಲಾಸೋ ಸ್ವಾಗತಿಸಿದರೆ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ವಂದಿಸಿದರು. ಮೈಕಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು