23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿ.ಜೆ.ಎಂ.ಎಲ್ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ ; ಲಿಂಬಾವಳಿ

ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪು

ಕೋಲಾರ : 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿ.ಜೆ.ಎಂ.ಎಲ್ ಆಸ್ಪತ್ರೆಯನ್ನು ಇಂದು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ . ಇದರಿಂದ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯಲು ತುಂಬಾ ಅನುಕೂಲವಾಗುತ್ತದೆ . ಡಾಕ್ಟರ್ , ಆರೋಗ್ಯ ಸಿಬ್ಬಂದಿ , ಔಷಧಿ ಯಾವುದೇ ಕೊರತೆಯಾಗದಂತೆ ನಾಳೆಯಿಂದ ಆಸ್ಪತ್ರೆಯು ಕಾರ್ಯ ನಿರ್ವಹಿಸಲಿದೆ ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ್ ಲಿಂಬಾವಳಿ ಅವರು ತಿಳಿಸಿದರು , ಇಂದು ಕೆಜಿಎಫ್ ನಗರದ ಬಿ.ಜಿ.ಎಂ.ಎಲ್ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅವರು , ಆಸ್ಪತ್ರೆಯಲ್ಲಿನ ಬೆಡ್ ವ್ಯವಸ್ಥೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು . ಸರ್ಕಾರ ಮತ್ತು ಸ್ವಯಂಸೇವಕ ಡಾಕ್ಟರ್‌ಗಳು ಕೆಲಸ ಮಾಡುತ್ತಾರೆ . ಅವರಿಗೆ ಸರ್ಕಾರ ಗೌರವಧನವನ್ನು ನೀಡುತ್ತದೆ . ಆಸ್ಪತ್ರೆಯಲ್ಲಿ ಪ್ರಾರಂಭಿಕವಾಗಿ 250 ಹಾಸಿಗೆಗಳನ್ನು ಹಾಕಲಾಗಿದೆ . ಮುಂದಿನ ದಿನಗಳಲ್ಲಿ ಹೆಚ್ಚು ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಿ , ಆಕ್ಸಿಜನ್ ಪ್ಲಾಂಟ್‌ನ್ನು ಸಹ ನಿರ್ಮಿಸಲಾಗುತ್ತದೆ ಎಂದು ಹೇಳಿದರು . ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಆಸ್ಪತ್ರೆಯ ಮೂಲಭೂತ ಸೌಕರ್ಯಗಳು ಮತ್ತು ಸ್ವಚ್ಛತಾ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಚಿವರಿಗೆ ನೀಡಿದರು . ಇದಕ್ಕೂ ಮುನ್ನಾ ಕೆ.ಜಿ.ಎಫ್ ತಾಲ್ಲೂಕು ಆಸ್ಪತ್ರೆಯಲ್ಲಿ 100 ಹಾಸಿಗೆಗಳಿಗೆ ಆಗುವಷ್ಟು ಆಮ್ಲಜನಕ ಪೂರೈಸುವ ಉನ್ನತೀಕರಿಸಿದ ಆಮ್ಲಜನಕ ಪೂರೈಕೆ ಘಟಕವನ್ನು ಸಚಿವರು ಉದ್ಘಾಟಿಸಿದರು . ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ ! ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ. ನಾಗರಾಜ್ , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ.